PLACE YOUR AD HERE AT LOWEST PRICE
ಇಂದಿನ ನಿಮ್ಮ ದೇಶದ ಯುವ ಜನತೆಯ ಆರೋಗ್ಯ ಹೇಗಿದೆ ಎಂದು ಹೇಳಿ ನಾಳೆಯ ನಿಮ್ಮ ದೇಶದ ಸ್ಥಾನಮಾನ ಹೇಗಿರುತ್ತದೆ ಎಂದು ನಾನು ಹೇಳುತ್ತೇನೆ ಎಂದು ಹೇಳಿದ ಮಹಾನ್ ದಾರ್ಶನಿಕ ಸ್ವಾಮಿ ವಿವೇಕಾನಂದರಾಗಿದ್ದು, ಅವರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ ಎಂದು 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಹೇಳಿದರು.
ಅವರು ಕೆಜಿಎಫ್ಗ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕೆಜಿಎಫ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ
ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
1985ರಿಂದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತಿದ್ದು, ಇಂದಿನ ದೇಶದ ಯುವ ಜನತೆಯೇ ಇವತ್ತಿನ ದೇಶದ ಬೆನ್ನೆಲುಬಾಗಿದ್ದಾರೆ ಎಂದರೆ ತಪ್ಪಾಗಲಾರದು ಎಂದರು.
1893ರ ಸೆಪ್ಟಂಬರ್ 11 ರಂದು ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ನಮ್ಮ ದೇಶದ ಭವ್ಯ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ದಿನವಾಗಿದ್ದು, ಅಲ್ಲಿಯವರೆಗೆ ಭಾರತದ ಬಗ್ಗೆ ಅಸಡ್ಡೆ ತೋರುತ್ತಿದ್ದ ಪಾಶ್ಚ್ಯಾತ್ಯ ರಾಷ್ಟ್ರಗಳು ತಿರುಗಿ ನೋಡುವಂತಾಯಿತು.
ನಾಳಿನ ನಮ್ಮ ದೇಶದ ಭವಿಷ್ಯ ಮತ್ತು ವರ್ತಮಾನ ಎರಡೂ ಯುವ ಜನತೆಯ ಕೈಯಲ್ಲಿದ್ದು, ಅದನ್ನು ಹಾಳು ಮಾಡುವುದೂ, ಒಳ್ಳೆಯ ದಿಕ್ಕಿನತ್ತ ಕೊಂಡೊಯ್ಯುವ ಶಕ್ತಿ ನಿಮ್ಮಲ್ಲಿ ಮಾತ್ರ ಇದೆ.
ಮನುಷ್ಯನಿಗೆ ಯಾವಾಗಲೂ ಎರಡು ಮುಖಗಳಿರುತ್ತವೆ. ಒಂದು ಒಳಗಿನ ಮುಖ ಮತ್ತೊಂದು ಹೊರಗಿನ ಮುಖ. ಎಲ್ಲಿಯವರೆಗೆ ನಾವು ಒಳಗಿನ ಮಾತುಗಳನ್ನು ಕೇಳುತ್ತಿರುತ್ತೇವೆಯೋ ಅಲ್ಲಿಯವರೆಗೆ ನಾವು ಒಳ್ಳೆಯವರಾಗಿರುತ್ತೇವೆ.
ನಾವು ಮಾಡುವ ಪ್ರತಿಯೊಂದು ಕೆಲಸ ಒಳ್ಳೆಯದ್ದಾ? ಕೆಟ್ಟದ್ದಾ? ಎಂಬುದು ಹೊರಗಿನವರಿಗೆ ಗೊತ್ತಿರುವುದಿಲ್ಲ.ಆದರೆ ಒಳಗಿನ ನಮ್ಮ ಮನಸ್ಸಿಗೆ ಗೊತ್ತಿರುತ್ತದೆ.
ಒಬ್ಬ ವ್ಯಕ್ತಿಯ ಅತ್ಯುತ್ತಮ ನ್ಯಾಯಾಧೀಶ ಯಾರು ಎಂಬ ಪ್ರಶ್ನೆಗೆ ಅವರ ಅಂತರಾತ್ಮವೇ ಹೊರತೂ ಬೇರಾರು ಅಲ್ಲವಾದ್ದರಿಂದ ಯಾವುದೇ ಕಾರಣಕ್ಕೂ ಬೇರೆಯವರ ಮಾತುಗಳಿಗೆ ಕಿವಿಗೊಡದೇ ಅಂತರಾತ್ಮದ ಮಾತುಗಳಿಗೆ ಬೆಲೆ ಕೊಡಬೇಕು ಎಂದರು.
ಒಂದು ದೇಶ ಕಟ್ಟುವಂತಹ ಕೆಲಸವಾಗಬೇಕಾದರೆ ಆ ದೇಶದ ಯುವ ಪೀಳಿಗೆ ಸದೃಢವಾಗಿರಬೇಕು. ಯುವ ಪೀಳಿಗೆ ಸದೃಢವಾಗಿದ್ದಲ್ಲಿ, ಆ ದೇಶ ಸದೃಢವಾಗಿರಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು, ಅವರ ಮಾತುಗಳನ್ನು ಪಾಲಿಸಿದಲ್ಲಿ ದೇಶವನ್ನು ಸದೃಢವಾಗಿ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಮಹೇಶ ಎಸ್ ಪಾಟೀಲ, ಜೆಎಂಎಫ್ಸಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಮಂಜುನಾಥ್, ತಹಸೀಲ್ದಾರ್ ಸುಜಾತ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೃಷ್ಣಮೂರ್ತಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ, ಉಪಾಧ್ಯಕ್ಷ ಮಣಿವಣ್ಣನ್ ಮೊದಲಾದವರಿದ್ದರು.