PLACE YOUR AD HERE AT LOWEST PRICE
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಂಟೆಲಿಜೆನ್ಸಿ ವಿಭಾಗದಲ್ಲಿ ಎಸ್ಪಿಯಾಗಿದ್ದ ಎಂ.ನಾರಾಯಣ ಶುಕ್ರವಾರ ಸಂಜೆ ನಿರ್ಗಮಿತ ಎಸ್ಪಿ ಡಿ.ದೇವರಾಜ್ರಿಂದ ಅಧಿಕಾರ ಸ್ವೀಕರಿಸಿದರು.
ಕೋಲಾರಕ್ಕೆ ಒಂದು ವರ್ಷದ ಹಿಂದಷ್ಟೆ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿದ್ದ ಡಿ.ದೇವರಾಜ್ ಸ್ಥಾನಕ್ಕೆ ಅವರನ್ನು ಸರಕಾರ ವರ್ಗಾವಣೆ ಮಾಡಿದೆ.
ಎಸ್ಪಿ ಡಿ.ದೇವರಾಜ್ ಸ್ಥಳೀಯರೇ ಆಗಿದ್ದು, ಒಂದು ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದರು. ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದು, ಜಿಲ್ಲೆಯಲ್ಲಿ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಹೆಸರು ಗಳಿಸಿದ್ದರು.
ಒಂದು ಕಾಲದಲ್ಲಿ ಕೋಲಾರ ಜಿಲ್ಲೆ ಎಂದರೆ ಮೀಟರ್ ಬಡ್ಡಿ ದಂಧೆಗೆ ತಾಣ ಎಂಬಂತಿದ್ದ ಕೆಟ್ಟ ಹೆಸರನ್ನು ಅಳಸಿ ಹಾಕುವ ಮೂಲಕ ಬಡ್ಡಿ ದಂಧೆಕೋರರಲ್ಲಿ ನಡುಕ ಮೂಡಿಸಿದ್ದರು.
ಜತೆಗೆ ಕೋಲಾರ ಜಿಲ್ಲೆಯ ಅಭಿವೃದ್ದಿಯ ಕನಸು ಹೊಂದಿದ್ದ ಅವರು, ಸಿಎಸ್ಆರ್ ನಿಧಿಯನ್ನು ವಿವಿಧ ಕಂಪನಿಗಳು, ಸ್ನೇಹಿತರಿಂದ ತರಿಸಿ ನಗರದಲ್ಲಿ ಬಾಲಕಿಯರ ಪಿಯು ಕಾಲೇಜಿಗೆ ಮೂಲಸೌಲಭ್ಯ ಒದಗಿಸಿದ್ದರು.
‘ನಮ್ಮ ಕೋಲಾರ ನಮ್ಮ ಹೆಮ್ಮೆ’ ಘೋಷಣೆಯ ಮೂಲಕ ನಗರದ ಬಾಲಕರ ಪದವಿ ಕಾಲೇಜಿಗೆ ಅತ್ಯಂತ ಸುಂದರ ಕಾಂಪೌಂಡ್ ನಿರ್ಮಿಸುವಂತೆ ಮಾಡಿಸಿ ಜಿಲ್ಲೆಯ ಯುವಕರು,ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು ಜತೆಗೆ ವೇಮಗಲ್ ಠಾಣೆ, ಸಂಚಾರಿ ಠಾಣೆ ಸುಸಜ್ಜಿತ ಕಟ್ಟಡಗಳ ನಿರ್ಮಾಣ, ಕೋಲಾರ ನಗರ ಠಾಣೆ ಅಭಿವೃದ್ದಿ ಮತ್ತಿತರ ಕಾರ್ಯಗಳಿಂದ ಜಿಲ್ಲೆಯಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕೋಲಾರದಲ್ಲಿ ಯುಗಾದಿ ಸಂಭ್ರಮ ಅತ್ಯಂತ ಅದ್ದೂರಿ ಕಾರ್ಯಕ್ರಮ ನಡೆಸುವ ಮೂಲಕ ಜಿಲ್ಲೆಯ ಜನತೆಯ ಹೃದಯ ಗೆದ್ದಿದ್ದರು.