PLACE YOUR AD HERE AT LOWEST PRICE
ಮಗ್ಗದವರ ಕುಟುಂಬಗಳ ಒಳಿತು ಹಾಗೂ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಮಗ್ಗದವರ ಸಂಘ ಸ್ಥಾಪಿಸಲಾಗಿದೆ ಎಂದು ರಾಜ್ಯ ಘಟಕ ಅಧ್ಯಕ್ಷ ಎಸ್.ವಿ.ಯೋಗೇಶಣ್ಣ ಅವರು ತಿಳಿಸಿದರು.
ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಸಮೀಪದ ಶಿವಶನೇಶ್ವರ ದೇಗುಲದ ಧ್ಯಾನ ಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಮಗ್ಗದವರ ಸಂಘದ ಸಭೆಯಲ್ಲಿ ಮಾತನಾಡಿದ ಅವರು ನಾವು ಯಾವುದೇ ಜನ ಹಾಗೂ ಸಂಘದ ವಿರುದ್ಧವಾಗಿ ಸಂಘ ಕಟ್ಟಿಲ್ಲ. ನಮ್ಮ ಜನರ ಏಳಿಗೆ, ಹಿತರಕ್ಷಣೆ ಮಾಡುವ ಸಲುವಾಗಿ ಸಂಘಟನೆ ಬಲಗೊಳಿಸಲಾಗುತ್ತಿದೆ ಎಂದರು.
ನಾವೆಲ್ಲ ದಲಿತರು. ದಲಿತರ ನ್ಯಾಯಸಮ್ಮತ ಹೋರಾಟ, ಚಟುವಟಿಕೆಗಳಲ್ಲಿ ಭಾಗವಹಿಸುತ್ತೇವೆ. ಜತೆ ಜತೆಗೆ ನಮ್ಮ ಮಗ್ಗದ ಕುಟುಂಬವನ್ನು ಬೆಳೆಸುವ ಮಹದಾಸೆ ನಮ್ಮದಾಗಿದೆ. ಅದಕ್ಕಾಗಿ ಅಂಗ ಸಂಘಟನೆ ಕಟ್ಟುತ್ತಿದ್ದೇವೆಯೆ ಹೊರತು ಪ್ರತ್ಯೇಕ ಸಂಘಟನೆಯಲ್ಲ ಎಂದು ಸ್ಪಷ್ಟನೆ ನೀಡಿದರು.
ಜನರ ಮಾನ ಮುಚ್ಚುವ ಬಟ್ಟೆ ನೇಯುವ ಕಸಬು ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆಯಾಗಿದೆ. ಮಗ್ಗದವರು ಒಗ್ಗೂಡಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಬೇಕು ಎಂದು ಮತ್ತೋರ್ವ ಮುಖಂಡ ಮುನಿಕೃಷ್ಣಪ್ಪ ಅಭಿಪ್ರಾಯಪಟ್ಟರು.
ಸಮುದಾಯದ ಜನರು ಎಲ್ಲೇ ಇರಲಿ ಸಂಘಕ್ಕೆ ಸೇರಬೇಕು. ಎಲ್ಲರೂ ಒಗ್ಗೂಡಿದರೆ ಮಾತ್ರ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯ. ಸಮುದಾಯದ ಜನರು ರಕ್ಷಣೆಗೆ ಸಂಘ ಬದ್ದವಾಗಿದೆ ಎಂದರು.
ಇದೇ ವೇಳೆ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಶಿವಶನೇಶ್ವರ ದೇಗುಲದ ಪೀಠಾಧಿಪತಿ ಮುನೇಶ್ವರ ಸ್ವಾಮೀಜಿ, ಸಂಘದ ಉಪಾಧ್ಯಕ್ಷ ಗಣಗಳೋರ್ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಎಂ.ದಯಾನಂದ, ಖಜಾಂಚಿ ವಿ.ಮಹೇಶ್, ಅಂಬೇಡ್ಕರ್ ನಿಗಮದ ಮಾಜಿ ಅಧ್ಯಕ್ಷ ಸಿ.ಮುನಿಕೃಷ್ಣಪ್ಪ, ಹಿರಿಯ ಮಾರ್ಗದರ್ಶಕ ಲಯನ್ ಮುನಿಕೃಷ್ಣಪ್ಪ, ನಲ್ಲೂರಳ್ಳಿ ಎಂ.ಮಾರಣ್ಣ, ಮುತ್ತುಕರ್ ಮುನಿರಾಜು, ಆಂಧ್ರಪ್ರದೇಶದ ಸಮಾಜ ಸೇವಕ ಕೆ.ಪಿ.ಮಲ್ಲಪ್ಪ, ಹಿರಿಯ ಮುಖಂಡರಾದ ಚೆನ್ನಿಗರಾಯನಪುರದ ಚೌಡಪ್ಪ, ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ವಿಜಿಕುಮಾರ್, ಅಹಿಂದವಾಣಿ ಪತ್ರಿಕೆ ಸಂಪಾದಕ ಡಿ.ಟಿ.ಮಂಜುನಾಥ್ ಇದ್ದರು.