PLACE YOUR AD HERE AT LOWEST PRICE
ಬಂಗಾರಪೇಟೆ ತಾಲ್ಲೂಕಿನ ಯಳೇಸಂದ್ರ ಗ್ರಾಪಂ ವ್ಯಾಪ್ತಿಯ ಕದರಿಪುರ ಗ್ರಾಮದ ಅಜ್ಮಲ್ ಹಾಗೂ ಕುಟುಂಬಸ್ಥರು ಪಕ್ಕದ ಅತ್ತಿಗಿರಿ ಗ್ರಾಮದ ವೆಂಕಟಾಚಲಪತಿ ಹಾಗೂ ಅವರ ಮಗ ಪ್ರಸನ್ನ ಕುಮಾರ್ ಮೇಲೆ ಜಮೀನು ತಕರಾರು ವಿಚಾರದಲ್ಲಿ ಕಲ್ಲಿನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಜಮೀನಿನಲ್ಲಿ ಅಕ್ರಮ ಪ್ರವೇಶದ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎನ್ನಲಾಗಿದ್ದು, ಹಲ್ಲೆಗೊಳಗಾದ ವೆಂಕಟಾಚಲಪತಿರ ತಲೆಗೆ ದೊಡ್ಡಮಟ್ಟದ ಏಟು ಬಿದ್ದಿದ್ದು ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಮಗ ಪ್ರಸನ್ನ ಕುಮಾರ್ ಗೆ ಕೇ ಮತ್ತು ಕತ್ತಿಗೆ ಪೆಟ್ಟಾಗಿದ್ದು ಅವರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಕರಾರು ಇರುವ ಜಮೀನು ಕುರಿತು ತಹಸೀಲ್ದಾರ್ ರವರು ದಾಖಲಾತಿಗಳನ್ನು ಪರಿಶೀಲಿಸಿ ಸರ್ವೇ ಮಾಡಿಸಿ ಜಮೀನು ಗುರ್ತಿಸಿಕೊಡುವವರೆಗೂ ತಕರಾರುದಾರರು ಯಾರೂ ಸಹ ತಕರಾರು ಜಮೀನಿನ ಒಳ ಪ್ರವೇಶ ಮಾಡುವಂತಿಲ್ಲ ಹಾಗೂ ಸಾಗುವಳಿ ಮಾಡುವಂತಿಲ್ಲ ಎಂದು ಆದೇಶ ಮಾಡಿದ್ದರು.
ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರು ಸಮಸ್ಯೆ ಇತ್ಯಾರ್ಥವಾಗುವ ವರೆಗೂ ಜಮೀನು ಪ್ರವೇಶ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಲಾಗಿದೆ. ಆದರೆ ಅಜ್ಮಲ್ ಹಾಗೂ ಕುಟುಂಬಸ್ಥರು ತಕರಾರು ಇರುವ ಜಮೀನು ಪ್ರವೇಶ ಮಾಡಿ ಆಲೂಗಡ್ಡೆ ಬೆಳೆ ಸಾಗುವಳಿ ಮಾಡುತ್ತೀದ್ದರು.
ಇದನ್ನು ಗಮನಿಸಿ ಕೇಳಲು ಹೋದಾಗ ನನ್ನ ತಂದೆ ವೆಂಕಟಾಚಲಪತಿ ಮತ್ತು ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ. ನನ್ನ ಮತ್ತು ನನ್ನ ತಂದೆಯ ಮೇಲೆ ಕಲ್ಲುಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಈ ಜಮೀನು ತಕರಾರು ವಿಚಾರದಲ್ಲಿ ಬೂದಿಕೋಟೆ ಪೊಲೀಸ್ ಠಾಣೆಯ ಪೊಲೀಸರ ನಡೆಯ ಕುರಿತು ಸಂಶಯ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.