PLACE YOUR AD HERE AT LOWEST PRICE
೧೨ನೇ ಶತಮಾನದ ವಚನಕಾರರ ಬದುಕಿನಲ್ಲಿ ಸಾತ್ವಿಕತೆ, ಸತ್ಯ, ಶುದ್ಧ ಕಾಯಕವನ್ನು ಅಳವಡಿಸಿಕೊಂಡು, ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯವೆಂದು ತೋರಿಸಿಕೊಟ್ಟ ಮಡಿವಾಳ ಮಾಚಿದೇವರಂತಹ ನಿಜಶರಣರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಕರೆ ನೀಡಿದರು.
ಇಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರ ಅಗ್ರಮಾನ್ಯ ಬಳಗದಲ್ಲಿ ಮಡಿವಾಳ ಮಾಚಿದೇವರು ಅಗ್ರಗಣ್ಯರು. ಸಮಾಜದಲ್ಲಿ ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಯ ವಿರುದ್ಧ ಧ್ವನಿಯೆತ್ತಿದ ಮಹಾಪುರುಷ. ಸರ್ವರಿಗೂ ಸಮಪಾಲು, ಸಮಬಾಳು ಒದಗಿಸಲು ಬಸವ-ಮಾಚಿದೇವ ಶರಣರು ಸಾಮಾಜಿಕ ಕ್ರಾಂತಿಯನ್ನು ಕೈಗೊಂಡರು ಎಂದರು.
ಮಡಿವಾಳ ಸಮುದಾಯ ಹಿಂದುಳಿದ ಸಮುದಾಯವಾಗಿದ್ದು, ೨ಎ ಕ್ಯಾಟಗಿರಿಗೆ ಸೇರಿದೆ, ಇದೀಗ ಕೆಲವು ಪ್ರಬಲ ಜಾತಿಗಳು ತಮ್ಮ ಜಾತಿಯನ್ನೂ ೨ಎ ಗುಂಪಿಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಇದರಿಂದ ಇರುವ ಮೀಸಲಾತಿ ದೊಡ್ಡ ಸಮುದಾಯಗಳ ಪಾಲಾಗುವ ಸಾಧ್ಯತೆ ಇದೆ.
ಈ ರೀತಿಯ ಅನ್ಯಾಯವಾಗದಂತೆ ಮಡಿವಾಳ ಸಮುದಾಯ ಎಚ್ಚೆತ್ತುಕೊಳ್ಳಬೇಕು. ಒಂದು ವೇಳೆ ಸರ್ಕಾರ ಅಂತಹ ಒಂದು ನಿರ್ಧಾರಕ್ಕೆ ಮುಂದಾದರೆ ನಾನು ಶಾಸನ ಸಭೆಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ತಿಳಿಸಿದರು.
ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ ಮಾತನಾಡಿ, ವಚನಕಾರರ ಅಗ್ರಮಾನ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡು ಬರುವ ನಿಜ ಶರಣರು. ಇವರ ತತ್ವ ಆದರ್ಶಗಳನ್ನು ಪಾಲಿಸಿ, ಕಾಯಕ, ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್ ಅವರು ಮಾತನಾಡಿ, ಮಡಿವಾಳ ಮಾಚಿದೇವ ಅವರ ವಚನಗಳನ್ನು ಮತ್ತು ಮಾರ್ಗದರ್ಶನಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಯಬೇಕು. ಮುಂದಿನ ಪೀಳಿಗೆಗಳಿಗೆ ಈ ವಚನದ ಮಾರ್ಗದರ್ಶಗಳನ್ನು ಸಾರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎನ್.ಆರ್.ಜ್ಞಾನಮೂರ್ತಿ ರವರು ಮಡಿವಾಳ ಮಾಚಿದೇವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸರೆಡ್ಡಿ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಂ.ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ರಂಗನಾಥ್.ಟಿ.ಕೆ, ಮಡಿವಾಳ ಸಮಾಜದ ನೌಕರ ಸಂಘದ ಅಧ್ಯಕ್ಷರಾದ ವಿ.ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.