PLACE YOUR AD HERE AT LOWEST PRICE
ಬೇತಮಂಗಲ:ಶಿಕ್ಷಣ ಇಲಾಖೆಯ ಡಿಡಿಪಿಯು ರಾಮಚಂದ್ರಪ್ಪ ಗ್ರಾಮದ ಗ್ರಾಮೀಣ ಪ್ರೌಢ ಶಾಲೆ ಹಾಗೂ ಗ್ರಾಮೀಣ ಸಂಯುಕ್ತ ಪಧವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಪ್ರೌಢ ಶಾಲೆಗೆ ತನ್ನದೆ ಆದ ಇತಿಹಾಸ ಇದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರೂ ವಿದ್ಯಾರ್ಥಿಗಳು ಉನ್ನತ ಮಟ್ಟದ ಉದ್ಯೋಗದಲ್ಲಿ ಹಾಗೂ ವಿದೇಶಗಳಲ್ಲಿಯೂ ಸಹ ಇರುವುದು ಶ್ಲಾಘನೀಯ ಸಂಗತಿ ಎಂದರು.
ವಿದ್ಯಾರ್ಥಿಗಳ ಜೀವನದಲ್ಲಿ ಪ್ರೌಢ ಶಾಲೆಯ ಶಿಕ್ಷಣವು ಜೀವನ ಬಹುಮುಖ್ಯವಾಗಿದೆ, ಕಲಿಯಬೇಕು ಎಂಬ ಮನೋಭಾವ ಹೊಂದಿದ್ದರೆ ಯಾವುದನ್ನು ಬೇಕಾದರೂ ಸುಲಭವಾಗಿ ಕಲಿಯಬಹುದು. ವಿದ್ಯಾರ್ಥಿ ಜೀವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಹಾಗೂ ವಾರ್ಷಿಕೋತ್ಸದಂತಹ ಕಾರ್ಯಕ್ರಮಗಳು ಶಿಕ್ಷಣದ ಜೀವನದಲ್ಲಿ ಒಂದು ಭಾಗವಾಗಿರುತ್ತದೆ ಎಂದರು.
ವಿದ್ಯಾರ್ಥಿಗಳು ಪ್ರತಿನಿತ್ಯ ಟಿವಿ ಹಾಗೂ ಮೊಬೈಲ್ ಅಂತಹ ದುಚ್ಚಟಗಳಿಗೆ ಬಲಿಯಾಗಿ ಶಿಕ್ಷಣದಲ್ಲಿ ಹಿಂದೆ ಉಳಿದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು-ಇಷ್ಟ ಪಟ್ಟು ಶಿಕ್ಷಣಕ್ಕೆ ಒತ್ತು ನೀಡಿದರೆ ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಗ್ರಾಮೀಣ ಪ್ರೌಢ ಶಾಲೆಯ ವಿದ್ಯಾರ್ಥಿಗಳು 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯಿಂದ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಗ್ರಾಮೀಣ ಪ್ರೌಢ ಶಾಲೆಯ ಕಾರ್ಯದರ್ಶಿ ಅ.ಮು.ಲಕ್ಷ್ಮೀನಾರಾಯಣ್ ತಿಳಿಸಿದರು.
ಶಾಲೆಯ ವಿದ್ಯಾರ್ಥಿ ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸೌಮ್ಯ ಅವರಿಗೆ ಶಾಲಾ ಆಡಳಿತ
ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆಸಲಾಯಿತು. ಶಾಲಾ ಕ್ರೀಡಾಕೂಟದಲ್ಲಿ ಹಾಗೂ ಶಾಲೆಯ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿ ಅಶೋಕ್, ಗ್ರಾಮೀಣ ಪ್ರೌಢ ಶಾಲೆಯ ಅಧ್ಯಕ್ಷ ಅರೀಫ್ ಖಾನ್, ನಿವೃತ್ತಿ ಮುಖ್ಯ ಶಿಕ್ಷಕ ಅಶ್ವಥ್ ನಾರಾಯಣ್, ಮುಖ್ಯ ಶಿಕ್ಷಕಿ ಶ್ಯಾಮಲ, ಕೋಶಾಧಿಕಾರಿ ಪ್ರಭಾಕರ್, ಪ್ರಾಂಶುಪಾಲ ಮಲ್ಲಿಕಾರ್ಜುನ್, ಶಾಲಾ ಸಮಿತಿಯ ಗೋಪಾಲ್ ಗೌಡ, ವಿಜೇಂದ್ರ ಮತ್ತು ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.