PLACE YOUR AD HERE AT LOWEST PRICE
ಮಹಿಳಾ ಸಂಘಗಳಿಗೆ ಬಡ್ಡಿ ರಹಿತಸಾಲವನ್ನು ೧ ಲಕ್ಷಕ್ಕೇರಿಸುತ್ತೇವೆ, ರೈತರಿಗೆ ಬಡ್ಡಿ ರಹಿತವಾಗಿ ೩ ಲಕ್ಷ ಸಾಲವನ್ನು ೫ ಲಕ್ಷಕ್ಕೇರಿಸುತ್ತೇವೆ, ರೈತರಿಗೆ ೧೦ ಲಕ್ಷದವರೆಗೆ ಶೇ.೩ಬಡ್ಡಿ ಸಾಲವನ್ನು ೨೦ ಲಕ್ಷದವರೆವಿಗೂ ಹೆಚ್ಚಿಸುತ್ತೇವೆ, ಸೀಶಕ್ತಿ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದವರ ಉಳಿಕೆ ಕಂತುಗಳನ್ನು ಮನ್ನಾ ಮಾಡುತ್ತೇವೆ, ಆದರೆ, ಸರಕಾರ ಬರುವವರೆವಿಗೂ ಕಂತು ಪಾವತಿಸಬೇಕು, ಹೈನುಗಾರಿಕೆ ಸಾಲವನ್ನು ಲೆಕ್ಕ ಹಾಕಿ ಪಶುಭಾಗ್ಯವನ್ನು ಮುಂದುವರೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಕೋಲಾರ ತಾಲೂಕಿನ ವೇಮಗಲ್ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡುತ್ತಾ, ಕೋಲಾರ ಜಿಲ್ಲೆಯ ಎಲ್ಲಾ ಬೇಡಿಕೆಗಳನ್ನು ಪ್ರಚಾರ ಪ್ರಣಾಳಿಕೆ ಸಮಿತಿ ಅಧ್ಯಕ್ಷರೊಂದಿಗೆ ಚರ್ಚಿಸಿ ಈಡೇರಿಸುತ್ತೇನೆ, ಕೋಲಾರ ಎಪಿಎಂಸಿ ಗೆ ೧೦೦ ಎಕರೆ ಭೂಮಿ ಮಂಜೂರು, ಜಿಲ್ಲೆಯಲ್ಲಿ ಟೊಮೇಟೋ, ಮಾವು ಸಂಸ್ಕರಣಾ ಘಟಕವನ್ನು ಆರಂಭಿಸುತ್ತೇವೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಸರಕಾರ ಬಂದ ತಕ್ಷಣ ವಾಪಸ್ ಪಡೆದುಕೊಳ್ಳುತ್ತೇವೆ, ಹಾಲಿಗೆ ಪ್ರೋತ್ಸಾಹ ಧನವನ್ನು ಲೀಟರ್ಗೆ ೫ ರೂನಿಂದ ೬ ರೂಗೇರಿಸುತ್ತೇವೆ ಎಂದರು.
ಕೆಸಿ ವ್ಯಾಲಿ ಬೇಡಿಕೆಯನ್ನು ಈಡೇರಿದ್ದೇವೆ, ಜೆಡಿಎಸ್ ವಿರೋಧ ಮಾಡಿತ್ತು, ಬಿಜೆಪಿ ಮಾಡಲಿಲ್ಲ, ಮೂರನೇ ಹಂತದ ಸಂಸ್ಕರಣೆ ಮಾಡುತ್ತೇವೆ. ಕುಡಿಯುವ ನೀರಿಗೆ ಎತ್ತಿನ ಹೊಳೆಯೋಜನೆಯನ್ನು ನಾವೇ ಪ್ರಾರಂಭಿಸಿದ್ದು, ಮತ್ತೇ ಚಾಲನೆ ಕೊಟ್ಟು ೨ ವರ್ಷದೊಳಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರುಗ್ರಾಮಾಂತರ, ತುಮಕೂರಿಗೆ ಶುದ್ಧವಾದ ನೀರು ಕೊಡುತ್ತೇವೆ.
ಬೆಲೆ ಏರಿಕೆಯಿಂದ ಬಡವರ ಜೀವನ ಸುಧಾರಣೆಗಾಗಿ ೨೦೦ ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಪ್ರತಿ ಮನೆಗೆ ನೀಡುತ್ತೇವೆ, ಪ್ರತಿಯೊಡತಿಗೆ ಪ್ರತಿ ತಿಂಗಳಿಗೆ ೨ ಸಾವಿರ ರೂ. ಬ್ಯಾಕ್ ಅಕೌಂಟ್ಗೆ ಹಾಕುತ್ತೇವೆ. ಇದಕ್ಕಾಗಿ ವಾರ್ಷಿಕವಾಗಿ ೪೦ ಸಾವಿರ ಕೋಟಿ ವೆಚ್ಛವಾಗುತ್ತದೆ ಎಂದರು.
ಬಿಜೆಪಿ ಸರಕಾರ ಜನಸಾಮಾನ್ಯರು ಬಳಸುವ ಪದಾರ್ಥಗಳ ಮೇಲೆಹೆಚ್ಚು ತೆರಿಗೆ ಹಾಕುವ ಪ್ರವೃತ್ತಿ ಬೆಳೆಸಿಕೊಂಡಿದೆ, ತೆರಿಗೆ ಕೊಡಲು ಶಕ್ತಿ ಇರುವವರಿಂದ ವಸೂಲಿ ಮಾಡಿ, ಬಡವರ ರಕ್ತ ಏಕೆ ಕುಡಿಯುತ್ತೀರಿ, ಈ ಆರ್ಥಿದ ನೀತಿ ಸಮಾಜ ಮತ್ತು ಬಡವರಿಗೆ ಮಾರಕ.
ಶ್ರೀಮಂತರ ಸಾಲವನ್ನು ಮನ್ನಾ ಮಾಡಲಾಗುತ್ತಿದೆ, ಪ್ರಧಾನಿ ಮೋದಿ ಉದ್ದಿಮೆದಾರರ ೧೪ ಲಕ್ಷ ಕೋಟಿ ಮೋದಿ ಸಾಲ ಮನ್ನಾ ಮಾಡಿದ್ದಾರೆ, ರೈತರ ಮಹಿಳೆಯರ ಒಂದು ರೂ ಸಾಲವನ್ನೂ ಮನಾ ಮಾಡಿಲ್ಲ, ಯಡಿಯೂರಪ್ಪ, ಬೊಮ್ಮಾಯಿ ಮಾಡಲಿಲ್ಲ, ನಮ್ಮ ಸರಕಾರ ೮೧೬೫ ಕೋಟಿ ಸಾಲ ಮನ್ನಾ ಮಾಡಿದೆ, ಬಿಜೆಪಿಯರಿಗೇನು ಬಂದಿದೆ ರೋಗ, ಸಾಲಮನ್ನಾ ಮಾಡಿ ಎಂದರೆ ಯಡಿಯೂರಪ್ಪ ನೋಟುಪ್ರಿಂಟ್ ಮಾಡುವ ಯಂತ್ರವಿಲ್ಲ ಎಂದಿದ್ದರು, ಸಂಸದ ತೇಜಸ್ವಿ ಸೂರ್ಯ ರೈತರ ಸಾಲ ಮನ್ನಾ ಮಾಡುವುದರಿಂದ ದೇಶದ ಮೇಲೆ ದುಷ್ಪರಿಣಾಮ ಎನ್ನುತ್ತಾರೆ, ಬಡವರ ಮೇಲೆ ಏಕಿಷ್ಟು ಕೆಟ್ಟ ಕಣ್ಣು, ಈ ದ್ವಂದ್ವ ಹಾಗೂ ಬಡವರ ರೈತ ವಿರೋಧಿ ನೀತಿಯನ್ನು ಬಿಡಬೇಕಾಗುತ್ತದೆ ಎಂದರು.
ನಾನು ಕೋಲಾರಕ್ಕೆ ಬರುವುದು ಇಷ್ಟವಿದಿಯಾ ಎಂದು ಪ್ರಶ್ನಿಸಿ, ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಕೋಲಾರದಿಂದಲೇ ಸ್ಪರ್ಧಿಸುತ್ತೇನೆ, ಯಾರ ಅಪಪ್ರಚಾರ ಮಾತು ಕೇಳಬೇಡಿ, ಬಿಜೆಪಿ ಸರಕಾರ ಏನೂ ಮಾಡಿಲ್ಲ, ದ್ವೇಷ ಹುಟ್ಟು ಹಾಕುತ್ತಾರೆ, ಹಿಂದು ಮುಸಲ್ಮಾನರ ಮೇಲೆ ಎತ್ತಿಕಟ್ಟುತ್ತಾರೆ, ಆದರೆ, ಮಾತಿನಲ್ಲಿ ಮಾತ್ರ ಸಬ್ಕಾ ಸಾತ್ ಸಬ್ಕಾ ವಿಕಾಸ್ ಎನ್ನುತ್ತಾರೆ, ದಲಿತ, ಅಲ್ಪಸಂಖ್ಯಾತರು, ಹಿಂದುಳಿದ ಮಹಿಳೆಯರು ಸಬ್ಕಾ ಸಾತ್ನಲ್ಲಿ ಬರುವುದಿಲ್ಲವೇ ಎಂದು ಪ್ರಶ್ನಿಸಿ, ೨೦೧೩ ರಿಂದ ೨೦೧೮ ರವರೆವಿಗೂ ನುಡಿದಂತೆ ನಡೆದುಕೊಂಡಿದ್ದೇವೆ, ನಿಮ್ಮ ಪರವಾಗಿದ್ದವರನ್ನು ಅಽಕಾರಕ್ಕೆ ತನ್ನಿ. ರಾಜ್ಯ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದುಕರೆ ನೀಡಿದರು.
ಬಿಜೆಪಿಯವರು ಯಾವತ್ತಿಗೂ ಮಹಿಳೆಯರಿಗೆ ನ್ಯಾಯಯುತವಾದಹಕ್ಕು ಕೊಡುವ ಪ್ರಯತ್ನ ಮಾಡೇ ಇಲ್ಲ. ಕಾಂಗ್ರೆಸ್ ಸಂವಿಧಾನದ ಮೇಲೆ ಗೌರವ ಇಟ್ಟುಕೆಲಸ ಮಾಡುತ್ತಿದೆ. ದೇಶದಲ್ಲಿ ತಾರತಮ್ಯಹೋಗಬೇಕಾದರೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ಇಲ್ಲದ ಹಿಂದುಳಿದ, ದಲಿತ, ರೈತ, ಮಹಿಳೆಯರಿಗೆ ನ್ಯಾಯಕೊಟ್ಟಾಗ ಮಾತ್ರ ತಾರತಮ್ಯಹೋಗುತ್ತದೆ. ಭಾರತದಲ್ಲಿ ಶೇ.೧೯ ಮಹಿಳೆಯರು ಮಾತ್ರ ಉದ್ಯೋಗಸ್ಥರು, ವಿದೇಶಗಳಲ್ಲಿ ಶೇ.೫೦ಕ್ಕಿಂತ ಹೆಚ್ಚು ಇದ್ದಾರೆ, ದೇಶದ ಉತ್ಪನ್ನ ಹೆಚ್ಚಾಗಬೇಕಾದರೆ, ಜಿಡಿಪಿ ಹೆಚ್ಚಾಗಬೇಕಾದರೆ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಾಗುತ್ತದೆ, ಆರ್ಥಿಕ ಚಟುವಟಿಕೆಗೆ ಹಣ ಸಂಪಾದಿಸುವಂತೆ ಮಾಡಬೇಕು, ಭಾರತ ಹಳ್ಳಿಗಾಡಿನ ದೇಶ, ಕೃಷಿ ಪ್ರಧಾನ ದೇಶ, ಕೃಷಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿದೆ.ಕೃಷಿ ಆಧಾರಿತ ಗ್ರಾಮೀಣ ಉದ್ಯೋಗವನ್ನು ಅಭಿವೃದ್ಧಿಪಡಿಸದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ, ಮಹಿಳೆಯರಿಗೆ ಶಕ್ತಿ ಕೊಟ್ಟಾಗ ಮಾತ್ರದೇಶದ ಅಭಿವೃದ್ಧಿ ಸಮಗ್ರವಾಗಿ ಆಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಕೆಲವು ದಿನಗಳ ಹಿಂದೆ ಬಂದಿದ್ದರು, ಸೀ ಸ್ವಸಹಾಯ ಸಂಘಗಳ ಸಮ್ಮೇಳನ ಮಾಡುತ್ತಿದ್ದೇನೆ ಬರಬೇಕೆಂದು ಆಹ್ವಾನ ಕೊಟ್ಟಿದ್ದರು. ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾದ ಮಹಿಳಾ ಸಮಾವೇಶ, ಆಗಮಿಸಿರುವ ಎಲ್ಲಾ ಮಹಿಳಾ ಸದಸ್ಯರಿಗೆ ಧನ್ಯವಾದ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ರಮೇಶ್ಕುಮಾರ್, ಎಂ.ಆರ್.ಸೀತಾರಾಂ, ಎಚ್.ಎಂ.ರೇವಣ್ಣ, ಕೆ.ಶ್ರೀನಿವಾಸಗೌಡ, ಕೃಷ್ಣಬೈರೇಗೌಡ, ನಿಸಾರ್ ಅಹಮದ್, ನಸೀರ್ ಅಹಮದ್, ಭೈರತಿ ಸುರೇಶ್, ಅನಿಲ್ಕುಮಾರ್, ಕೆ.ವೈ.ನಂಜೇಗೌಡ, ಡಾ.ಸುಧಾಕರ್, ಸಂಪಂಗಿ,ಎಂ.ಸಿ. ವೇಣುಗೋಪಾಲ್, ದ್ವಾರಕಾನಾಥ್, ಎಲ್.ಎ.ಮಂಜುನಾಥ್, ಪುಷ್ಪಾ, ರತ್ನಮ್ಮ, ಲಕ್ಷ್ಮೀನಾರಾಯಣ, ಪ್ರಸಾದ್ಬಾಬು, ಉದಯಶಂಕರ್, ನಾಗನಾಳ ಸೋಮಣ್ಣ, ದಯಾನಂದ್, ಊರುಬಾಗಿಲು ಶ್ರೀನಿವಾಸ್, ಕೆ.ಜಯದೇವ್ ಮತ್ತಿತರರಿದ್ದರು.
ಸುದ್ದಿ ಓದಿ ಹಂಚಿ: