PLACE YOUR AD HERE AT LOWEST PRICE
ಕೋಲಾರ ತಾಲೂಕಿನ ವೇಮಗಲ್ ಕ್ರೀಡಾಂಗಣದಲ್ಲಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು ಸೋಮವಾರ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೇಮಗಲ್ನಲ್ಲಿ ವಿವಿಧ ದೇವಾಲಯಗಳು, ಮಸೀಧಿಗೆ ಭೇಟಿ ನೀಡಿದರು.
ಬೆಂಗಳೂರಿನಿಂದ ಕಾರಿನಲ್ಲಿ ಆಗಮಿಸಿದ ಸಿದ್ದರಾಮಯ್ಯರನ್ನು ರಾಮಸಂದ್ರ ಗಡಿಯಲ್ಲಿ ಅಭಿಮಾನಿಗಳು ಹೂಮಾಲೆ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ನರಸಾಪುರ ಸಮೀಪದ ಬೆಳ್ಳೂರು ಯೋಗಾಚಾರ್ಯ ಬಿ.ಕೆ.ಎಸ್.ಅಯ್ಯಂಗಾರ್ ಯೋಗ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಯೋಗಾಚಾರ್ಯರ ಸಮಾಧಿ ಮತ್ತು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು.
ಮಾರ್ಗಮಧ್ಯೆ ವೇಮಗಲ್ ಕುರುಬರಹಳ್ಳಿ ಗೇಟ್ ಬಳಿ ಇರುವ ಆಂಜನೇಯಸ್ವಾಮಿ ದೇವಾಲಯಕ್ಕೆ ದಾರಿ ಮಧ್ಯೆ ನಿಂತಿದ್ದ ಗ್ರಾಮಸ್ಥರ ಮನವಿ ಮೇರೆಗೆ ಭೇಟಿ ನೀಡಿ ದರ್ಶನ ಪಡೆದುಕೊಂಡರು.
ಆನಂತರ ವೇಮಗಲ್ನಲ್ಲಿ ಧರ್ಮರಾಯಸ್ವಾಮಿ ದೇವಾಲಯ, ಜಾಮಿಯಾ ಮಸೀಧಿ ಮತ್ತು ರೇಣುಕಾ ಯಲ್ಲಮ್ಮ ದೇವಾಲಯಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಾಲಯ ಮುಂಭಾಗ ಕಾದು ನಿಂತಿದ್ದ ಮಹಿಳೆಯರು ಸಿದ್ದರಾಮಯ್ಯರಿಗೆ ಆರತಿ ಬೆಳಗಿ ಸ್ವಾಗತಿಸಿದರು.
ಜಾಮಿಯಾ ಮಸೀಧಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ದರಾಮಯ್ಯರಿಗೆ ಧಾರ್ಮಿಕ ಪೇಟಾ ತೊಡಿಸಿ, ಸಿಹಿ ನೀಡಿ ಸತ್ಕರಿಸಿದರು.
ದೇವಾಲಯ ಮಸೀಧಿ ಭೇಟಿ ನಂತರ ವೇಮಗಲ್ ಬಹಿರಂಗ ಸಮಾರಂಭದ ವೇದಿಕೆಗೆ ಸಿದ್ದರಾಮಯ್ಯ ಆಗಮಿಸಿದ್ದು, ಇವರ ಜೊತೆಗೆ ಕಾಂಗ್ರೆಸ್ ಮುಖಂಡರು, ಹಾಲಿ ಶಾಸಕರು, ಮಾಜಿ ಶಾಸಕರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಾಥ್ ನೀಡುತ್ತಿದ್ದಾರೆ.
ಸುದ್ದಿ ಓದಿ ಹಂಚಿ: