PLACE YOUR AD HERE AT LOWEST PRICE
- ಫೆ.೧೯ ಮಾಲೂರಿನ ಹೊಂಡಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಮೊದಲ ಸಂಪುಟದ ಧ್ವನಿ ಪುಸ್ತಕ ಬಿಡುಗಡೆ
- ದೇಶದಲ್ಲಿಯೇ ಮೊಟ್ಟ ಮೊದಲ ಪ್ರಯತ್ನ
ಅಂಬೇಡ್ಕರ್ ಬರಹ ಮತ್ತು ಭಾಷಣಗಳನ್ನು ಕರ್ನಾಟಕ ಸರಕಾರ ಈಗಾಗಲೇ ೨೨ ಸಂಪುಟಗಳಲ್ಲಿ ಪ್ರಕಟಿಸಿದೆ. ಆದರೆ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಅಂಬೇಡ್ಕರ್ರನ್ನು ಧ್ವನಿ ರೂಪದಲ್ಲಿ ಆಪ್ ಮೂಲಕ ಯುವ ಪೀಳಿಗೆಗೆ ಸಮಗ್ರವಾಗಿ ಪರಿಚಯಿಸುವ ಶಾಶ್ವತ ಕಾರ್ಯಕ್ಕೆ ಮುಂದಾಗಿದ್ದಾರೆ ಕೋಲಾರ ಜಿಲ್ಲೆಯ ಇಬ್ಬರು ಸಹೋದರರು ಒಬ್ಬ ಸಹೋದರಿ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಹುಣಸೀಕೋಟೆ ಗ್ರಾಮದ ಮಂಜುನಾಥ್, ಸಿದ್ದಾರ್ಥ್ ಆನಂದ್ ಹಾಗೂ ಸ್ನಪ್ನ ಎಂಬ ಹೆಸರಿನ ಸಹೋದರ ಸಹೋದರಿಯರು ತಮ್ಮದೇ ಹೆಸರಿನ ಮೊದಲ ಅಕ್ಷರಗಳನ್ನು ತೆಗೆದು ಸ್ಯಾಮ್ ಎಂಬ ಆಡಿಯೋ (SAM AUDIO) ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಆಡಿಯೋ ಸಂಸ್ಥೆಯ ಮುಖ್ಯ ಉದ್ದೇಶ ಅಂಬೇಡ್ಕರ್ ಬರಹ, ಭಾಷಣಗಳ ೨೨ ಸಂಪುಟಗಳನ್ನು ಧ್ವನಿ ರೂಪದಲ್ಲಿ ಕನ್ನಡದ ಏಳು ಕೋಟಿ ಜನತೆ ಮುಂದಿಡುವುದು.
ಕೊರೊನಾ ಕಾಲಘಟ್ಟದ ಎರಡು ವರ್ಷಗಳನ್ನು ಸಂಪೂರ್ಣವಾಗಿ ಇದಕ್ಕಾಗಿಯೇ ಧಾರೆ ಎರೆದಿರುವ ಈ ಸಹೋದರರು ಅಂಬೇಡ್ಕರ್ ಬದುಕು ಬರಹಗಳ ೨೨ ಸಂಪುಟಗಳನ್ನು ಕನ್ನಡ ಪ್ರಸಿದ್ಧ ಹಿನ್ನೆಲೆ ಗಾಯಕ ಗಾಯಕಿಯರ ಧ್ವನಿಯಲ್ಲಿ ಧ್ವನಿರೂಪಕ್ಕೆ ಪರಿವರ್ತಿಸಿಕೊಂಡಿದ್ದಾರೆ. ಇದಕ್ಕಾಗಿ ತಮ್ಮದೇ ದುಡಿಮೆಯ ಸುಮಾರು ೭೫ ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದಾರೆ.
ಹದಿನಾರುವರೆ ಗಂಟೆಗಳ ಮೊದಲ ಧ್ವನಿ ಸಂಪುಟವನ್ನು ಇದೇ -.೧೯ ರಂದು ಭಾನುವಾರ ಮಾಲೂರಿನ ಹೊಂಡಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಧ್ವನಿ ಪುಸ್ತಕ ಬಿಡುಗಡೆಯಾಗಲಿದೆ. ಆನಂತರ ೨೨ ಜಿಲ್ಲಾ ಕೇಂದ್ರಗಳಲ್ಲಿ ಇನ್ನಿತರ ೨೨ ಧ್ವನಿಸಂಪುಟಗಳನ್ನು ಒಂದೊಂದಾಗಿ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.
ಆಗಿರುವ ವೆಚ್ಛವನ್ನು ಗಮನಿಸಿದರೆ ಈ ಸಂಪುಟವನ್ನು ೫೫೬೦ ರೂಗಳಿಗೆ ಮಾರಾಟ ಮಾಡಬೇಕಾಗುತ್ತದೆ. ಆದರೆ, ಅಂಬೇಡ್ಕರ್ ಮೇಲಿನ ಪ್ರೀತಿಯನ್ನು ಲಾಭವಾಗಿಸಿಕೊಳ್ಳಲು ಇಚ್ಛಿಸದ ಈ ಸಹೋದರರು ಕೇವಲ ದಿನಕ್ಕೊಂದು ರೂನಂತೆ ವಾರ್ಷಿಕ ೩೬೫ ರೂಪಾಯಿಗಳಿಗೆ ನೀಡಲು ಸಜ್ಜಾಗುತ್ತಿದ್ದಾರೆ.
ಅಂಬೇಡ್ಕರ್ ಆಶಯದ ಸಮಾನತೆಯ ಸಮಾಜವನ್ನು ಕಟ್ಟಲು ಅಂಬೇಡ್ಕರ್ ಬರಹ ಭಾಷಣಗಳ ಧ್ವನಿ ಪುಸ್ತಕ ನೆರವಾಗಲಿ ಎಂದು ಕೋಲಾರದ ಪತ್ರಕರ್ತರ ಭವನದಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಹಿರಿಯರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಹೂಹಳ್ಳಿ ನಾಗರಾಜ್, ಮಂಜುನಾಥ್ ಹುಣಸೀಕೋಟೆ, ವೆಂಕಟಾಚಲಪತಿ, ಗಣೇಶ್, ಸುಬ್ರಮಣಿ ಇತರರು ವಿವರಿಸಿದರು. ಮೊದಲ ಸಂಪುಟ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಸುದ್ದಿ ಓದಿ ಹಂಚಿ: