• Fri. Apr 19th, 2024

PLACE YOUR AD HERE AT LOWEST PRICE

ತಮಟೆ ವಾದನಕ್ಕೆ ನಾಡೋಜ ಪ್ರಶಸ್ತಿ, ಪದ್ಮಶ್ರಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದ್ದರೂ ನನ್ನ ಸ್ವಂತ ಗ್ರಾಮದಲ್ಲಿ ನನ್ನ ವಿದ್ಯಗೆ ಗೌರವ ಇಲ್ಲದಂತಾಗಿರುವುದಕ್ಕೆ ಪದ್ಮಶ್ರೀ ಪ್ರಶಸ್ತಿ ವಿಜೇತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪನವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ನನ್ನ ತಂದೆ ಪಾಪಣ್ಣ ಮೃತರಾದಾಗ ನನಗೆ 15 ವರ್ಷ ವಯಸ್ಸು, ಆಗ ತಂದೆಯ ವೃತ್ತಿಯನ್ನು ಮುಂದುವರೆಸುವಂತೆ ಗ್ರಾಮಸ್ಥರು ತಿಳಿಸಿದರು. ನಾನು ಅವಿದ್ಯಾವಂತ, ಶಾಲೆಗೆ ಹೋಗಿಲ್ಲ, ನಂತರ ಸಾಕ್ಷರತದಲ್ಲಿ ೪ನೇ ತರಗತಿಯ ಓದನ್ನು ಮುಗಿಸಿದೆ.

15 ವರ್ಷದಲ್ಲಿ ತಮಟೆಯನ್ನು ಕೈಗೆತ್ತಿಕೊಂಡವನು ಇಲ್ಲಿಯ ತನಕ ತಮಟೆಯನ್ನು ಬಾರಿಸುತ್ತಲೇ ತಮಟೆಯ ಮೂಲಕ ಜನರನ್ನು ಮಾತನಾಡಿಸಿದ್ದೇನೆ . ದೇಶ ವಿದೇಶಗಳಲ್ಲಿ ನನ್ನ ತಮಟೆ ವಾದ್ಯ ಕಾರ್ಯಕ್ರಮಗಳನ್ನು ನೀಡಿದ್ದೇನೆ, ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೂ, ನನ್ನ ಸ್ವಂತ ಗ್ರಾಮದಲ್ಲಿ ನನ್ನ ಕಲೆಯನ್ನುಗೌರವ ಇಲ್ಲದಂತೆ  ನೋಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ನನ್ನ ತಮಟೆ ವಾದ್ಯವನ್ನು ಗುರುತಿಸಿ ಮೈಸೂರು ದಸರಾ ಸೇರಿದಂತೆ ಅನೇಕ ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದ್ದರು, ನಂತರ ಜಪಾನ್, ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತಮಟೆ ವಾದ್ಯವನ್ನು ನುಡಿಸಿ ಬಂದಿದ್ದೇನೆ, ನನ್ನ ತಮಟೆ ವಾದ್ಯಕ್ಕೆ ಜನರು ಕುಣಿದು ಕುಪ್ಪಳಿಸಿದ್ದಾರೆ, ಹಿಂದೆ ತಮಟೆ ಬಾರಿಸಿ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಈಗ ಅದು ಬದಲಾವಣೆಯಾಗಿದೆ, ನಾನು ಅನೇಕ ಜನರಿಗೆ ತಮಟೆ ವಾದ್ಯವನ್ನು ಕಲಿಸಿಕೊಟ್ಟಿದ್ದೇನೆ, ಈಗಿನ ಕಾಲದ ತಮಟೆ ವಾದ್ಯದ ಕಲಿಕೆಯ ಬಗ್ಗೆ ಆಸಕ್ತಿ ಕಡಿಮೆ ಇದೆ. ಸರ್ಕಾರ ತಮಟೆ ವಾದ್ಯದ ಶಾಲೆಯನ್ನು ಪ್ರತಿ ಜಿಲ್ಲೆಯಲ್ಲಿ ತೆರೆಯಬೇಕು ಎಂದರು.

ತಮಟೆ ವಾದ್ಯದಲ್ಲಿ 33 ವಿಧಾನಗಳಿರುತ್ತದೆ. 15 ವರ್ಷಗಳಿಂದ ತಮಟೆಯನ್ನು ಬಾರಿಸುತ್ತಾ ಬಂದಿದ್ದೇನೆ, ನನಗೆ ಇದರಿಂದ ತೃಪ್ತಿಯಿದೆ, ಇದರಿಂದ ಅಸಡ್ಡೆ ಎನಿಸಿಲ್ಲ, ಈ ಹಿಂದೆ ತಮಟೆಗೆ ಚರ್ಮ ವಾದ್ಯವಿತ್ತು, ಈಗ ಬದಲಾವಣೆಯಾಗಿ ಪ್ಲಾಸ್ಟಿಕ್ ಬಂದಿದೆ, ಆದರೆ ಚರ್ಮ ವಾದ್ಯವೇ ಶ್ರೇಷ್ಠ ಅದರಲ್ಲೂ ಮುಖ್ಯವಾಗಿ ಮೇಕೆ ಚರ್ಮದಲ್ಲಿ ತಯಾರು ಮಾಡಿರುವ ತಮಟೆಯಲ್ಲಿ ಹೆಚ್ಚು ಸ್ವರಗಳನ್ನು ನುಡಿಸಬಹುದು ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿಗೆ ತಮಟೆಯನ್ನು ಪ್ರಸ್ತುತಪಡಿಸಿ,   ಕಲೆಯನ್ನೇ ತನ್ನ ಬದುಕನ್ನಾಗಿ ರೂಡಿಸಿಕೊಂಡ  ಪಿಂಡಿಪಾಪನಹಳ್ಳಿ ಮುಂನಿವೆಂಕಟಪ್ಪ ಜೀವನದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ ಎಂದರು.

ಅನೇಕರು ಪ್ರಶಸ್ತಿಗಳ ಹಿಂದೆ ಬೀಳುತ್ತಾರೆ. ಆದರೆ ಮುನಿವೆಂಕಟಪ್ಪನವರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಕಲೆಗಳಿಗೆ ಪ್ರಸಿದ್ದವಾದ ದೇವರಮಳ್ಳೂರಿನಲ್ಲಿ ಮುನಿವೆಂಕಟಪ್ಪನವರ ತಮಟೆ ವಾದ್ಯವನ್ನು ಜಾನಪದ ಅಕಾಡಮಿಯ ಹೆಚ್.ಎಲ್.ನಾಗೇಗೌಡ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದರು.

ಸರ್ಕಾರ ಪ್ರಶಸ್ತಿಗಳನ್ನು ಒಂದು ಕಡೆ ನೀಡಿದರೆ ಮತ್ತೊಂದು ಕಡೆ ಅವರಿಗೆ ಸರ್ಕಾರ ಮಂಜೂರು ಮಾಡಿದ ಬಿಡಿಎ ನಿವೇಶನವನ್ನು ಕಿತ್ತುಕೊಳ್ಳುವ ಹಂತಕ್ಕೆ ಹೋಗಿರುವುದು ವಿಷಾಧನೀಯವಾಗಿದೆ, ಬಡ ಕಲಾವಿದನಿಗೆ ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಕಸಿದುಕೊಳ್ಳುವಂತಹ ಕೆಲಸ ಸರ್ಕಾರ ಮಾಡುತ್ತಿರುವುದು ವಿಷಾದನೀಯವೆಂದರು.

ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಮುನಿವೆಂಕಟಪ್ಪ ಅವರು ತಮಟೆ ವಾದನವನ್ನು ಕರಗತ ಮಾಡಿಕೊಂಡಿರುವುದರ ಜೊತೆಗೆ ತಮಟೆ ಮೂಲಕ ಮಾತನಾಡುತ್ತಾರೆ. ಕಲೆಗಳ ದೇವರು ಶಿವ ಮೊದಲ ಬಾರಿಗೆ ಡಮರುಗ ಮೂಲಕ ನಾದವನ್ನು ಹೊರಡಿಸಿದರು. ತಾಳ ವಾದ್ಯಗಳ ತಾಯಿ ತಮಟೆಯಾಗಿದೆ. ಈ ಕಲೆಯಲ್ಲಿ ಸಾಧನೆ ಮಾಡಿರುವ ಮುನಿವೆಂಕಟಪ್ಪ ಅವರನ್ನು ಶಿವರಾತ್ರಿಯಂದು ಸಂಘದ ವತಿಯಿಂದ ಅಭಿನಂದಿಸಿರುವುದು ಶ್ಲಾಘನೀಯ ಎಂದರು.

ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಪದ್ಮಶ್ರೀ ಪ್ರಶಸ್ತಿಯನ್ನು ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರು ಪಡೆಯುವ ಮೂಲಕ ಅವಳಿ ಜಿಲ್ಲೆಗಳ ಕೀರ್ತಿಯನ್ನು ಅಂತರಾಷ್ಟ್ರೀಯಯ ಮಟ್ಟದಲ್ಲಿ ಬೆಳಗಿದ್ದಾರೆ. ಈ ನಿಟ್ಟಿನಲ್ಲಿ ಯುವ ಶಕ್ತಿ ಸಹ ಕಲೆಯನ್ನು ಮೈಗೂಡಿಸಿಕೊಂಡು ಮತ್ತಷ್ಟು ಪ್ರಶಸ್ತಿಗಳನ್ನು ಪಡೆಯುವಂತಾಗಲಿ ಎಂದು ಆಶಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎನ್.ಮುನಿವೆಂಕಟೇಗೌಡ, ಎಸ್.ಚಂದ್ರಶೇಖರ್, ಕೆ.ಆಸೀಫ್‌ಪಾಷ, ಎ.ಬಾಲನ್, ಎನ್.ಸತೀಶ್, ಶ್ರೀಕಾಂತ್, ಕಿರಣ್, ಗೋಪಿ, ಉಪನ್ಯಾಸಕ ಜೆ.ಜಿನಾಗರಾಜ್, ಆದಿಮ ಹಾ.ಮಾ.ರಾಮಚಂದ್ರಪ್ಪ, ವಿಜ್ಞಾನ ಲೇಖಕ ಹೆಚ್.ಎ.ಪುರುಷೋತ್ತಮರಾವ್, ರೈತ ಸಂಘದ ಅಬ್ಬಣಿ ಶಿವಪ್ಪ, ಆನಂದಕುಮಾರ್, ಮತ್ತು ತಂಡ, ಶಣೈ, ಒಬಿಸಿ ಮಂಜುನಾಥ್, ಗಾಂಧಿನಗರ ನಾರಯಣಸ್ವಾಮಿ, ಬಿ.ಬೈಚಪ್ಪ, ಗೂಳಿಗಾನಹಳ್ಳಿ ನಾಗರಾಜ್, ಪಟೇಲ್ ಪ್ರವೀಣ್, ವೇಣು, ಬಾಬು, ಸುಬ್ರಮಣಿ ಸೇರಿದಂತೆ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!