PLACE YOUR AD HERE AT LOWEST PRICE
ಕೋಲಾರ ಜಿಲ್ಲಾದ್ಯಂತ ಪೂರ್ಣಗೊಳಿಸದ ರಸ್ತೆ ಕಾಮಗಾರಿಗಳಿಂದ ಆಗುವ ಅಪಘಾತಗಳಿಂದ ಜನಸಾಮಾನ್ಯರಿಗೆ ರಕ್ಷಣೆ ನೀಡಿ, ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಆಗ್ರಹಿಸಿ ರೈತ ಸಂಘದಿಂದ ಕೋಲಾರ ಮಾಲೂರು ಮುಖ್ಯ ರಸ್ತೆ ಮಂಗಸಂದ್ರ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಸಿ ಲೋಕೋಪಯೋಗಿ ಇಲಾಖೆ ಅಧಿಕಾರಿ ರವಿಕುಮಾರ್ರವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ದೇವರು ವರ ಕೊಟ್ಟರೂ ಪೂಜಾರಿ ಹೂ ಕೊಡಲಿಲ್ಲ ಎಂಬ ಗಾದೆಯಂತೆ ಸರ್ಕಾರದಿಂದ ಗುಣಮಟ್ಟದ ರಸ್ತೆ ಅಭಿವೃದ್ದಿ ಮಾಡಿ ಜನಸಾಮಾನ್ಯರಿಗೆ ತೊಂದರೆ ಆಗದ ರೀತಿ ಕ್ರಮ ವಹಿಸಬೇಕೆಂದು ಲೋಕೋಪಯೋಗಿ ಇಲಾಖೆಗೆ ನೂರಾರು ಕೋಟಿ ಅನುದಾನ ಬಿಡುಗಡೆ ಆಗುತ್ತಿದ್ದರೂ ಗುಣಮಟ್ಟದ ರಸ್ತೆಗಳು ಮಾತ್ರ ಮರಿಚೀಕೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ರಸ್ತೆಗಳು ಮುಂಗಾರು ಮಳೆ ಆರ್ಭಟಕ್ಕೆ ನಾಶವಾಗಿ ಹಳ್ಳಕೊಳ್ಳಗಳು ಬಿದ್ದು ಗುಂಡಿಮಯವಾಗಿವೆ, ಮಳೆಗಾಲದಲ್ಲಿ ನೀರಿನಿಂದ ರಸ್ತೆನಾಶ, ಬೇಸಿಗೆಯಲ್ಲಿ ಧೂಳಿನಿಂದ ತೆರಿಗೆ ಕಟ್ಟಿದ ತಪ್ಪಿಗೆ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದರೂ ಸರಿಪಡಿಸಬೇಕಾದ ಜನಪ್ರತಿನಿಧಿಗಳು ಅಧಿಕಾರಿಗಳು ಚುನಾವಣೆ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ೪೮ ಗಂಟೆಯಲ್ಲಿ ಜಿಲ್ಲಾದ್ಯಾಂತ ನಡೆಯುತ್ತಿರುವ ರಾಜ್ಯ ಜಿಲ್ಲೆ ಗ್ರಾಮೀಣ ರಸ್ತೆಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು ರೈತರ ತರಕಾರಿ ಹೂ ಸಮೇತ ಅಧಿಕಾರಿಗಳ ಮನೆ ಮುತ್ತಿಗೆ ಹಾಕುವ ಎಚ್ಚರಿಕೆಯೊಂದಿಗೆ ಮನವಿ ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ನಾರಾಯಣಗೌಡ, ಗೀರೀಶ್, ನವೀನ್, ಮತ್ತು ಮಂಗಸಂದ್ರ ಗ್ರಾಮಸ್ಥರು ಮುಂತಾದವರಿದ್ದರು.
ಸುದ್ದಿ ಓದಿ ಹಂಚಿ: