PLACE YOUR AD HERE AT LOWEST PRICE
ರಾಜ್ಯದಲ್ಲಿ ದಲಿತ ಹಾಗೂ ಬಡವರ ಬಗ್ಗೆ ಕಾಳಜಿ ಉಳ್ಳ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಲು ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟ ಸರ್ವಾನುಮತದಿಂದ ನಿರ್ಧಾರ ಮಾಡಿದೆ ಎಂದು ಒಕ್ಕೂಟದ ಮುಖಂಡ ಹೂಹಳ್ಳಿ ಪ್ರಕಾಶ್ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅನಾದಿ ಕಾಲದಿಂದಲೂ ರಾಷ್ಟ್ರೀಯ ಪಕ್ಷಗಳು ದಲಿತ ವರ್ಗವನ್ನು ತುಳಿಯುತ್ತಲೇ ಬಂದಿವೆ. ರಾಷ್ಟ್ರೀಯ ಪಕ್ಷಗಳು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಹೊಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಈ ನಿಟ್ಟಿನಲ್ಲಿ ದಲಿತಪರ ಕಾಳಜಿ ಇರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ವಿಚಾರವಾಗಿ ನಾಲ್ಕು ಬಾರಿ ಸಭೆ ನಡೆಸಿ ಒಕ್ಕೊರಲಿನಿಂದ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ಜಾತಿ ಒಂದೇ, ಸಿದ್ದಾಂತ ಒಂದೇ ಎಂಬ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರವಾಗಿ ನಿಲ್ಲುವ ಮೂಲಕ ದಲಿತರ ಸರ್ವತೋಮುಖ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರುವ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಅವಧಿಯಲ್ಲಿ ನೀಡಿರುವ ರಸ್ತೆ ಕಾಮಗಾರಿಗಳು, ಫ್ಲೈ ಓವರ್, ಇತ್ಯಾದಿ ಕೊಡುಗೆಗಳು ಅಪಾರವಾಗಿದ್ದು, ಇದರೊಟ್ಟಿಗೆ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಕೊಡುಗೆಯೂ ಸಹ ಅಪಾರವಾಗಿದೆ.
ಅವರ ಅವಧಿಯಲ್ಲಿ ಜಾರಿಗೆ ತಂದಿರುವ ರೈತರ ಸಾಲ ಮನ್ನಾ, ಐರಾವತ ಯೋಜನೆ, ಕೋಲಾರಕ್ಕೆ ಐಫೋನ್ ಕಂಪನಿ ತಂದಿದ್ದು, ಮಾರಕ ಲಾಟರಿ ನಿಷೇಧ, ಹೆಣ್ಣು ಮಕ್ಕಳ ನೋವಿಗೆ ಸ್ಪಂದಿಸುವ ಮೂಲಕ ಸಾರಾಯಿ ನಿಷೇಧ ಮಾಡಿದ ಯಾರಾದರೂ ಗಂಡಸು ರಾಜಕಾರಣಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಹೇಳಿದರು.
ಇದರೊಟ್ಟಿಗೆ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಭಾಗ್ಯಲಕ್ಷ್ಮಿ ಬಾಂಡ್, ಸೈಕಲ್ ಭಾಗ್ಯ, ಪ್ರಮುಖವಾಗಿ ರೈತ ಪರವಾದ ಕಾಳಜಿಯಿಂದ ಎತ್ತಿನಹೊಳೆ, ಯರಗೋಳ್, ಯೋಜನೆ, ಸಮೃದ್ಧಿ ಕರ್ನಾಟಕ, , ಶಿಕ್ಷಣ ಕ್ರಾಂತಿ, ಇತ್ಯಾದಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದ ಕುಮಾರಸ್ವಾಮಿಯವರು ಈ ಬಾರಿ ಮತ್ತೆ ಮುಖ್ಯಮಂತ್ರಿಗಳಾದರೆ ರಾಜ್ಯ ಸುಭಿಕ್ಷವಾಗುತ್ತದೆ ಎಂದರು.
ಮುಂದುವರೆದು ಕೋಲಾರಮ್ಮನ ಕೆರೆ ಹೂಳು ತೆಗೆದು ಜೋಬು ತುಂಬಿಸಿಕೊಂಡಿದ್ದು ಸಂಸದರ ಸಾಧನೆ ಎಂದು ಜರಿದ ಅವರು, ಪ್ರಸ್ತುತ ರಾಜ್ಯದಲ್ಲಿ ಆಡಳಿತದಲ್ಲಿರುವ ದಲಿತ ವಿರೋಧಿ ಸರ್ಕಾರ, ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಏನು? ಈ ಬಗ್ಗೆ ತುಟಿ ಬಿಚ್ಚಿ ಮಾತನಾಡದ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಇದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷ ಒಂದೇ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಎಂದರು,
ರಾಜ್ಯದ ಸಮಗ್ರ ಕಲ್ಯಾಣಕ್ಕಾಗಿ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲು ಕುಮಾರಸ್ವಾಮಿ ರಾಜ್ಯಾದ್ಯಂತ ಸಂಚಾರ, ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಅಕ್ಕಿ ಕೊಡ್ತೀವಿ ಅಂತ ಯಾಮಾರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕಿಂತ ರೂಪಿಸಿಕೊಳ್ಳಲು ಅನುವು ಮಾಡಿಕೊಳ್ಳುವ ಯೋಜನೆಗಳು ಮಹತ್ವದ್ದು ಎಂದು ತಿಳಿದು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕೊರೋನಾ ಸಂದರ್ಭದಲ್ಲಿ ಅದ್ವಿತೀಯ ಸೇವೆ ಮಾಡಿದ ಸ್ಥಳೀಯ ಅಭ್ಯರ್ಥಿ ಸಿಎಮ್ಮಾರ್ ಶ್ರೀನಾಥ್ ಗೆ ಸಹಮತದ ಬೆಂಬಲ ಸೂಚಿಸುತ್ತಿದ್ದೇವೆ ಎಂದು ತಿಳಿಸಿದರು.
ಸಿಎಂಆರ್ ಶ್ರೀನಾಥ್ ರಿಯಲ್ ಎಸ್ಟೇಟ್ ಉದ್ಯಮಿ ಅಲ್ಲ. ರೈತಾಪಿ ವರ್ಗದ ಕುಡಿ, ಶಿಸ್ತಿನ ಕುಟುಂಬದಿಂದ ಬಂದ ಸಹೃದಯ ರಾಜಕಾರಣಿ. ಅವರ ಸೇವೆ ಶ್ಲಾಘನೀಯ. ಈ ನಿಟ್ಟಿನಲ್ಲಿ ಇದೇ 15ರೊಳಗೆ ಸಮಾವೇಶ ಮಾಡಿ ನಂತರ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಬಾಲಗೋವಿಂದ,, ಹಾರೋಹಳ್ಳಿ ವೇಣು, ಜೆಡಿಎಸ್ ಮುಖಂಡ ಕುವೆಂಪುನಗರ ಆನಂದ್, ತಾರಕ್ ಮಂಜು, ಬೀರಮಾನಹಳ್ಳಿ ಆಂಜಿನಪ್ಪ. ಚೇತನ್ ಬಾಬು, ಭೋವಿ ರವಿ, ಕೋನಪ್ಪ ಸೊಣ್ಣೇನಹಳ್ಳಿ ಚೌಡಪ್ಪ, ಶ್ರೀನಿವಾಸ, ಮಾನವ ಹಕ್ಕುಗಳ ಹೋರಾಟಗಾರ್ತಿ ಲಕ್ಷ್ಮೀ, ಪುಷ್ಪಾ, ಗಿರಿಜಮ್ಮ, ಮುನಿಯಪ್ಪ, ವಾಲ್ಮೀಕಿ ಸಮುದಾಯದ ಯುವ ಮುಖಂಡ ಐತರಾಸನಹಳ್ಳಿ, ನರಸಿಂಹಪ್ಪ, ವಲ್ಲಭಿ ಅಂಬರೀಶ್ ಮತ್ತಿತರರು ಉಪಸ್ಥಿತರಿದ್ದರು.