PLACE YOUR AD HERE AT LOWEST PRICE
ಮೂಢನಂಬಿಕೆಗಳನ್ನು ಎಂದು ತೊರೆಯುತ್ತೇವೋ ಅಂದೇ ಜಾತಿಬೇಧ ವಿನಾಶ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಪ್ಪ ಅರಿವು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಕೋಲಾರ ಹಾಗೂ ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ಕೋಲಾರ ತಾಲೂಕಿನ ಮುದುವತ್ತಿ ಗ್ರಾಮಗಳಲ್ಲಿ ನಡೆದ ಜಾತಿ ಬಿಡಿ ಮತ ಬಿಡಿ ಮಾನವೀಯತೆಗೆ ಜೀವ ಕೊಡಿ ಎಂಬ ಕಾರ್ಯಕ್ರಮದಲ್ಲಿ ಅಸ್ಪೃಶ್ಯತಾ ನಿರ್ಮೂಲನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿ ಬೇಧ, ಮೇಲು ಕೀಲು ಎಂಬ ಭಾವನೆಗಳು ಇಂದಿಗೂ ಜೀವಂತವಾಗಿದೆ. ಹಳ್ಳಿಗಳಲ್ಲಿ ಅವನು ಕೀಳು ಜಾತಿ ಎಂದು ದೇವಾಲಯಗಳಿಗೆ ಪ್ರವೇಶ ನೀಡದೆ ಮನೆ ಮುಂದೆ ಬಂದರೆ ಮನೆ ಒಳಗೆ ಕರೆಯದೆ ಮನೆ ಬಾಗಿಲಲ್ಲೇ ನಿಲ್ಲಿಸುತ್ತಾರೆ. ಶೇಕಡ ಹತ್ತರಷ್ಟು ಬದಲಾಗಿರಬಹುದು. ತೊಂಬತ್ತರಷ್ಟು ಇನ್ನೂ ಅಸ್ಪೃಶ್ಯತೆ ಹಾಗೆ ಇದೆ. ನನ್ನ ಪ್ರಕಾರ ನಾವುಗಳು ಎಂದು ಮೂಢನಂಬಿಕೆಗಳನ್ನು ತೊರೆಯುತ್ತೇವೋ ಅಂದು ಜಾತಿಬೇಧ ವಿನಾಶವಾಗುತ್ತದೆ ಎಂದು ನನ್ನ ಅಭಿಪ್ರಾಯಪಟ್ಟರು.
ಅಸ್ಪೃಶ್ಯತೆಗೆ ಒಳಗಾದವರು ವಿದ್ಯಾವಂತರಾಗಬೇಕು. ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ವಿದ್ಯಾವಂತರಾಗಿ ಆರ್ಥಿಕವಾಗಿ ಒಂದು ಸ್ಥಾನಕ್ಕೆ ಹೋದರೆ ತಾನಾಗಿಯೇ ಅಸ್ಪೃಶ್ಯತೆ ನಿರ್ಮೂಲನೆಯಾಗುತ್ತದೆ ಎಂದು ನುಡಿದರು.
ಅರಿವು ಕಾರ್ಯಕ್ರಮವು ಕೋಲಾರ ತಾಲೂಕಿನ ಮುದುವತಿ, ಅರಾಭಿಕೊತ್ತನೂರು, ವಡಗೂರು, ವಕ್ಕಲೇರಿ, ಮಾರ್ಜೇನಹಳ್ಳಿ, ದೊಡ್ಡ ಹಸಾಳ ಗ್ರಾಮಗಳಲ್ಲಿ ಈಗಾಗಲೇ ನಡೆಸಿಕೊಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ವೆಂಕಟಾಚಲಪತಿ ನುಡಿದರು.
ಈನೆಲ ಈಜಲ ಕಲಾ ತಂಡದಿಂದ ಸೌಹಾರ್ದ ಗೀತ ಗಾಯನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮುದವತ್ತಿ ಗ್ರಾಮದ ಅಧ್ಯಕ್ಷರಾದ ನಾಗೇಂದ್ರಬಾಬು, ವಕೀಲ ಸತೀಶ್, ಎನ್. ಗಣೇಶಪ್ಪ, ಮುದುವತ್ತಿ ಮುನಿವೆಂಕಟಪ್ಪ, ನಾರಾಯಣಪ್ಪ ಮುಂತಾದವರು ಉಪಸ್ಥಿತರಿದ್ದರು.