• Tue. Apr 23rd, 2024

PLACE YOUR AD HERE AT LOWEST PRICE

ಪರೀಕ್ಷೆ ಮುಂದೂಡಿರುವ ಆದೇಶವನ್ನು ಹಿಂಪಡೆದು, ನ್ಯಾಯಾಲಯದ ತೀರ್ಪಿನಂತೆ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂದು ಕರ್ನಾಟಕದ ಕವಿಗಳು, ಶಿಕ್ಷಣ ತಜ್ಞರು, ಗಣ್ಯರು, ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿ, ರಾಜ್ಯದ 5ನೇ ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದಕ್ಕೆ ಸರಕಾರವು ಡಿಸೆಂಬರ್ 12, 2022ರಂದು ಹೊರಡಿಸಿದ್ದ ಸುತ್ತೋಲೆಯು ನಿಯಮಬಾಹಿರವೆಂದು ಮಾನ್ಯ ಉಚ್ಚ ನ್ಯಾಯಾಲಯವು ಶುಕ್ರವಾರ, ಮಾರ್ಚ್ 10ರಂದು ರದ್ದು ಪಡಿಸಿ ಆದೇಶಿಸಿತ್ತು. ಈ ಆದೇಶವನ್ನು ತಡೆಯುವಂತೆ ಮರುದಿನ ಮಾರ್ಚ್ 11ರಂದು ಸರಕಾರವು ಸಲ್ಲಿಸಿದ ತುರ್ತು ಮೇಲ್ಮನವಿಗೆ ಮಾನ್ಯ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಮಾನ್ಯ ಉಚ್ಚ ನ್ಯಾಯಾಲಯವು ಇಷ್ಟು ಸ್ಪಷ್ಟವಾಗಿ ಆದೇಶಗಳನ್ನು ನೀಡಿದ್ದರೂ ಅವನ್ನು ಕಡೆಗಣಿಸಿ, ‘ಈ ಪರೀಕ್ಷೆಗಳನ್ನು ನ್ಯಾಯಾಲಯದ ಆದೇಶದಂತೆ ಮುಂದೂಡಲಾಗಿದೆ’ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾರ್ಚ್ 11ರಂದು ಜ್ಞಾಪನವನ್ನು ಪ್ರಕಟಿಸಿರುವುದು ಆಘಾತಕಾರಿಯಾಗಿದ್ದು, ಮಾನ್ಯ ನ್ಯಾಯಾಲಯದ ಆದೇಶಗಳಿಗೆ ವ್ಯತಿರಿಕ್ತವೂ, ನಿಂದನೀಯವೂ ಆಗಿದೆ.

 

ಅದೇ ಜ್ಞಾಪನದಲ್ಲಿ ಮಕ್ಕಳ ಕಲಿಕಾ ನ್ಯೂನತೆಗಳು ಹಾಗೂ ಹಿನ್ನಡೆಗಳನ್ನು ಅರಿಯುವುದು ಈ ಮೌಲ್ಯಾ಼ಂಕನದ ಉದ್ದೇಶವೆಂದು ಹೇಳಲಾಗಿದೆ. ಕೋವಿಡ್ ನೆಪದಲ್ಲಿ ಅನಗತ್ಯವಾಗಿ ಶಾಲೆ ಮುಚ್ಚಿ, ವಿದ್ಯಾಗಮವನ್ನೂ ನಿಲ್ಲಿಸಿ, ಬಳಿಕ ಅಯೋಗ್ಯರಿಂದ ಅನಧಿಕೃತವಾಗಿ ಪಠ್ಯಪುಸ್ತಕಗಳನ್ನು ಕೆಡಿಸಿ, ಕಲಿಕಾ ಚೇತರಿಕೆಯನ್ನೂ ಅರೆಬರೆಯಾಗಿ ಮಾಡಿದ ಕಾರಣಕ್ಕೆ ರಾಜ್ಯದ ವಿದ್ಯಾರ್ಥಿಗಳ ಕಲಿಕೆಗೆ ಅಪಾರವಾದ, ಶಾಶ್ವತವಾದ ಹಿನ್ನಡೆಯಾಗಿದೆ ಎನ್ನುವುದನ್ನು ಹಲವು ಸಮೀಕ್ಷೆಗಳು ಈಗಾಗಲೇ ಸ್ಪಷ್ಟವಾಗಿ ತೋರಿಸಿಯಾಗಿದೆ.

ಸತ್ಯ ಹೀಗಿರುವಾಗ ಸರಕಾರದ ಈ ಎಲ್ಲಾ ಅವೈಜ್ಞಾನಿಕ ಕ್ರಮಗಳಿಂದ ಆಗಿರುವ ಹಿನ್ನಡೆಯನ್ನು ಪರೀಕ್ಷಿಸಲು ಈ ಮಕ್ಕಳ ಮೌಲ್ಯಾ಼ಂಕನ ಮಾಡುವುದಕ್ಕೆ ಹೊರಟಿರುವುದು ಮಕ್ಕಳ ಮೇಲೆ ಮಾಡುತ್ತಿರುವ ಅನ್ಯಾಯ ಹಾಗೂ ದುಷ್ಟತನವಷ್ಟೇ ಅಲ್ಲ, ಅತ್ಯಂತ ಬೇಜವಾಬ್ದಾರಿಯ ನಡೆಯೂ ಆಗಿದೆ.

ಸರ್ಕಾರದ ಈ ಗೊಂದಲದ ನಿರ್ಧಾರದಿಂದ ಶಿಕ್ಷಣ ಹಕ್ಕು ಕಾಯಿದೆಯು ನಿರಂತರ ಉಲ್ಲಂಘನೆಯಾಗುತ್ತಿದ್ದು ಪಾಲಕರಿಗೆ ಹಾಗು ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆಯಾಗಿದೆ. ಈ ಎಲ್ಲ ಗೊಂದಲಗಳಿಗೆ ಶಿಕ್ಷಣ ಸಚಿವರ ಅಪ್ರಬುದ್ಧತೆ ಹಾಗು ಸರ್ವಾಧಿಕಾರಿ ಧೋರಣೆ ಹಾಗು ಮೂಲವಾರಸುದಾರರನ್ನು ಒಳಮಾಡಿಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಿಸುವ ಅಪ್ರಜಾಸತ್ತಾತ್ಮಕ ಕಾರ್ಯವಿಧಾನವೇ ಕಾರಣವಾಗಿದೆ.

ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ನಿರಂತರ ಹಾಗು ವ್ಯಾಪಕ ಮೌಲ್ಯಮಾಪನಕ್ಕೆ ಅವಕಾಶವಿದ್ದು, ನಿರಂತರ ಮೌಲ್ಯಮಾಪನದ ಮೂಲಕ ಮಕ್ಕಳ ಕಲಿಕೆಯನ್ನು ಪರೀಕ್ಷಿಸಲಾಗುತ್ತಿದೆ. *ಇದರ ಭಾಗವಾಗಿ ಈಗಾಗಲೇ ನಾಲ್ಕು ರೂಪಣಾತ್ಮಕ ಹಾಗು ಒಂದು ಸಂಕಲನಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿದೆ. ಅಂತಿಮವಾಗಿ , ಬಾಕಿ ಉಳಿದಿರುವ ಒಂದು ಸಂಕಲನಾತ್ಮಕ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ಮುಗಿಸಿ , ಅದರ ಆಧಾರದಲ್ಲಿ ಇಲಾಖೆ ತಿಳಿಯ ಬಯಸುವ ವಿದ್ಯಾರ್ಥಿಗಳ ಕಲಿಕಾ ಮಟ್ಟ ,ಕಲಿಕಾ ನ್ಯೂನತೆ ,ಯಾವ ವಿಷಯದಲ್ಲಿ ಹಿನ್ನಡೆಯಾಗಿದೆಯೆಂಬುದನ್ನು ಉದ್ದೇಶಿತ ವಾರ್ಷಿಕ ಸಾರ್ವಜನಿಕ ಮೌಲ್ಯಾಂಕನ ಪರೀಕ್ಷೆಗಿಂತ ಹೆಚ್ಚು ಆಳವಾಗಿ ತಿಳಿಯಬಹುದಾಗಿದೆ*

ಜೊತೆಗೆ, ಕಲಿಕಾ ಚೇತರಿಕೆ ಭಾಗವಾಗಿ ಮೌಲ್ಯಮಾಪನ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ, ಮಕ್ಕಳ ಕಲಿಕಾ ಮೌಲ್ಯಮಾಪನಕ್ಕೆ ಈಗಾಗಲೇ ಆರ್ ಟಿ ಇ ಯಲ್ಲಿ ವೈಜ್ಞಾನಿಕ, ಹಾಗು ಮಕ್ಕಳ ಸ್ನೇಹಿ ವ್ಯವಸ್ಥೆಯಿರುವಾಗ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು ಬಿಟ್ಟು , ಇಡೀ ಶಿಕ್ಷಣ ವ್ಯವಸ್ಥೆಯನ್ನು ಅವೈಜ್ಞಾನಿಕ ಸನಾತನ ಪರೀಕ್ಷಾ ಸಂಪ್ರದಾಯಕ್ಕೆ ನೂಕುತ್ತಿರುವುದು ನಿಜಕ್ಕೂ ಹಿನ್ನೆಡೆಯಾಗಿದೆ.

ಹಕ್ಕು ಆಧಾರಿತ ಮಕ್ಕಳ ಸ್ನೇಹಿ ಶಿಕ್ಷಣ ಕ್ರಮದಿಂದ ಪರೀಕ್ಷಾ ಕೇಂದ್ರಿತ ಬ್ಯಾಂಕಿಂಗ್ ವಿಧಾನದ ಮಕ್ಕಳ ವಿರೋಧಿ ಕಲಿಕಾ ವ್ಯವಸ್ಥೆಗೆ ಮರಳುತ್ತಿರುವುದು ನಿಜಕ್ಕೂ ಶೋಚನೀಯ ಮತ್ತು ಅನಪೇಕ್ಷಣೀಯ. ಜೊತೆಗೆ, ನಮ್ಮ ಕಲಿಕಾ ವ್ಯವಸ್ಥೆಯು ಸಾಮರ್ಥ್ಯಧಾರಿತ ವ್ಯವಸ್ಥೆಯಾಗಿದ್ದು ನಿಗದಿಗೊಳಿಸಿದ ಸಾಮರ್ಥ್ಯಗಳನ್ನು ಕಲಿಸಿಯೇ ಮುಂದೆ ಹೋಗಬೇಕಿರುವುದರಿಂದ, ವಾರ್ಷಿಕ ಪರೀಕ್ಷೆ ಅವೈಜ್ಞಾನಿಕ ಮಾತ್ರವಲ್ಲದೆ ಅವಿವೇಕದ ನಡೆಯಾಗುತ್ತದೆ.

ಪ್ರತೀ ತರಗತಿಯಲ್ಲಿ ಮತ್ತು ಪ್ರತೀ ವಿಷಯದಲ್ಲಿ ಮಕ್ಕಳು ಕಲಿಯಲೇಬೇಕಾದ ಸಾಮರ್ಥ್ಯಗಳನ್ನು ಗುರುತಿಸಿ ಮಕ್ಕಳು, ಶಿಕ್ಷಕರು ಹಾಗು ಪಾಲಕರು ಅವುಗಳನ್ನು ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಅಧಿಸೂಚಿಸಲಾಗಿದೆ.

ಆದ್ದರಿಂದ ಮಾನ್ಯ ಉಚ್ಚ ನ್ಯಾಯಾಲಯದ ಸ್ಪಷ್ಟ ಆದೇಶಗಳನ್ನು ತಿರುಚಿ ‘ಪರೀಕ್ಷೆಗಳನ್ನು ಮುಂದೂಡಲಾಗಿದೆ’ ಎಂದು ಹೇಳಿರುವ ದಿನಾಂಕ :11.03.2023 ರ ಜ್ಞಾಪನವನ್ನು ಈ ಕೂಡಲೇ ಹಿಂಪಡೆದು, 5ನೇ ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ರದ್ದು ಪಡಿಸಲಾಗಿದೆ ಎಂದು ಕೂಡಲೇ ಸ್ಪಷ್ಟನೆಯನ್ನು ನೀಡಬೇಕು.

ಮಕ್ಕಳಲ್ಲಿ, ಹೆತ್ತವರಲ್ಲಿ ಮತ್ತು ಶಿಕ್ಷಕರಲ್ಲಿ ಇನ್ನಷ್ಟು ಗೊಂದಲ, ಆತಂಕ ಹಾಗೂ ಕಷ್ಟಗಳನ್ನು ಉಂಟು ಮಾಡುವ ಹಠಮಾರಿ ಧೋರಣೆಯನ್ನು ಸರ್ಕಾರ ಕೈ ಬಿಡಬೇಕು. ಸರಕಾರದ ವೈಫಲ್ಯಗಳಿಗೆ ಸರಕಾರವು ಸ್ವ-ಮೌಲ್ಯಾ಼ಂಕನ ಮಾಡಿ, ಮಕ್ಕಳನ್ನು ಹಿಂಸಿಸುವ ಕ್ರಮವನ್ನು ಕೈ ಬಿಡಬೇಕೆಂದು ನಾವು ಮಕ್ಕಳ ಪರವಾಗಿ ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ.

ಡಾ. ನಿರಂಜನಾರಾಧ್ಯ ವಿ.ಪಿ, ಡಾ.ಶ್ರೀನಿವಾಸ ಕಕ್ಕಿಲಾಯ, ಡಾ.ಕೆ.ಮರುಳಸಿದ್ದಪ್ಪ,  ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಡಾ.ಮೀನಾಕ್ಷಿ, ಬಾಳಿ ಬಸವರಾಜ ಗುರಿಕಾರ, ವಿಮಲಾ.ಕೆ.ಎಸ್,  ಅಮರೇಶ ಕಡಗದ, SFIಯೋಗಾನಂದ ಬಿ ಎನ್ರವರು *ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ* ವತಿಯಿಂದ ಒತ್ತಾಯಿಸಿದ್ದಾರೆ. ಇದಕ್ಕೆ 1. ಮೊಯ್ಯುದ್ದೀನ್ ಕುಟ್ಟಿ,ಮಂಗಳೂರು. 2.ಅಬ್ದುಲ್ ಸಲಾಂ ಚಿತ್ತೂರು , ಉಡುಪಿ.3. ಶಿವಕ್ಕಳ ಆಂಜನೇಯ, ದಾವಣಗೆರೆ.4.ದೇವಪ್ಪ ,ಕೊಪ್ಪಳ.

5.ಶಾಂತಿ, ಕಾರವಾರ. 6.ಅಶ್ವಿನ್ ಕುಮಾರ್,ಶಿವಮೊಗ್ಗ.7.ರಾಘವೇಂದ್ರ,ಬಳ್ಳಾರಿ.8.ಉಮೇಶ್ ದೊಡ್ಡ ಗಂಗವಾಡಿ, ರಾಮನಗರ.9.ಅಶೋಕ ಮಾಗಡಿ.10. ಮಾಥ್ಯು ಮುನಿಯಪ್ಪ, ಬೆಂಗಳೂರು ಗ್ರಾಮಾಂತರ. 11.ಈರಣ್ಣ ಮುರಗೋಡ, ಧಾರವಾಡ.12.ಜಿ ಕೆ ಶ್ರೀನಿವಾಸುಲು,ಕೋಲಾರ.13.ಕೆ ಎನ್ ವಿಜಯ ಕುಮಾರ್, ಚಿಕ್ಕಮಗಳೂರು.14.ನಾಗರಾಜ. ಸಜ್ಜಿ, ವಿಜಯನಗರ.15.ಡಿ.ಬಿ.ಕುಪ್ಪಸ್ತ (ಡಿಬಿಕೆಜಿ), ವಿಜಯಪುರ.16.ಕೆ ಎ ನಾಗೇಶ್, ಕೊಡಗು.

17.ಶಂಕರ್ ಬಣಪ್ಪನವರ, ಬೆಳಗಾವಿ.18.ಅಶೋಕ, ಚಿಕ್ಕಬಳ್ಳಾಪುರ.19.ಯತೀಶ್, ಮಂಡ್ಯ.20.ಹಫೀಜುಲ್ಲಾ, ರಾಯಚೂರು.21. ದಯಾನಂದಾರಾಧ್ಯ, ತುಮಕೂರು.22.ವೀರಭದ್ರಪ್ಪ, ಕಲ್ಬುರಗಿ.ಮಹೇಶ, ಚಾಮರಾಜನಗರ.23.ಉಮಾ ದ್ರಾವಿಡಿಯನ್, ಮೈಸೂರು.24.ಲಕ್ಷ್ಮಿ ವಲ್ಲಪ್ಪ, ಬಾಗಲಕೋಟೆ.25. ಯಲ್ಲಪ್ಪ ತಳವಾರ, ಗದಗ ಮೊದಲಾವದರು ಹೇಳಿಕೆ ನೀಡಿದ್ದಾರೆ.

Related Post

ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
ಕೋಲಾರ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡುತ್ತೇನೆ ಎಂದ ವರ್ತೂರು ಪ್ರಕಾಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು – ದಲಿತ್ ನಾರಾಯಣಸ್ವಾಮಿ ಅಕ್ರೋಶ

Leave a Reply

Your email address will not be published. Required fields are marked *

You missed

error: Content is protected !!