• Sat. Mar 25th, 2023

ವಿಶ್ವ ಮಹಿಳಾ ದಿನಾಚರಣೆಯಂದು  ಕೋಲಾರ ಸಂಸದ ಎಸ್.ಮುನಿಸ್ವಾಮಿ ಮಹಿಳೆಯೊಬ್ಬರ ಮೇಲೆ ಕೂಗಾಡಿದ ಪ್ರಕರಣ ಸಂಬಂಧ ದೂರೊಂದು ಗಲ್ ಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಮಾನವ ಹಕ್ಕುಗಳ ಮತ್ತು ಸಂಸ್ಕೃತಿ ರಕ್ಷಣಾ ಸಮಿತಿಯ ಮುಖ್ಯಸ್ಥ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾದ ಸಂದೀಪ್ ರೆಡ್ಡಿ ಎಂಬುವವರು ಇಂದು ಕೋಲಾರದ ಗಲ್ ಪೇಟೆ ಠಾಣೆಯಲ್ಲಿ ಸಂಸದ ಎಸ್ ಮುನಿಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲಿಖಿತ ರೂಪದಲ್ಲಿ ದೂರು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಕಳೆದ ಮಾರ್ಚ್ ೮ರಂದು ಕೋಲಾರದ ರಂಗಮಂದಿರದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ  ಮಾರಾಟ ಮಳಿಗೆ ತೆರೆದಿದ್ದ ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆಯ ಸುಜಾತ ಎಂಬುವರನ್ನು ಸಾರ್ವಜನಿಕವಾಗಿ *ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಕುಂಕುಮ ಇಟ್ಟಿಲ್ಲ?  ನಿನ್ನ ಗಂಡ ಬದುಕಿದ್ದಾನೆ ತಾನೇ? ಎಂದು ಏರುಧ್ವನಿಯಲ್ಲಿ ಕೂಗಾಡಿದ್ದಾರೆ, *ಕಾಮನ್ ಸೆನ್ಸ್* ಇಲ್ಲ ಎಂದು ದರ್ಪ ಮೆರೆದಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ.
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ಓರ್ವ ಸಾಮಾನ್ಯ ಮಹಿಳೆಗೆ ಅದರಲ್ಲೂ ಮಹಿಳಾ ದಿನಾಚರಣೆಯಂದು ಅವಮಾನ ಎಸಗಿರುವುದು ಐಪಿಸಿ ಸೆಕ್ಷನ್ 498 ಮತ್ತು 354 ಡಿ ಪ್ರಕಾರ ನಿಜಕ್ಕೂ ಅಕ್ಷಮ್ಯ ಅಪರಾಧ. ಹಾಗೂ ಈ ಸಂಬಂಧ ತಾವು ಎಷ್ಟೇ ಪ್ರಯತ್ನ ಪಟ್ಟರೂ ಅಂದಿನಿಂದ ಸದರಿ ಸುಜಾತ ಎಂಬ ಮಹಿಳೆ ಸಂಪರ್ಕಕ್ಕೆ ಸಿಗುತ್ತಿಲ್ಲ.
ಆದ್ದರಿಂದ ಸಂಬಂಧಪಟ್ಟ ಪೊಲೀಸ್ ಇಲಾಖೆ ಸಂಸದ ಎಸ್. ಮುನಿಸ್ವಾಮಿ ಅವರ ಮೇಲೆ  ಮೇಲ್ಕಂಡ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರಲ್ಲದೆ, ಈ ಕುರಿತು ಸಂಸದ ಮುನಿಸ್ವಾಮಿಯವರು ಬಹಿರಂಗವಾಗಿ ಸದರಿ ಮಹಿಳೆಯ ಕ್ಷಮೆ ಕೇಳಬೇಕು, ಅಲ್ಲಿಯವರೆಗೆ ತಾವು ಹೋರಾಟ ನಡೆಸುವುದಾಗಿ  ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!