PLACE YOUR AD HERE AT LOWEST PRICE
ಕೋಲಾರ: ದಲ್ಲಾಳಿ ರಾಜಕಾರಣಿಗಳು, ಲೂಟಿಕೋರ ಉದ್ಯಮಿಗಳು ಹಾಗೂ ಪುರೋಹಿತಶಾಹಿ ವರ್ಗ ದೇಶ ಆಳುತ್ತಿವೆ. ಈ ಮೂವರ ದುಷ್ಟ ಕೂಟವನ್ನು ಕೆಳಗಿಳಿಸಬೇಕು. ಹೀಗಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಈ ಮೂಲಕ ರಾಜ್ಯದ ಅಸ್ಮಿತೆ ಉಳಿಸಬೇಕು’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಸಂಯೋಜಕ ಇಂದೂಧರ ಹೊನ್ನಾಪುರ ಹೇಳಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇಂದಿರಾ ಗಾಂಧಿ ಅವರಿಗಿಂತ ತೀವ್ರವಾದ ಅಘೋಷಿತ ತುರ್ತು ಪರಿಸ್ಥಿತಿಯನ್ನು ಬಿಜೆಪಿ ದೇಶದ ಮೇಲೆ ಹೇರಿದೆ. ಪ್ರಭುತ್ವದ ವಿರುದ್ಧ ಮಾತನಾಡಿದವರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ. ಪತ್ರಕರ್ತರು, ಹೋರಾಟಗಾರರ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಕರಾಳ ಬಿಜೆಪಿ ಅಧ್ಯಯನ ಕೊನೆಗೊಳ್ಳಬೇಕು. ಹೀಗಾಗಿ, ಬಿಜೆಪಿ ಸೋಲಬೇಕು’ ಎಂದರು.
‘ದಲ್ಲಾಳಿಗಳು ದೇಶ ಆಳುತ್ತಿದ್ದಾರೆ. ದ್ವೇಷ ಬಿತ್ತಿ ಮನಸ್ಸುಗಳನ್ನು ಒಡೆಯುತ್ತಿದ್ದಾರೆ. ಹಿಂದೆ ಮುತ್ಸದ್ಧಿ ರಾಜಕಾರಣಿಗಳು ಜನರ ಸಮಸ್ಯೆ ಅರಿತು ದೇಶ ಆಳುತ್ತಿದ್ದರು. ಈಗ ಆಂತರಿಕ ಸಂಘರ್ಷ ಹುಟ್ಟು ಹಾಕಿ ದೇಶ ಆಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಜೆಡಿಎಸ್ ಈಗ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಹೀಗಾಗಿ, ಅವರಿಗೆ ನಮ್ಮ ಬೆಂಬಲ ಇಲ್ಲ. ಕಾಂಗ್ರೆಸ್ ನಮಗೆ ಪರ್ಯಾಯ ಹಾಗೂ ಅನಿವಾರ್ಯ ಅಲ್ಲ. ದಲಿತ ಚಳವಳಿಯು ರಾಜಕಾರಣದಲ್ಲಿ ತೊಡುಗುವುದಿಲ್ಲ ಆದರೆ, ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷಕ್ಕೆ ಷರತ್ತುಬದ್ಧ ಬೆಂಬಲ ನೀಡುತ್ತಿದ್ದೇವೆ.
ರಾಜ್ಯ ಸಂಯೋಜಕ ಎನ್.ಮುನಿಸ್ವಾಮಿ ಮಾತನಾಡಿ, ‘ಬಂಡವಾಳಶಾಹಿಗಳ ಪರ ವಹಿಸಿ ಅವರ ಬಗ್ಗೆ ಪ್ರತಿಪಾದನೆ ಮಾಡುವ ಬಿಜೆಪಿಯನ್ನು ಸೋಲಿಸಬೇಕು. ಜನದ್ರೋಹಿ ಆರ್ಎಸ್ಎಸ್–ಬಿಜೆಪಿಯನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ಗೆ ಷರತ್ತುಬದ್ಧ ಬೆಂಬಲ ಘೋಷಿಸಿದ್ದೇವೆ’ ಕಾರಣ ಬಿಜೆಪಿ ಪಕ್ಷದ ಸಂಸದರೇ ಸಂವಿಧಾನ ಸರಿ ಇಲ್ಲ ಎಂಬ ಮಾತು ಹೇಳುತ್ತಿದ್ದಾರೆ. ಬದಲಾಯಿಸುತ್ತೇವೆ ಎಂಬುದಾಗಿ ಹೇಳಿದರೂ ಅದು ತಪ್ಪು ಎಂದು ಮೇಲಿನ ಸ್ಥಾನದಲ್ಲಿ ಕುಳಿತವರು ಹೇಳುತ್ತಿಲ್ಲ. ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಮೇಲೆ ಅವರಿಗೆ ನಂಬಿಕೆನೇ ಇಲ್ಲ. ಆರ್ಎಸ್ಎಸ್ಗೆ ಬೇಕಾದ ನೀತಿ ರೂಪಿಸುತ್ತಿದ್ದಾರೆಯೇ ಹೊರತು ಜನರಿಗೆ ಬೇಕಾದ ನೀತಿ ಅಲ್ಲ. ರಾಜ್ಯ ಬಿಜೆಪಿ ಸರ್ಕಾರ ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ನಿಲ್ಲಿಸಿದೆ. ಸಮುದಾಯದ ಅನುದಾನ ಕಡಿತ ಮಾಡಿದೆ’ ಎಂದು ಆರೋಪಿಸಿದರು.
‘ಜೆಡಿಎಸ್ಗೆ ಸಂಖ್ಯೆಬಲ ಇಲ್ಲ. ವರುಣಾದಲ್ಲಿ ಆ ಪಕ್ಷದಿಂದ ಸಿದ್ದರಾಮಯ್ಯ ವಿರುದ್ಧ ದಲಿತ ಅಭ್ಯರ್ಥಿ ನಿಲ್ಲಿಸಿ ಮತ ವಿಭಜನೆ ಮಾಡಲಾಗುತ್ತಿದೆ. ಹೀಗಾಗಿ, ಅವರಿಗೆ ಬೆಂಬಲಿಸಲ್ಲ. ಕಾಂಗ್ರೆಸ್ಗೆ ಸಂವಿಧಾನದ ಮೇಲೆ ನಂಬಿಕೆ ಇದೆ. ಹೀಗಾಗಿ, ಅವರಿಗೆ ಬೆಂಬಲ’ ಎಂದರು.
ಚಾಲನಾ ಸಮಿತಿಯ ರಾಜ್ಯ ಸಂಯೋಜಕರಾದ ಎನ್.ವೆಂಕಟೇಶ್, ರಾಜ್ಯ ಸಂಯೋಜಕ ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್,
ವಿ.ನಾಗರಾಜ್, ಅಣ್ಣಯ್ಯ, ಜಿಗಣಿ ಶಂಕರ್, ವಿ. ನಾರಾಯಣಸ್ವಾಮಿ, ಬಿ.ಶ್ರೀರಂಗ, ದಸಂಸ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ ಇದ್ದರು.