ಬಂಗಾರಪೇಟೆ:18 ವರ್ಷ ತುಂಬಿರುವವರೆಲ್ಲರೂ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಸುಭದ್ರ ಪ್ರಜಾಪ್ರಭುತ್ವವನ್ನು ಕಟ್ಟಬೇಕು, ಯಾರೊಬ್ಬರೂ ಸಹ ಮತದಾನದ ಅವಕಾಶದಿಂದ ವಂಚಿತರಾಗಬಾರದು ಎಂದು ಚುನಾವಣೆ ಅಧಿಕಾರಿ ಡಾ.ಎಂ.ಕೆ.ಶೃತಿ ಹೇಳಿದರು.
ಪಟ್ಟಣದಲ್ಲಿ ಪುರಸಭೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು ಮತದಾನವನ್ನು ಪವಿತ್ರ ಕರ್ತವ್ಯವೆಂದು ಪರಿಗಣಿಸಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಬೇಕು ಮತ್ತು ಗೌಪ್ಯ ಮತದಾನ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡಬೇಕೆಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ್ ಮಾತನಾಡಿ, ನಮ್ಮ ಸಂವಿಧಾನವು 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರೀಕರಿಗೆ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಭವ್ಯ ಭಾರತ ನಿರ್ಮಾಣ ಮಾಡುವ ಅವಕಾಶ ಕಲ್ಪಿಸಿದ್ದು ತಾಲ್ಲೂಕಿನ ಎಲ್ಲ ಮತದಾರರು ತಪ್ಪದೇ ಮತದಾನ ಮಾಡಬೇಕೆಂದರು.
ಮುಂದಿನ ವಾರ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬರೂ ಯಾವುದೇ ಆಮಿಷಗಳಿಗೆ ಬಲಿಯಾಗದೇ, ಮುಕ್ತವಾಗಿ, ನ್ಯಾಯ ಸಮ್ಮತವಾಗಿ ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಬೇಕೆಂದು ಮನವಿ ಮಾಡಿದರು.

ಪುರಸಭೆ ಮುಖ್ಯ ಅಧಿಕಾರಿ ಚಲಪತಿ ಮಾತನಾಡಿ, ಮತದಾರರು ತಮ್ಮ ಮತದಾನದ ಮೌಲ್ಯವನ್ನು ಅರಿತುಕೊಳ್ಳುವ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಉತ್ಸುಕತೆಯಿಂದ ಭಾಗವಹಿಸುವುದು ಮುಖ್ಯವಾಗಿದೆ.
ಇಂದಿನ ಯುಗದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಮತ್ತು ಜನಪ್ರತಿನಿಧಿಗಳು ರಾಷ್ಟ್ರವೆಂಬ ರಥದ ಎರಡು ಚಕ್ರಗಳಿದ್ದಂತೆ, ಒಂದಕ್ಕೇನಾದರೂ ಧಕ್ಕೆಯಾದಲ್ಲಿ ಮತ್ತೊಂದಕ್ಕೆ ಧಕ್ಕೆಯಾಗುವುದು ಖಚಿತವಾಗಿದ್ದು, ಮತದಾರರು ಕಡ್ಡಾಯವಾಗಿ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಬೇಕೆಂದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಿಂದ ಜಾಥಾ ಹೊರಟು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ,ಬೂದಿಕೋಟೆ ವೃತ್ತ, ಪಟ್ಟಣದ ಬಸ್ ನಿಲ್ದಾಣ, ಜೂನಿಯರ್ ಕಾಲೇಜ್ ಮೈದಾನದವರೆಗೂ ಮತದಾನಕ್ಕಿಂತ ಮತ್ತೊಂದಿಲ್ಲ ನನ್ನ ಮತ ನನ್ನ ಹಕ್ಕು ಎಂದು ಘೊಷಣೆಗಳನ್ನು ಕೂಗಿ ತಾಲೂಕಿನ ಜನತೆಗೆ ಅರಿವನ್ನುಂಟು ಮಾಡಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು , ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು , ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.