PLACE YOUR AD HERE AT LOWEST PRICE
ದಕ್ಷಿಣ ದಿಲ್ಲಿಯ ಜಂಗ್ಪುರದಲ್ಲಿ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿದ ಕಳ್ಳರು ₹ 20-25 ಕೋಟಿ ಮೌಲ್ಯದ ಆಭರಣದೊಂದಿಗೆ ಪರಾರಿಯಾಗಿದ್ದಾರೆ. ಭೋಗಲ್ ಪ್ರದೇಶದ ಉಮ್ರಾವ್ ಜ್ಯುವೆಲ್ಲರ್ಸ್ನಲ್ಲಿ ಭಾನುವಾರ ಸಂಜೆ ಮತ್ತು ಮಂಗಳವಾರದ ನಡುವೆ ಈ ಘಟನೆ ನಡೆದಿದೆ.
ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಕೃತ್ಯವನ್ನು ಎಸಗಿದ್ದಾರೆ. ಕಳ್ಳತನ ಮಾಡುವ ಮುನ್ನ ಆಭರದ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಆಭರಣಗಳನ್ನು ಇಟ್ಟಿದ್ದ ಸ್ಟ್ರಾಂಗ್ರೂಮ್ (ಲಾಕರ್) ರಂಧ್ರವನ್ನು ಕೊರೆದು ಆಭರಣಗಳನ್ನು ದೋಚಲಾಗಿದೆ.
ನಾಲ್ಕು ಅಂತಸ್ತಿನ ಕಟ್ಟಡದ ಟೆರೇಸ್ನಿಂದ ಒಳಗೆ ಬಂದಿರುವ ಕಳ್ಳರು ಸ್ಟ್ರಾಂಗ್ರೂಮ್ ಇರುವ ನೆಲಮಹಡಿಯನ್ನು ತಲುಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಅವರು ಆಭರಣಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್ ಅನ್ನು ಪ್ರವೇಶಿಸಲು ಅದರ ಗೋಡೆಗೆ ರಂಧ್ರವನ್ನು ಕೊರೆದಿದ್ದಾರೆ. ಇವುಗಳನ್ನು ಕದಿಯುವುದಲ್ಲದೆ, ಶೋರೂಂನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ.
ಈ ಕಳ್ಳತನ ಪ್ರಕರಣ ಕಂಡು ದೆಹಲಿ ನಗರವೇ ಬೆಚ್ಚಿ ಬಿದ್ದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ತನಿಖೆಯನ್ನು ಚುರುಕುಗೊಳಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಕಳ್ಳರನ್ನು ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಭಾನುವಾರ ಸಂಜೆ ಶೋರೂಂಗೆ ಬೀಗ ಹಾಕಿದ್ದ ಶೋರೂಂ ಮಾಲೀಕರು ಮಂಗಳವಾರ ಬೆಳಗ್ಗೆ ಶೋ ರೂಂ ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸೋಮವಾರದಂದು ಅಂಗಡಿಯನ್ನು ಬಂದ್ ಮಾಡಿರಲಾಗುತ್ತದೆ. ಕಳ್ಳರು ಸಂಪರ್ಕ ಕಡಿತಗೊಳಿಸುವ ಮೊದಲು ಸಿಸಿಟಿವಿಯಲ್ಲಿ ದಾಖಲಾಗಿದ್ದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಯಾರನ್ನೂ ಬಂಧಿಸಿಲ್ಲ.
ಹರ್ಯಾಣದ ಅಂಬಾಲಾದಲ್ಲಿ ಸೋಮವಾರ ಇದೇ ರೀತಿಯ ಘಟನೆ ವರದಿಯಾಗಿದ್ದು, ಕಳ್ಳರು ಸಹಕಾರಿ ಬ್ಯಾಂಕ್ಗೆ ನುಗ್ಗಿ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಬ್ಯಾಂಕ್ಗೆ ಪ್ರವೇಶಿಸಲು ಗ್ಯಾಸ್ ಕಟ್ಟರ್ ಬಳಸಿ ಗೋಡೆಗೆ ರಂಧ್ರ ಕೊರೆದು 32 ಲಾಕರ್ಗಳನ್ನು ಒಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾರಾಂತ್ಯದಲ್ಲಿ ಬ್ಯಾಂಕ್ ಮುಚ್ಚಿದ್ದರಿಂದ ಸೋಮವಾರ ಬೆಳಗ್ಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.