PLACE YOUR AD HERE AT LOWEST PRICE
ರೇಷ್ಮೆಬೆಳೆಗಾರ ರೈತರು ತಾವು ಬೆಳೆದ ರೇಷ್ಮೆ ಗೂಡನ್ನು ಅನ್ನದಾತರ ಹಿತ ರಕ್ಷಣೆಗಾಗಿ ಸ್ಥಾಪಿಸಿರುವ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲೇ ಮಾರಾಟ ಮಾಡುವಂತೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕೆಲವು ವಂಚಕರು ಗೂಡಿಗೆ ಹೆಚ್ಚಿನ ದರ ನೀಡುವುದಾಗಿ ನಂಬಿಸಿ ರೈತರಿಗೆ ಮೋಸ ಮಾಡುತ್ತಿದ್ದು, ರೈತರು ಅಂತಹ ವಂಚಕರಿಗೆ ಬಲಿಯಾಗದೇ ತಾವು ಬೆಳೆದ ಗೂಡನ್ನು ಕಡ್ಡಾಯವಾಗಿ ಸರ್ಕಾರಿ ರೇಷ್ಮೆ ಗೂಡುಮಾರುಕಟ್ಟೆಯಲ್ಲೇ ಮಾರಾಟ ಮಾಡುವಂತೆ ಅವರು ಕೋರಿದ್ದಾರೆ.
ಈಗಾಗಲೇ ಪಕ್ಕದ ಚಿಕ್ಕಬಳ್ಳಾಫುರ ಜಿಲ್ಲೆಯ ಶಿಢ್ಲಘಟ್ಟದಲ್ಲಿ ಕೆಲವು ರೈತರು ತಮ್ಮ ಗೂಡು ಮಾರಿ ಹಣ ಸಿಗದೇ ವಂಚನೆಗೊಳಗಾದ ಘಟನೆಗಳು ನಡೆದಿರುವ ಹಿನ್ನಲೆಯಲ್ಲಿ ಅಲ್ಲಿ ಪೊಲೀಸ್ ಇಲಾಖೆಯೇ ಪ್ರಕಟಣೆ ಹೊರಡಿಸಿ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲೇ ರೈತರು ಗೂಡು ಮಾರಲು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಕೆಲವು ವಂಚಕರು ರೈತರ ಗೂಡಿಗೆ ಹೆಚ್ಚಿನ ಬೆಲೆ ನಿಗಧಿ ಮಾಡಿ ವಂಚಿಸಿ, ಸ್ವಲ್ಪ ಹಣ ಮೊದಲು ನೀಡಿ ಉಳಿದ ಹಣವನ್ನು ಚೆಕ್, ಫೋನ್ಪೇ, ಗೂಗಲ್ ಪೇ ಮತ್ತಿತರ ರೂಪದಲ್ಲಿ ನೀಡುವುದಾಗಿ ವಂಚಿಸುತ್ತಿದ್ದಾರೆ ಈ ಬಗ್ಗೆ ರೈತರು ಎಚ್ಚರವಹಿಸಲು ಕೋರಿರುವ ಅವರು ಈ ವಿಷಯವನ್ನು ತಮ್ಮ ಊರಿನ,ನೆರೆಹೊರೆಯ ರೈತರಿಗೂ ತಿಳಿಸಿ ವಂಚನೆಯಾಗುವುದನ್ನು ತಪ್ಪಿಸಿ ಎಂದು ಮನವಿ ಮಾಡಿದ್ದಾರೆ.
ರೇಷ್ಮೆ ಮಾರುಕಟ್ಟೆ ರೈತರ ಅಭ್ಯುದಯಕ್ಕೆ ಹಾಗೂ ತೂಕ,ಬೆಲೆಯಲ್ಲಿ ಆಗುವ ವಂಚನೆ ತಡೆಯಲು ಆರಂಭಿಸಿರುವ ಅತ್ಯಂತ ಸೂಕ್ತ ವ್ಯವಸ್ಥೆಯಾಗಿದೆ, ರೈತರು ಇಲ್ಲಿ ಗೂಡು ಮಾರದೇ ಹೊರಗೆ ಗೂಡು ಮಾರಿ ಮೋಸ ಹೋಗುವುದರ ಜತೆಗೆ ರೈತರಿಗಾಗಿ ನಿರ್ಮಿಸಿರುವ ಈ ವ್ಯವಸ್ಥೆಗೂ ಧಕ್ಕೆ ತರುವುದನ್ನು ತಪ್ಪಿಸಲು ಎಲ್ಲಾ ರೈತರು ಕಡ್ಡಾಯವಾಗಿ ತಾವು ಬೆಳೆದ ಗೂಡುಗಳನ್ನು ಸರ್ಕಾರಿ ರೇಷ್ಮೆ ಮಾರಕಟ್ಟೆಯಲ್ಲೇ ಮಾರಲು ಮನವಿ ಮಾಡಿದ್ದಾರೆ.