PLACE YOUR AD HERE AT LOWEST PRICE
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಮೊದಲು ಕೋಲಾರ ಜಿಲ್ಲೆಯ ಮುಖಂಡರಾದ ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ಕುಮಾರ್ ನಡುವೆ ಸಂಧಾನ ನಡೆಯಬೇಕು ಎಂದು ಕಿಸಾನ್ಖೇತ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಕೆಪಿಸಿಸಿ ನಾಯಕರ॑ನ್ನು॑ ಒತ್ತಾಯಿಸಿರುವುದು ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜ.೨೩ ರ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆಯಾಗಿ ಕರೆದಿದ್ದ ಮುಖಂಡರ ಸಭೆಯಲ್ಲಿ ಊರುಬಾಗಿಲು ಶ್ರೀನಿವಾಸ್ ಮಾತನಾಡಿ ತಮ್ಮ ಅಭಿಪ್ರಾಯವನ್ನು ಮುಖಂಡರು ಮುಂದೆ ಸ್ಪಷ್ಟವಾಗಿ ಮಂಡಿಸಿದ್ದಾರೆ.
ಕೆ.ಎಚ್.ಮುನಿಯಪ್ಪ ಕಳೆದ ೩೦ ವರ್ಷಗಳಿಂದಲೂ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಳೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಗೌರವ ತಂದುಕೊಟ್ಟಿದ್ದಾರೆ.
ಆದರೆ, ಕಳೆದ ನಾಲ್ಕೂವರೆ ವರ್ಷಗಳಿಂದ ಮುಖಂಡರ ನಡುವೆ ಮನಸ್ತಾಪ ಏರ್ಪಟ್ಟಿದೆ, ಇದರಿಂದ ರಮೇಶ್ಕುಮಾರ್ ಮತ್ತವರ ಜೊತೆಯ ಮುಖಂಡರಿಗೆ ಮಾತಿನ ಆಘಾತವಾಗಿದೆ. ಕೆ.ಎಚ್.ಮುನಿಯಪ್ಪರಿಗೆ ಸೋಲಿನ ಮೂಲಕ ರಾಜಕೀಯವಾಗಿ ಆಘಾತವಾಗಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಮುಖಂಡರನ್ನು ಒಟ್ಟುಗೂಡಿಸಿ ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆ ತರುವ ವಿಚಾರದಲ್ಲಿ ಸಿದ್ದರಾಮಯ್ಯ ಕೆ.ಎಚ್.ಮುನಿಯಪ್ಪ ಮನೆಗೆ ತೆರಳಿ ಅವರನ್ನು ಕೋಲಾರದ ಕಾರ್ಯಕ್ರಮಕ್ಕೆ ಕರೆ ತಂದರು. ಇದು ಶರಣಾಗತಿ ಅಲ್ಲ ಸಂಧಾನ ಎಂಬುದನ್ನು ಮುಖಂಡರು ಅರಿತುಕೊಳ್ಳಬೇಕು.
ಈ ಬೆಳವಣಿಗೆಯಿಂದ ಮುಖಂಡರ ಮಧ್ಯೆ ಇದ್ದ ಬಿಗು ವಾತಾವರಣ ತಿಳಿಗೊಂಡಿದೆ. ಇನ್ನು ಮುಂದೆ ಈ ತಿಳಿ ಕೊಳಕ್ಕೆ ಕಲ್ಲು ಎಸೆಯುವುದು ಬಿಟ್ಟರೆ ಪರಿಸ್ಥಿತಿ ಮತ್ತಷ್ಟು ತಿಳಿಗೊಳ್ಳುತ್ತದೆ. ಇದರಿಂದ ಸಿದ್ದರಾಮಯ್ಯ ಸೇರಿದಂತೆ ಕೋಲಾರದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆಲ್ಲಲು ಸಹಕಾರಿಯಾಗುತ್ತದೆ.
ಈ ಜವಾಬ್ದಾರಿಯನ್ನು ನಜೀರ್ ಅಹಮದ್ ತೆಗೆದುಕೊಂಡಿದ್ದಾರೆ. ಆದಷ್ಟು ಬೇಗ ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ಕುಮಾರ್ ನಡುವೆ ಸಂಧಾನ ನಡೆಯಲಿ. ೨೩ ರ ಕಾರ್ಯಕ್ರಮಕ್ಕೂ ಮುಂಚೆ ಈ ಸಂಧಾನ ಏರ್ಪಡಲಿ, ಇದರಿಂದ ಕೋಲಾರದಲ್ಲಿ ಕಾಂಗ್ರೆಸ್ಗೆ ಹೊಸ ಚೈತನ್ಯ ಬರುತ್ತದೆ ಎಂದು ಸಲಹೆ ನೀಡಿದ್ದಾರೆ.
ಊರುಬಾಗಿಲು ಶ್ರೀನಿವಾಸ್ರ ಈ ಮಾತುಗಳಿಗೆ ಯಾರೂ ಪ್ರತ್ಯುತ್ತರ ನೀಡಿಲ್ಲವಾದರೂ ಮೌನದಿಂದ ಸಮ್ಮತಿಸಿದ್ದಾರೆ. ಸಭೆಯಲ್ಲಿದ್ದ ಬಹುತೇಕ ಮುಖಂಡರು ಒಪ್ಪಿಕೊಂಡಿದ್ದಾರೆ. ನಾನೊಂದು ತೀರ, ನೀನೊಂದು ತೀರ ಎಂಬಂತಿರುವ ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ಕುಮಾರ್ ನಡುವೆ ಸಂಧಾನ ಯಾವಾಗ ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಸದ್ಯಕ್ಕೆ ಎದುರು ನೋಡುತ್ತಿದೆ.