PLACE YOUR AD HERE AT LOWEST PRICE
ಕೋಲಾರ:ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದಂತೆ, ಕಾಂಗ್ರೆಸ್ ಸರ್ಕಾರ ರೈತರಿಗೆ ಮಾರಕವಾದ ಕೃಷಿ-ಭೂಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಚಳವಳಿ ಆರಂಭಿಸಲಾಗುತ್ತದೆ ಎಂದು ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರದ ಮೂರು ಕೃಷಿ ಕಾಯ್ದೆ ರದ್ದತಿಗೆ ರೈತರು ದೆಹಲಿಯಲ್ಲಿ ನಡೆಸಿದ ಹೋರಾಟಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಬೆಂಬಲ ನೀಡಿದ್ದರು. ರಾಜ್ಯದಲ್ಲೂ ಕಾಯ್ದೆಗಳ ವಾಪಸ್ಸಿಗೆ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕಾಯ್ದೆಗಳನ್ನು ವಾಪಸ್ಸು ಪಡೆಯುವ ಭರವಸೆ ನೀಡಿದ್ದರು.
ಆದರೆ ಅದಕ್ಕೆ ವ್ಯತಿರಿಕ್ತವಾಗಿ ಸರ್ಕಾರ ಕೆಲಸ ಮಾಡುತ್ತಿರುವುದು ಖಂಡನೀಯ. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರಿಗೆ ನೋಟಿಸ್ ನೀಡಿ ಪರವಾನಗಿ ರದ್ದು ಮಾಡಲು ಮುಂದಾಗಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ಕಾಯ್ದೆಗಳನ್ನು ರದ್ದು ಮಾಡುವ ಬದಲು ಅನುಷ್ಠಾನಕ್ಕೆ ಮುಂದಾಗಿದೆ ಎಂದರು.
ರಾಜ್ಯದಲ್ಲಿ ಭೂಮಿ ಖರೀದಿ, ಮಾರಾಟ ಜೋರಾಗಿದೆ. ಉಪನೋಂದಣಾಧಿಕಾರಿ ಕೆಲಸದ ಅವಧಿ ಹೆಚ್ಚಳ ಮಾಡಲಾಗಿದೆ. ಆದಾಯದ ಕಾರಣದಿಂದಾಗಿ ಸರ್ಕಾರವು ಕಂದಾಯ ಇಲಾಖೆಗೆ ಆದ್ಯತೆ ನೀಡಿದೆ. ನೋಂದಣಿ ಶುಲ್ಕವೂ ಏರಿಕೆ ಮಾಡಲಾಗಿದೆ. ₹ 26 ಸಾವಿರ ಕೋಟಿ ಗುರಿ ಹೊಂದಿದ್ದು, ಪ್ರಸ್ತುತ ₹ 30 ಸಾವಿರ ಕೋಟಿ ಗುರಿಯತ್ತ ಸಾಗಿದೆ. ಮತಗಳಿಗಾಗಿ ರೈತರನ್ನು, ಭೂಮಿಯನ್ನು ಮಾರಾಟಕ್ಕೆ ಇಟ್ಟಿದ್ದೀರಿ. ಭೂಮಿ ವಾಣೀಜ್ಯೀಕರಣಗೊಳಿಸಿದ ಕಾರಣ ರೈತರು ವ್ಯಾಪಾರದ ವಸ್ತುವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ತೆಲಂಗಾಣ ಚುನಾವಣಾ ಭಾಷಣ ಮಾಡುವಾಗ ರೈತರ ಪರವಿದ್ದು, ದೆಹಲಿ ಹೋರಾಟಕ್ಕೆ ಬೆಂಬಲಿಸಿದ್ದೇವೆ ಎಂದಿದ್ದಾರೆ. ಆದರೆ, ಕರ್ನಾಟಕದಲ್ಲಿ ಕಾಯ್ದೆಗಳನ್ನು ಜಾರಿ ಮಾಡಿದ್ದು ಯಾವ ರೀತಿ ರೈತರ ಪರ ಎಂದು ಪ್ರಶ್ನಿಸಿದರು. ವಿದ್ಯುತ್ ಗೆ ಸಂಬಂಧಿಸಿದಂತೆ ಸೆ.22 ರಂದು ಆದೇಶ ಮಾಡಿದ್ದು, ರೈತರೇ ಟ್ರ್ಯಾನ್ಸ್ಫಾರ್ಮರ್ ಖರೀದಿ ಮಾಡಬೇಕೆಂದಿರುವುದು ಖಂಡನೀಯ.
ರಾಹುಲ್ ಗಾಂಧಿಯವರೇ, ಇದೇ ಸುಳ್ಳನ್ನು ಎಷ್ಟು ರಾಜ್ಯದಲ್ಲಿ ಹೇಳಬೇಕೆಂದು ಹೊರಟಿದ್ದೀರಿ. ಸುಳ್ಳು ಹೇಳುವುದನ್ನು ನಿಲ್ಲಿಸಿ. ರೈತರ ಪರ ಇರುವುದಾದರೆ ಕಾಯ್ದೆ ವಾಪಸ್ ಪಡೆಯಿರಿ. ಇಲ್ಲವಾದಲ್ಲಿ ನೀವೂ ಸುಳ್ಳುಗಾರರು ಎಂದು ಹೇಳಲು, ಪಂಚರಾಜ್ಯಗಳ ಚುನಾವಣೆಯಲ್ಲಿ ರೈತ ಸಂಘ ತೆಲಂಗಾಣ ಪ್ರವೇಶ ಮಾಡುತ್ತದೆ ಎಂದು ಎಚ್ಚರಿಸಿದರು.
ಕಾವೇರಿ ವಿಚಾರದಲ್ಲಿ ರಾಜ್ಯದ ರೈತರಿಗೆ ಅನ್ಯಾಯವೆಸಗಿ ನೀರು ಬಿಡುವ ಕೆಲಸ ಮಾಡಿದ್ದೀರಿ. ಯಾವ ರೀತಿ ತಮ್ಮನ್ನು ರೈತರ ಪರ ಎಂದು ನಂಬಬಹುದು. ನಿಮಗೂ ಬಿಜೆಪಿಯವರಿಗೆ ಏನು ವ್ಯತ್ಯಾಸ’ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರೈತಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ, ಉಪಾಧ್ಯಕ್ಷ ವೀರೇಂದ್ರ, ಜೆಸಿಬಿ ರಮೇಶ್, ಬಸವರಾಜ್, ಸುರೇಶ್, ಗಂಗಾಧರ್ ಇದ್ದರು.