• Sat. May 4th, 2024

PLACE YOUR AD HERE AT LOWEST PRICE

ಕೆಜಿಎಫ್:ನಗರಕ್ಕೆ ಡಾ.ಅಂಬೇಡ್ಕರ್ ಬಂದು ಹೋಗಿದ್ದ ಸವಿ ನೆನಪಿಗಾಗಿ ಅವರು ಬಂದಿದ್ದ ಸ್ಥಳದಲ್ಲಿ ರಾಷ್ಟ್ರೀಯ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್ ಒತ್ತಾಯಿಸಿದರು.

ಅವರು ನಗರದ ತಾಲ್ಲೂಕು ಆಡಳಿತ ಭವನದ ಎದುರು ದಸಂಸ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿ, ೧೯೫೬ರ ಫೆಬ್ರವರಿ ೨೩ರಂದು ಡಾ.ಅಂಬೇಡ್ಕರ್ ಚಿನ್ನದ ಗಣಿ ಪ್ರದೇಶಕ್ಕೆ ಬಂದಿದ್ದರು.

ಅದರ ಸಲುವಾಗಿ ಅವರು ಬಂದಿದ್ದ ಜಾಗದಲ್ಲಿ ಸ್ಮಾರಕ ಹಾಗೂ ಮ್ಯೂಸಿಂಯ ನಿರ್ಮಾಣ ಮಾಡಬೇಕೆಂಬ ದಲಿತ ಸಂಘರ್ಷ ಸಮಿತಿಯ ಒತ್ತಾಯದ ಮೇರೆಗೆ ಕಳೆದ ೨೦೨೨ರಲ್ಲಿ ಕೆಜಿಎಫ್‌ನ ಸರ್ವೆ ನಂ.೨ರಲ್ಲಿ ೫ ಎಕರೆ ಜಮೀನನ್ನು ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕಾಗಿ ಮೀಸಲಿಡಲಾಗಿತ್ತು ಹಾಗೂ ಬಜೆಟ್‌ನಲ್ಲಿಯೂ ಸಹ ೨ ಕೋಟಿ ಹಣವನ್ನು ಘೋಷಣೆ ಮಾಡಿ  ೧.೫೫ ಕೋಟಿ ಹಣವನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಲಾಗಿತ್ತು.

ಆದರೆ ಸರ್ಕಾರ ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ನೀಡಿದ್ದ ೫ ಎಕರೆ ಜಾಗವನ್ನು ರದ್ದುಪಡಿಸಿ  ಜಿಲ್ಲಾಧಿಕಾರಿ ಅಕ್ರಂ ಪಾಷ ಕಳೆದ ಜನವರಿ ೧೭ ರಂದು ಕೆಜಿಎಫ್ ನಗರಸಭೆಗೆ ಪತ್ರ ಬರೆದು ಅಂಬೇಡ್ಕರ್ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣಕ್ಕೆ ಮಂಜೂರು ಮಾಡಿದ್ದ ೫ ಎಕರೆ ಜಾಗ ಹಾಗೂ ಬೀದಿ ಬದಿ ವ್ಯಾಪಾರಿಗಳ ಮನೆ ನಿರ್ಮಾಣಕ್ಕೆ ಮಂಜೂರು ಮಾಡಿದ್ದ ೯ ಎಕರೆ ಜಾಗವನ್ನು ರದ್ದುಗೊಳಿಸಿ, ಈ ಎರಡೂ ಜಾಗಗಳನ್ನು ಕೈಗಾರಿಕಾ ಪ್ರದೇಶಕ್ಕೆ ಮೀಸಲಿಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.

ಈಗಾಗಲೇ ಮಂಜೂರು ಮಾಡಿದ್ದ ಜಾಗವನ್ನು ರದ್ದುಪಡಿಸಿರುವುದಲ್ಲದೇ ಕನಿಷ್ಟ ಪಕ್ಷ ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಪರ್ಯಾಯ ಸ್ಥಳವನ್ನೂ ತೋರಿಸದೆ ಅಂಬೇಡ್ಕರ್‌ರವನ್ನು ಕಡೆಗಣಿಸುವ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.

ಕೂಡಲೇ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಜಾಗವನ್ನು ಗುರ್ತಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ನಾಗವೇಣಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಗಳಿಗೆ ದೂರವಾಣಿಯ ಮೂಲಕ ವಿಷಯ ತಿಳಿಸಿ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸಂಪತ್, ಜಗನ್, ಮೋಹನ್, ವಿಷ್ಣುಕುಮಾರ್, ಕಂಗಾನಲ್ಲೂರು ದೇವರಾಜ್ ಮೊದಲಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!