PLACE YOUR AD HERE AT LOWEST PRICE
ಬಂಗಾರಪೇಟೆ:ಅನೇಕ ಗ್ರಾಮೀಣ ಮಕ್ಕಳಲ್ಲಿ ಓದುವ ಹಂಬಲವಿದ್ದರೂ ಅನುಕೂಲಗಳ ಕೊರತೆಯಿಂದ ವಿದ್ಯೆಯಿಂದ ಹಿಂದೆ ಸರಿಯುವಂತಾಗಿದೆ. ಅಂತಹ ಮಕ್ಕಳನ್ನು ಗುರುತಿಸಿ ವಿದ್ಯೆಗೆ ಪೂರಕ ವಾತಾವರಣ ಕಲ್ಪಿಸಿದರೆ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದು ದಲಿತ ಸಮಾಜ ಸೇನೆ ರಾಜ್ಯಧ್ಯಕ್ಷ ಸೂಲಿಕುಂಟೆ ಆನಂದ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ಪಟ್ಟಣದ ಸರಸ್ವತಿ ವಿದ್ಯಾನಿಕೇತನ ಕನ್ನಡ ಅನುದಾನಿತ ಶಾಲಾ ಮಕ್ಕಳಿಗೆ ಸಂಘಟನೆವತಿಯಿಂದ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಸಮಾಜದಲ್ಲಿ ಓದುವ ಹಂಬಲವನ್ನು ಅನೇಕ ಮಕ್ಕಳು ಹೊಂದಿರುರುತ್ತಾರೆ. ಆದರೆ ಮನೆಯಲ್ಲಿನ ವಾತಾವರಣ ಹಾಗೂ ಸೌಲಭ್ಯಗಳ ಕೊರೆತೆಯಿಂದ ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ. ಅಂತಹ ಪ್ರತಿಭಾವಂತ ಮಕ್ಕಳನ್ನು ಪ್ರತಿಯೊಬ್ಬರು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು.
ದಲಿತ ಸಮಾಜ ಸೇನೆಯು ಬರೀ ಹೋರಾಟಗಳನ್ನು ಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಸಮಾಜದ ಒಳಿತಿಗಾಗಿಯೂ ಹಾಗೂ ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿದೆ ಎಂದರು.
ಪ್ರತಿ ವರ್ಷ ಸಂಘಟನೆಯಿಂದ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ನೆರವನ್ನು ನೀಡುತ್ತಿದೆ. ಈ ವರ್ಷ ಸಹ ಪಟ್ಟಣದ ಸರಸ್ವತಿ ವಿದ್ಯಾನಿಕೇತನ ಶಾಲೆಯಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಬಡ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇಂತಹ ಮಕ್ಕಳಿಗೆ ಲೇಖನಿ ಸಾಮಾಗ್ರಿಗಳನ್ನು ಪೂರೈಸಿ ವಿದ್ಯಾಭ್ಯಾಸಕ್ಕೆ ಪೋತ್ಸಾಹ ನೀಡಿದರೆ ಮುಂದೆ ಸಮಾಜದ ಆಸ್ತಿಯಾಗಿ ಹೊರಹೊಮ್ಮುವರು. ಆದ್ದರಿಂದ ಉಳ್ಳವರು ಪ್ರತಿಯೊಬ್ಬರೂ ಬಡ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ನೆರವು ನೀಡಿ ನವ ಸಮಾಜ ನಿರ್ಮಾಣಕ್ಕೆ ನಾಂದಿಯಾಡಬೇಕೆಂದು ಹೇಳಿದ ಅವರು ಅಂಬೇಡ್ಕರ್ ಸಹ ಹೆಚ್ಚು ಶಿಕ್ಷಣ,ಸಂಘಟನೆಗೆ ಒತ್ತು ನೀಡಿದ್ದರು ಎಂದು ಸ್ಮರಿಸಿ ಅವರ ಹಾದಿಯಲ್ಲಿ ಎಲ್ಲಾ ಸಂಘಟನೆಗಳು ಸಾಗಬೇಕೆಂದು ಸಲಹೆ ನೀಡಿದರು.
ಈ ವೇಳೆ ಶಾಲೆಯ ಮುಖ್ಯಶಿಕ್ಷಕ ಆರ್.ಅಶ್ವಥ್, ಮಂಜುನಾಥ್ ಸಂಘದ ರಾಜ್ಯ ಕಾರ್ಯದರ್ಶಿ ಅಂಬರೀಶ್, ಜಿಲ್ಲಾಧ್ಯಕ್ಷರಾದ ಗೌತಮ್, ಕಾರ್ಯದರ್ಶಿ ಅರ್ಜುನ್, ತಾಲೂಕು ಅಧ್ಯಕ್ಷ ನಾಗೇಶ್, ಗೋವಿಂದ,ಜಾನಿ, ಶ್ರೀಕಾಂತ್, ಆಟೋ ಕರ್ಣ ಮತ್ತು ಇತರರು ಇದ್ದರು.