PLACE YOUR AD HERE AT LOWEST PRICE
ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಫೆಬ್ರುವರಿ ತಿಂಗಳಿನಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಕೋಲಾರಕ್ಕೆ ಆಗಮಿಸಲಿದ್ದಾರೆ ಎಂದು ಎ.ಎ.ಪಿ. ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಸುಹೈಲ್ ದಿಲ್ ನವಾಜ್ ತಿಳಿಸಿದರು.
ಇಲ್ಲಿನ ಅಂತರಗಂಗೆ ತಪ್ಪಲಿನ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು. ಇಲ್ಲಿಯವರೆಗೆ ಸರ್ಕಾರ ನಡೆಸಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಜನರಿಗೆ ಮೋಸ ಮಾಡಿವೆ, ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ವಿಫಲವಾಗಿದೆ. ಅವರು ಜನಾಭಿಪ್ರಾಯವನ್ನು ಧಿಕ್ಕರಿಸಿ ಅನೈತಿಕ ರಾಜಕೀಯ ಸಂಬಂಧಗಳನ್ನು ಹೊಂದುವ ಮೂಲಕ ಜನ ಸಾಮಾನ್ಯರಿಗೆ ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಕಳೆದ ಮೂರು ಚುನಾವಣೆಗಳಿಂದಲೂ ಸರ್ಕಾರ ನಡೆಸುತ್ತಿದೆ. ದೆಹಲಿಯಲ್ಲಿ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಉಚಿತ ಶಿಕ್ಷಣ, ಪ್ರತಿ ಮನೆಗೂ ಉಚಿತ ವಿದ್ಯುತ್, ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ಮತ್ತು ಸಮವಸ್ತ್ರ ಉಚಿತವಾಗಿ ನೀಡಲಾಗುತ್ತಿದೆ. ಹೀಗೆ ಬಡತನ ನಿರ್ಮೂಲನೆಗೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಯೋಜಿಸಿದೆ, ಇದರಿಂದ ನೆರೆಯ ಪಂಜಾಬ್, ಹರಿಯಾಣ , ಗುಜರಾತ್ ರಾಜ್ಯಗಳಲ್ಲಿ ಎ.ಎ.ಪಿ. ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ ಎಂದರು.
ಇದೀಗ ಕರ್ನಾಟಕ ರಾಜ್ಯದಲ್ಲೂ ಕೇಜ್ರೀವಾಲ್ ರವರು ಎ. ಎ. ಪಿ. ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಪ್ರವಾಸ ಕಾರ್ಯಕ್ರಮ ನಡೆಸಲಿದ್ದು, ಕೋಲಾರಕ್ಕೂ ಒಂದು ದಿನ ಮೀಸಲಿಟ್ಟಿದ್ದಾರೆ, ಈ ಬಾರಿ ಎ. ಎ. ಪಿ. ಪಕ್ಕಕ್ಕೆ ಮತ ಕೊಟ್ಟು ಅಧಿಕಾರಕ್ಕೆ ತಂದರೆ, ದೆಹಲಿ ಮಾದರಿ ಆಡಳಿತ ಮತ್ತು ಅಭಿವೃದ್ಧಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ, ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಮಾಜಿ ಸಂಸದ ಡಾ. ವೆಂಕಟೇಶ್ ಮಾತನಾಡಿ, ಎ. ಎ. ಪಿ. ಪಕ್ಷ ನುಡಿದಂತೆ ನಡೆಯುವ ಪಕ್ಷ, ಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಜನಪರ ಕಾರ್ಯಕ್ರಮಗಳನ್ನು ರೂಪಿಸಿ, ಈಗಾಗಲೇ ಒಂದು ಮಾದರಿ ಜನಪರ ಆಡಳಿತವನ್ನು ದೆಹಲಿಯಲ್ಲಿ ನೀಡಿದೆ, ಕರ್ನಾಟಕ ರಾಜ್ಯದಲ್ಲಿ ಎ. ಎ. ಪಿ. ಗೆ ಅವಕಾಶ ಕೊಟ್ಟರೆ ದೆಹಲಿಯಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆಯೋ ಅದೆಲ್ಲಾ ಕರ್ನಾಟಕದಲ್ಲೂ ನಮ್ಮ ಪಕ್ಷ ಜಾರಿ ಮಾಡುವುದು ಖಚಿತ ಎಂದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಮುಖಂಡರಾದ ಸುರೇಶ್, ಬಾಷಾ, ಟಿಪ್ಪು ಸೆಕ್ಯುಲರ್ ಸೇನೆಯ ಆಸಿಫ್, ದಲಿತ ಸಿಂಹ ಸೇನೆ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್, ಇನ್ನೂ ಹಲವಾರು ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ReplyForward
|