PLACE YOUR AD HERE AT LOWEST PRICE
ಕೋಲಾರ ಜಿಲ್ಲೆಯಲ್ಲಿ ದಲಿತರ ಅಭಿವೃದ್ಧಿಗೆ ಕೈ ಜೋಡಿಸುವ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಬೆಂಬಲ ನೀಡಲು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಳ್ಳಲಾಯಿತು.
ಕೋಲಾರ ನಗರದ ಕುವೆಂಪು ಬಡಾವಣೆಯಲ್ಲಿರುವ ರೈತ ಸಂಘದ ಕಚೇರಿಯಲ್ಲಿ ಜಿಲ್ಲೆಯ ದಲಿತ ಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಮುಖಂಡರು ಜಿಲ್ಲೆಯ ಪ್ರತಿಯೊಂದು ಗ್ರಾಮಕ್ಕೂ ಹೋಗಿ ದಲಿತರ ಸಭೆ ಮಾಡಿ ಇದೇ ತಿಂಗಳು ೨೩ ರಂದು ನಡೆಯಲಿರುವ ಸಭೆಗೆ ಆಹ್ವಾನ ನೀಡಬೇಕು ಅವರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಎಲ್ಲಾ ದಲಿತ ಸಂಘಟನೆಗಳನ್ನು ಒಳಗೊಂಡಂತೆ ಒಂದು ಸಂಘಟನೆಯ ಹೆಸರನ್ನು ಅಂದು ಘೋಷಣೆ ಮಾಡಲಾಗುತ್ತದೆ ಎಲ್ಲರೂ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಯಾರನ್ನು ಗೆಲ್ಲಿಸಬೇಕು ಅಂತ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಜಿಲ್ಲೆಯಲ್ಲಿ ಕೆಲವು ದಲಿತ ಮುಖಂಡರು ಏಕಪಕ್ಷೀಯವಾಗಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಮ್ಮ ಬೆಂಬಲ ಇಲ್ಲ ಜೊತೆಗೆ ದಲಿತರ ಅಭಿವೃದ್ಧಿಯೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಸಭೆಯಲ್ಲಿ ಚರ್ಚೆಯಾಯಿತು.
ಒಂದು ಪಕ್ಷದ ಪರವಾಗಿ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿರುವ ರಾಜಕೀಯ ತೀರ್ಮಾನಗಳಿಗೆ ದಲಿತ ಸಂಘಟನೆಗಳು ಬೆಂಬಲವಿಲ್ಲ ಎಂದು ದಲಿತ ಸಂಘಟನೆಗಳ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಳ್ಳಲಾಯಿತು.
ಕೋಲಾರ ಜಿಲ್ಲೆಯಲ್ಲಿ ಘಟಬಂದನ್ ನಲ್ಲಿ ಕೆಲವು ದಲಿತ ಮುಖಂಡರು ಒಗ್ಗೂಡಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಪಕ್ಷದ ಪರವಾಗಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ದಲಿತ ವಿರೋಧಿಯಾಗಿದೆ, ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಸಾಮಾನ್ಯ ದಲಿತ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಬೇಕು ಅದು ಯಾವುದು ಮಾಡದೇ ಏಕಾಏಕಿ ಇಂತಹ ಪಕ್ಷಕ್ಕೆ ಬೆಂಬಲ ಅಂತ ಘೋಷಣೆ ಮಾಡುತ್ತಾರೆ ಚುನಾವಣೆಯಲ್ಲಿ ಇಂತಹ ದಲಿತ ಮುಖಂಡರಿಗೆ ತಕ್ಕ ಪಾಠ ಕಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಇದೇ ತಿಂಗಳು ೨೩ ರಂದು ಇದೇ ಸ್ಥಳದಲ್ಲಿ ಬೆಳಗ್ಗೆ ೧೧ ಗಂಟೆಗೆ ಮತ್ತೊಂದು ಸಭೆಯನ್ನು ಕರೆದು ಯಾವ ಪಕ್ಷವನ್ನು ಬೆಂಬಲಿಸಬೇಕು ಯಾರನ್ನು ಗೆಲ್ಲಿಸಬೇಕು ಅಂತ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮುಖಂಡರು ತಿಳಿಸಿದರು.