PLACE YOUR AD HERE AT LOWEST PRICE
ಪದಚ್ಯುತಿಗೆ ಕಾರಣ ತಿಳಿಸದಿದ್ದರೆ ಪ್ರತಿಭಟನೆ : ಎಚ್.ಎನ್.ಮೂರ್ತಿ
ನಾನಾಗಿ ಪಕ್ಷದಲ್ಲಿ ಪದವಿ ಬೇಕೆಂದು ಕೇಳಿದವನಲ್ಲ,ಅವರಾಗಿ ನನನ್ನು ಗುರುತಿಸಿ ದುಂಬಾಲು ಬಿದ್ದು ಜೆಡಿಎಸ್ ಸೇರಿಸಿಕೊಂಡು ನಂತರ ನಿರ್ಲಕ್ಷ್ಯ ಮಾಡಿರುವ ಜೆ.ಡಿ.ಎಸ್.ಪಕ್ಷದ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ ಹಾಗೂ ನೂತನವಾಗಿ ಜಿಲ್ಲಾ ಅಧ್ಯಕ್ಷರಾಗಿರುವ ಬಣಕನಹಳ್ಳಿ ನಟರಾಜ್ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಜೆಡಿಎಸ್ ಎಸ್ಸಿ ಘಟಕದ ತಾಲ್ಲೂಕಿನ ಮಾಜಿ ಅಧ್ಯಕ್ಷ ಎಚ್.ಎನ್.ಮೂರ್ತಿ ಆಗ್ರಹಿಸಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ೬ ತಿಂಗಳ ಹಿಂದೆ ಜೆಡಿಎಸ್ ಸಭೆಗೆ ಆಹ್ವಾನಿಸಿ ನಿಮ್ಮಂತವರು ಜೆಡಿಎಸ್ಗೆ ಬೇಕು ಎಂದು ಬೇಡಿ ದಳಕ್ಕೆ ಸೇರಿಸಿಕೊಂಡು ಎಸ್ಸಿ ಘಟಕದ ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ನಂತರ ಯಾವ ಸಭೆಗಳಿಗೂ ಆಹ್ವಾನಿಸದೆ ಕಡೆಗಣಿಸಲಾಗಿದ್ದು ಇತ್ತೀಚೆಗೆ ಮತ್ತೊಬ್ಬರನ್ನು ಹೊಸ ಅಧ್ಯಕ್ಷರನ್ನಾಗಿ ಮಾಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಅವರು ನನಗೆ ಆದೇಶ ಪತ್ರ ಕೊಟ್ಟಿದ್ದು ಅದನ್ನು ರದ್ದು ಮಾಡದೆ ಮತ್ತೊಬ್ಬರನ್ನು ನೇಮಕ ಮಾಡಿದ್ದು ಎಷ್ಟು ಸರಿ? ಹಾಗೊಮ್ಮೆ ನನ್ನನ್ನು ತೆಗೆದುಹಾಕಬೇಕಾದರೆ ಕನಿಷ್ಟ ನನಗೆ ಮಾಹಿತಿಯನ್ನಾದರೂ ಕೊಡುವ ಸೌಜನ್ಯವನ್ನೂ ದಳಪತಿಗಳು ತೋರಿಲ್ಲವೇಕೆಂದು ಪ್ರಶ್ನಿಸಿದರಲ್ಲದೆ ಇನ್ನಾದರೂ ಸಂಬoಧಪಟ್ಟವರು ೮ ದಿನದಲ್ಲಿ ನನಗೆ ಸ್ಪಷ್ಟನೆ ನೀಡಬೇಕಿದ್ದು ತಪ್ಪಿದರೆ ಜೆಡಿಎಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇನೆ ಎಂದು ಮೂರ್ತಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಎಸ್.ಸಿ.ಘಟಕದ ಉಪಾಧ್ಯಕ್ಷ ಮುನಿಯಪ್ಪ,ಅಲ್ಪಸಂಖ್ಯಾತರು ಘಟಕದ ಶಭೀರ್,ಅಮ್ಮವಾರಿ ಪೇಟೆ ಬಾಬು ಉಪಸ್ಥಿತರಿದ್ದರು.