PLACE YOUR AD HERE AT LOWEST PRICE
ಬಂಗಾರಪೇಟೆ, ಏಪ್ರಿಲ್ ೧೪: ದೇಶದ ಭವಿಷ್ಯತ್ತಿನ ಪೀಳಿಗೆಗೆ ಸಂವಿಧಾನದ ಮೂಲಕ ಮಾರ್ಗದರ್ಶನ ನೀಡಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರು ಜಗತ್ತಿಗೆ ಆದರ್ಶವಾಗಿದ್ದಾರೆ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಪಟ್ಟಾಭಿಷೇಕೋದ್ಯಾನವನದ ಸಮೀಪವಿರುಪ ಡಾ.ಅಂಬೇಡ್ಕರ್ರವರ ಖಂಚಿತ ಪ್ರತಿಮೆಗೆ, ಅವರ ೧೩೨ನೇ ಜನ್ಮದಿನಾಚರಣೆ ಅಂಗವಾಗಿ ಮಾಲಾರ್ಪಣೆ ನೆರವೇರಿಸಿ ಅವರು ಮಾತನಾಡಿದರು. ಶೋಷಿತ ಸಮುದಾಯದಲ್ಲಿ ಜನಿಸಿ, ಎಲ್ಲಾ ಸಮುದಾಯಗಳ ಒಳಿತಿಗಾಗಿ ಅವಿರತ ಶ್ರಮಿಸಿದ ಬಾಬಾ ಸಾಹೇಬ ಡಾ.ಅಂಬೇಡ್ಕರ್, ದೇಶದ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಿದ್ದಾರಲ್ಲದೆ, ದೇಶ ವಿದೇಶಗಳಲ್ಲೂ ಮಾದರಿ ನಾಯಕರಾಗಿ ಗುರುತಿಸಿಕೊಂಡಿರುವುದು ಭಾರತ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ಲಾಘಿಸಿದರು.
ಮತ್ತೊಬ್ಬ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ನಾಡಿನ ಎಲ್ಲರೂ ಯಾವುದೇ ಬೇದಬಾವನೆ ಇಲ್ಲದೆ ಒಗ್ಗಟ್ಟಾಗಿ ಆಚರಿಸಲಾಗುತ್ತಿರುವುದು ದೇಶಕ್ಕೆ ಮಾದರಿಯಾಗಿದೆ. ದೇಶದ ಎಲ್ಲ ಜಾತಿ ಜನಾಂಗದವರೂ ಸಮಾನವಾಗಿರಬೇಕು, ಎಲ್ಲರಿಗೂ ಸಮಾನ ಹಕ್ಕಿರಬೇಕೆಂದು ಸಂವಿಧಾನ ರಚಿಸಿದರು. ಮೀಸಲಾತಿ ನೀತಿಯನ್ನು ಪಾಲನೆ ಮಾಡಿ ಎಲ್ಲರಿಗೂ ಅವಕಾಶ ಕಲ್ಪಿಸಿದ ಪುಣ್ಯಾತ್ಮ ಅಂಬೇಡ್ಕರ್ ಮತ್ತೊಮ್ಮೆ ಹುಟ್ಟಿಬರಲೆಂದು ಆಶಿಸಿದರು.
ಇದೇ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ದೇಶಕಂಡ ಶೇಷ್ಠ ವ್ಯಕ್ತಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್, ಅವರಿಂದ ಇಂದು ಇಡೀ ದೇಶದ ಜನತೆ ಸಮಾನತೆಯಿಂದ ಬದುಕುತ್ತಿದ್ದೇವೆ. ಎಲ್ಲಾ ಜಾತಿ ವರ್ಗಗಳಿಗೆ ಸ್ಪೂರ್ತಿಯಾಗಿದ್ದಾರೆ. ಅಂಬೇಡ್ಕರ್ ಯಾವುದೇ ಒಂದು ಜಾತಿಗೆ ಸೀಮಿತವಲ್ಲಾ, ಎಲ್ಲಾ ಜಾತಿಯವರೂ ಸಮಾನವಾಗಿ ಬದುಕಲು ಮೀಸಲಾತಿ ಒದಗಿಸುವ ಮೂಲಕ ಮಾರ್ಗದರ್ಶಕರಾಗಿದ್ದಾರೆ. ಜಾತ್ಯಾತೀತ ಮನವಿರುವ ಅಂಬೇಡ್ಕರ್ ಇನ್ನೊಮ್ಮೆ ಹುಟ್ಟಿಬರಲಿ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ವಿ.ಮಹೇಶ್, ಮುಖಂಡರಾದ ರಾಜಾರೆಡ್ಡಿ, ಶೇಷು, ಹನುಮಪ್ಪ, ಶಶಿ, ಅಂಬರೀಷ್ ಭಾಗವಹಿಸಿದ್ದರು.