PLACE YOUR AD HERE AT LOWEST PRICE
ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಎರಡನೇ ಬಾರಿಗೆ ನಾಮಪತ್ರ ಸಲ್ಲಿಕೆ
ದಾಖಲೆಯ ಜನರ ಸಾಗರದೊಂದಿಗೆ ರೋಡ್ ಶೋ-ಶಕ್ತಿ ಪ್ರದರ್ಶನ, ರಾರಾಜಿಸಿದ ತೆನೆಹೊತ್ತ ಮಹಿಳೆ ಬ್ಯಾನರ್ಗಳು.
ಸುಮಾರು ೮೪ ವಾಹನಗಳಿಂದ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆ ದೂರು ದಾಖಲು
ಕೋಲಾರ, ಏಪ್ರಿಲ್.೨೦ : ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್ ಗುರುವಾರ ಎರಡನೇ ಬಾರಿಗೆ ತಮ್ಮ ಉಮೇದುವಾರಿಕೆನ್ನು ಸೂಚಕರ ಜೊತೆಗೆ ಚುನಾವಣಾ ಕೇಂದ್ರಕ್ಕೆ ತೆರಳಿ ಸಲ್ಲಿಸಿದರು.
ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಕೀಯ ಪಕ್ಷಗಳು ನಾಮಪತ್ರ ಸಲ್ಲಿಸುವುದರೊಂದಿಗೆ ತಮ್ಮ ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದಾರೆ. ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಬಂಗಾರಪೇಟೆ ವೃತ್ತದ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜೆಡಿಎಸ್ ಆಭಿಮಾನಿಗಳು ಹಾಗೂ ಕಾರ್ಯಕರ್ತ ಸಮಕ್ಷಮ ತೆರದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಮೆರವಣಿಗೆಗೂ ಮುನ್ನಾ ನಗರದ ಕ್ಲಾಕ್ ಟವರ್ನಲ್ಲಿರುವ ದರ್ಗಾದಲ್ಲಿ ಪ್ರಾರ್ಥನೆ. ಕುರುಬರಪೇಟೆಯಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಸಿದರು. ಸುಡುಬಿಸಿಲ ರೋಡ್ ಶೋ ವೇಳೆ ರಸ್ತೆಯ ಇಕ್ಕಲಗಳಲ್ಲಿ ನಿಂತಿದ್ದ ಜನರತ್ತ ಕೈಬೀಸಿ ಮತ ಯಾಚನೆ ಮಾಡಿದ್ದು, ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಸಾವಿರಾರು ಕಾರ್ಯಕರ್ತರ ಕರತಾಡತನ ಮುಗಿಲು ಮುಟ್ಟಿತು.
ನಾಮಪತ್ರ ಸಲ್ಲಿಸಿ ಹೊರಬಂದ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್, ಮಾದ್ಯಮಗಳೊಂದಿಗೆ ಮಾತನಾಡಿ, ಜೆಡಿಎಸ್ ಅಭ್ಯರ್ಥಿಯಾಗಿ ಎರಡು ಬಾರಿ ಉಮೇದುವಾರಿಕೆಯನ್ನು ಯಶಸ್ವಿಯಾಗಿ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಕೆಗೆ ಆಗಮಿಸುವ ವೇಳೆ ಸುಮಾರು ೫೦ ಸಾವಿರ ಜನ ಸ್ವಯಂ ಪ್ರೇರಣೆಯಿಂದ ರೋಡ್ ಶೋ ದಲ್ಲಿ ಭಾಗವಹಿಸಿದ್ದರು. ರ್ಯಾಲಿಯಲ್ಲಿ ಭಾಗವಹಿಸಿದ್ದ ಜನ ಸಂಖ್ಯೆಯೇ ಜೆಡಿಎಸ್ ಬಹುಮತದಿಂದ ಗೆಲ್ಲುವ ಸೂಚನೆ ನೀಡಿದೆ, ನಾಳೆ ನಾಮಪತ್ರ ಪರಿಶೀಲನೆ ನಂತರ ಶನಿವಾರದಿಂದ ಮತಯಾಚನೆ ಪ್ರಚಾರ ಪ್ರಾರಂಭಿಸಲಾಗುವುದು ಎಂದರು.
ಜೆಡಿಎಸ್ಗೆ ಕ್ಷೇತ್ರದಲ್ಲಿ ಯಾವುದೇ ಪಕ್ಷ ಸಮೀಪ ಸ್ಪರ್ಧಿಯಾಗಿ ಕಾಣುತ್ತಿಲ್ಲ, ನನಗೆ ತೆನೆಹೊತ್ತ ಮಹಿಳೆ ಬಿಟ್ಟು ಬೇರೇನು ಕಾಣುತ್ತಿಲ್ಲವೆಂದ ಅವರು, ತಮ್ಮ ಸಹೋದರ ಸಹ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅದು ನಮ್ಮ ಪಕ್ಷದ ಆಂತರಿಕ ವಿಷಯ ಎಂದು ತಿಳಿಸಿದರು. ಜೆಡಿಎಸ್ ಪಕ್ಷ ಗೆಲುವಿನ ಅಂತರದ ಬಗ್ಗೆ ಈಗಲೇ ಹೇಳಲು ಆಗಲ್ಲ, ಕೋಲಾರದ ಜನ ಪ್ರಬುದ್ಧರು, ಸ್ಥಳೀಯರಿಗೆ ಆಧ್ಯತೆ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಒಟ್ಟಾರೆ ಜನಾಭಿಪ್ರಾಯ ಫಲಿತಾಂಶದಲ್ಲೇ ತಿಳಿಯಲಿದೆ ಎಂದರು.
ರೋಡ್ ಶೋಗೆ ಅನುಮತಿ ಇಲ್ಲದೆ ಸುಮಾರು ೮೪ ವಾಹನಗಳಲ್ಲಿ ಜನ ಸಾಗಣೆ ಮಾಡಿರುವ ಹಿನ್ನಲೆ, ನೀತಿ ಸಂಹಿತೆ ಉಲ್ಲಂಘನೆಯಾಗಿರುವುದಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ವಕ್ಕಲೇರಿ ರಾಮು, ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್, ಸಿ.ಎಂ.ಅರ್. ಹರೀಶ್, ಬಣಕನಹಳ್ಳಿ ನಟರಾಜ್, ಬಾಲಗೋವಿಂದ, ತಿರುಮಲೇಶ್, ಜೆಟ್ ಅಶೋಕ್, ಬಾಲಾಜಿ ಚನ್ನಯ್ಯ, ತಾರಕ್ ಮಂಜು ಭಾಗವಹಿಸಿದ್ದರು.