• Wed. Apr 24th, 2024

PLACE YOUR AD HERE AT LOWEST PRICE

ಕೋಲಾರ: ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಮಿಕ ಇಲಾಖೆ ನೋಂದಣಿಗೆ ಒಳಪಟ್ಟಿದ್ದರೂ, ಕಾರ್ಮಿಕ ಇಲಾಖೆಯಿಂದ ಯಾವುದೇ ಸೌಲಭ್ಯವೂ ಇಲ್ಲ. ಪತ್ರಕರ್ತರ ಪರಿಸ್ಥಿತಿ ತ್ರಿಶಂಕು ಸ್ಥಿತಿಯಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿ0ದ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಮಿಕ ಇಲಾಖೆಯ ಯಾವುದೇ ಸೌಲಭ್ಯ ಪತ್ರಕರ್ತರಿಗೆ ಸಿಗುತ್ತಿಲ್ಲ. ಕಾನೂನು ಅನ್ವಯವಾಗುತ್ತಿಲ್ಲ. ಪತ್ರಕರ್ತರು ಕಾರ್ಮಿಕರೇ ಅಲ್ಲವೇ ಎಂಬ ತಾಕಲಾಟ ಇದೆ. ಆದರೆ, ಆಶಾಭಾವದಿಂದ ಇರೋಣ. ಕನಿಷ್ಠ ಅಸಂಘಟಿತ ಕಾರ್ಮಿಕರ ಪಟ್ಟಿಯಲ್ಲಿ ಬರಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ಸಿ.ವಿ.ನಾಗರಾಜ್, ಪತ್ರಕರ್ತರು ಕಾರ್ಮಿಕರೇ ಎಂಬ ಪ್ರಶ್ನೆ ಇದೆ. ಆದರೆ, ನಾವೆಲ್ಲಾ ಪತ್ರಿಕಾ ಮನೆಯಲ್ಲಿ ಕೆಲಸ ಮಾಡುವ ಕಾರ್ಯನಿರತ ಪತ್ರಕರ್ತರು. ಕೈಗಾರಿಕಾ ವಿವಾದ ಕಾಯ್ದೆ-೧೯೪೭ರ, ಕಾರ್ಯನಿರತ ಪತ್ರಕರ್ತರು ಮತ್ತು ಇತರ ಪತ್ರಿಕೆಯ ಉದ್ಯೋಗಿಗಳು (ಸೇವಾ ಷರತ್ತುಗಳು) ಮತ್ತು ವಿವಿಧ ನಿಬಂಧನೆಗಳ ಕಾಯ್ದೆ ೧೯೫೫ರ ಪ್ರಕಾರ ಪತ್ರಿಕಾ ಕಚೇರಿಯ ಸಹಾಯಕರು, ತಂತ್ರಜ್ಞರು ಕೂಡ ಕಾರ್ಯನಿರತ ಪತ್ರಕರ್ತರು. ಪತ್ರಕರ್ತರಿಂದ ದಿನಕ್ಕೆ ಊಟದ ವಿರಾಮ ಹೊರತು ಪಡಿಸಿದಂತೆ ೫ ರಿಂದ ೬ ಗಂಟೆ ಮಾತ್ರ ಕೆಲಸ ಮಾಡಿಸಬೇಕು ಎಂಬ ನಿಯಮವಿದ್ದು ಇವರು ಪೂರ್ಣಕಾಲಿಕ ಕಾರ್ಮಿಕರೇ ಎಂದರು.

ಇನ್ನೂ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕೋಡ್(ಓ.ಎಸ್.ಹೆಚ್)-೨೦೨೦ರ ಪ್ರಕಾರ ೧೯೫೫ರ ಕಾಯ್ದೆಗೆ ತಿದ್ದುಪಡಿ ಮಾಡಿದ್ದು. ಉದ್ಯೋಗ ಭದ್ರತೆ ಕಿತ್ತುಕೊಂಡಿದೆ. ನಿರುದ್ಯೋಗ ಸಮಸ್ಯೆ ಹುಟ್ಟು ಹಾಕಿ ಪತ್ರಕರ್ತರ ಉತ್ಸಾಹ ಕುಗ್ಗಿಸಿದೆ. ನಿಷ್ಪಕ್ಷಪಾತ ಕೆಲಸಕ್ಕೆ ಅಡ್ಡಿಪಡಿಸಿದೆ. ಬಹಳಷ್ಟು ಮಂದಿ ಕೆಲಸ ಬಿಡುತ್ತಿದ್ದಾರೆ. ಸ್ವಾತಂತ್ರ‍್ಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಂಸ್ಥೆಯನ್ನು ಪ್ರಶ್ನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾದ ಅನಿವಾರ್ಯ ಬಂದೊದಗಿದೆ ಎಂದರು.

ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ ತಮ್ಮದೇ ಆದ ಮಂಡಳಿ ಹೊಂದಿದ್ದು, ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ, ಪತ್ರಕರ್ತರಿಗೆ ಮಂಡಳಿ ಇದ್ದರೂ ಏನೂ ಕೆಲಸ ನಡೆದಿಲ್ಲ. ನಮ್ಮ ನಿರ್ಲಕ್ಷ್ಯಕ್ಕೆ ನಾವೂ ಕಾರಣ. ಪೂರ್ಣಕಾಲಿಕ ಕಾರ್ಮಿಕರು ಎಂಬುದನ್ನು ಸಾಬೀತುಪಡಿಸಬೇಕು. ಬಹಳ ಸಂವೇದನಾಶೀಲರಾಗಿ ಇದ್ದಿದ್ದರೆ ವಾತಾವರಣವೇ ಬೇರೆ ರೀತಿ ಇರುತಿತ್ತು. ಇಂದು ಪತ್ರಕರ್ತರು ತಮ್ಮ ಅನ್ನ ಹುಡುಕಿಕೊಂಡು ತಮ್ಮದೇ ದಾರಿ ಕಂಡುಕೊ0ಡಿದ್ದಾರೆ. ಇದಕ್ಕೆ ಅಭದ್ರತೆ ಕೂಡ ಕಾರಣ. ಅದು ನೈತಿಕವೋ? ಅನೈತಿಕವೋ ಅನ್ನೋದು ಅವರವರ ಮನೋಭಾವಕ್ಕೆ ಬಿಟ್ಟಿದ್ದು ಎಂದರು.

ಪತ್ರಕರ್ತ ಮುನಿರಾಜು ಮಾತನಾಡಿ, ಸಂತಸ ತರುವ ಹಬ್ಬ. ೧೯೨೩ರಲ್ಲಿ ಮೊದಲ ಬಾರಿ ಆಚರಿಸಲಾಯಿತು. ಎಲ್ಲಾ ಕಾರ್ಮಿಕರು ಬಹಳ ಸಂಕಷ್ಟದಲ್ಲಿ ಇದ್ದಾರೆ. ಎಲ್ಲರೂ ಒಂದೊoದು ವಿಧದ ಕಾರ್ಮಿಕರು. ಎಲ್ಲರೂ ಒಂದೆ ಎಂದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್, ಕಾರ್ಮಿಕರಿಗೂ ನೂರಾರು ವರ್ಷಗಳ ಇತಿಹಾಸ ಇದೆ. ಇಡೀ ಜಗತ್ತಿನಲ್ಲಿ ಕಂಪನಿ ಮಾಲೀಕರ ಪರವಾದ ಕಾನೂನು ಜಾರಿ ಮಾಡಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಹೇಳಿದರು.

ಪತ್ರಕರ್ತರು ಪರಿಪೂರ್ಣ ಕಾರ್ಮಿಕರೇ ಅಥವಾ ಅಸಂಘಟಿತ ಕಾರ್ಮಿಕರೇ ಎಂಬುದು ಗೊತ್ತಿಲ್ಲ. ಪತ್ರಕರ್ತರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕು. ಸಂಘಟಿತ ಹೋರಾಟ ನಡೆಸಿದರೆ ಸರ್ಕಾರದ ಗಮನ ಸೆಳೆಯಬಹುದು. ಕಾರ್ಮಿಕರ ಹಕ್ಕು ಹಾಗೂ ರಕ್ಷಣೆ ಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಬಿ.ಸುರೇಶ್, ಅಬ್ಬಣಿಶಂಕರ್, ಓಂಕಾರಮೂರ್ತಿ, ವೆಂಕಟೇಶ ಬಾಬಾ, ಎಸ್.ಸೋಮಶೇಖರ್, ಕಾರ್ಯಕಾರಿ ಸಮಿತಿ ಸದಸ್ಯರಾದ ನಾ.ಮಂಜುನಾಥ್, ಆಸೀಫ್‌ಪಾಷ, ಎನ್.ಗಂಗಾಧರ, ಗೋಪಿ, ಎಲ್.ಕಿರಣ್, ಸರ್ವಜ್ಞಮೂರ್ತಿ, ಸಿಅಮರೇಶ್ ಉಪಸ್ಥಿತರಿದ್ದರು. ಕೋ.ನಾ.ಪ್ರಭಾಕರ್ ಪ್ರಾರ್ಥಿಸಿ, ಉಪಾಧ್ಯಕ್ಷ ಟೇಕಲ್ ಲಕ್ಷ್ಮೀಶ್ ಸ್ವಾಗತಿಸಿದರು.

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!