PLACE YOUR AD HERE AT LOWEST PRICE
ಕೋಲಾರ, ಆ. ೨೭ : ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಮರ್ಯಾದ ಹತ್ಯೆ ನಡೆದಿದ್ದು, ತಮ್ಮದಲ್ಲದೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ತಂದೆಯೇ ಮಗಳನ್ನು ಕೊಲೆಗೈದಿರುವ ಘಟನೆ ವರದಿಯಾಗಿದೆ.
ತೊಟ್ಲಿ ಗ್ರಾಮದ ನಿವಾಸಿ ರಮ್ಯಾ (೧೯) ಕೊಲೆಯಾದ ಯುವತಿ. ಈಕೆಯ ತಂದೆ ವೆಂಕಟೇಶಗೌಡ ಕೊಲೆ ಆರೋಪಿ ಎಂದು ತಿಳಿದುಬಂದಿದೆ.
ರಮ್ಯಾ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು, ಇದಕ್ಕೆ ಮನೆಮಂದಿಯ ವಿರೋಧವಿತ್ತೆನ್ನಲಾಗಿದೆ. ಈ ವಿಚಾರವಾಗಿ ಪೋಷಕರು ಎಷ್ಟೇ ಬುದ್ದಿ ಹೇಳಿದರೂ ರಮ್ಯಾ ಕೇಳಿರಲಿಲ್ಲ ಎನ್ನಲಾಗಿದ್ದು ಇದರಿಂದ ಸಿಟ್ಟಿಗೆದ್ದ ತಂದೆ ವೆಂಕಟೇಶಗೌಡ ಆ.೨೫ರಂದು ರಮ್ಯಾಳನ್ನು ಕೊಲೆ ಮಾಡಿದ್ದಾನೆ. ನಂತರ ಪೋಷಕರು ಎಲ್ಲರೂ ಸೇರಿ ಅಂತ್ಯಸoಸ್ಕಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮ್ಯಾ ಸಾವಿನ ಬಗ್ಗೆ ಗ್ರಾಮದಲ್ಲಿ ಶಂಕೆ ವ್ಯಕ್ತವಾಗಿತ್ತು. ಈ ವಿಚಾರ ತಿಳಿಯುತ್ತಲೆ ಪೊಲೀಸರು ವೆಂಕಟೇಶಗೌಡನನ್ನು ವಶಕ್ಕೆ ಪಡೆದುವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತಹಶಿಲ್ದಾರ್ ಹರ್ಷವರ್ಧನ್ ಅವರು ರಮ್ಯಾರನ್ನು ಸಮಾಧಿ ಮಾಡಿದ್ದ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.