• Mon. Apr 29th, 2024

PLACE YOUR AD HERE AT LOWEST PRICE

 

ಕೋಲಾರ, ಆಗಸ್ಟ್ ೩೦ : ಶ್ರೀನಿವಾಸಪುರ ಅರಣ್ಯ ವಲಯ ಒತ್ತುವರಿ ತೆರವು ಕಾರ್ಯಾಚರಣೆ ಕಾನೂನು ಬದ್ಧವಾಗಿದೆ ಎಂದು ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಸ್ಪಷ್ಟಪಡಿಸಿದ್ದಾರೆ.

ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದೊಂದು ವಾರದಿಂದ ಶ್ರೀನಿವಾಸಪುರ ತಾಲೂಕಿನಲ್ಲಿ ಅರಣ್ಯ ವಲಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಒಟ್ಟಾರೆ ೫೬೦ ಎಕರೆಗಳ ಜಾಗವನ್ನು ಭೂ ವತ್ತುವರಿ ಮಾಡಿಕೊಂಡಿರುವುದು ಸಾಭೀತಾದ ಕಾರಣ ಸಂರಕ್ಷಿತ ಅರಣ್ಯ ವಲಯದ ಜಾಗವನ್ನು ಅರಣ್ಯ ಇಲಾಖೆಯ ವಶಕ್ಕೆ ಮರಳಿ ಪಡೆಯಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರ ವರ್ಸಸ್ ಐ.ಎಸ್.ನಿರ್ವಾನೆಗೌಡ ಮತ್ತು ಇತರರು ೨೦೦೭(೧೫)ಎಸ್.ಇ.ಎಸ್.ಸಿ.ಸಿ.ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶ ಪ್ರಕಾರ ರಾಜ್ಯ ಸರ್ಕಾರದ ಭೂಮಂಜೂರಾತಿ ಸಮಿತಿ ಅಥವಾ ಸದಸ್ಯರು ರಾಜ್ಯ ಅರಣ್ಯ ವಲಯದಲ್ಲಿದ್ದ ಜಾಗವನ್ನು ಅದರ ಮೂಲ ಕಡತವನ್ನು ಬದಿಗಿಟ್ಟು ಸಾಗುವಳಿಗಾಗಿ ಮಂಜೂರು ಮಾಡಲು ಅಥವಾ ಅರಣ್ಯ ಸಂರಕ್ಷಿತ ವಲಯದ ಜಾಗವನ್ನು ಬೇರೆ ಯಾವುದೇ ಉದ್ದೇಶಗಳಿಗೆ ಮಂಜೂರಿ ಮಾಡಲಾಗದು, ಒಂದು ವೇಳೆ ಮಂಜೂರು ಮಾಡಿದರೂ ಕಾನೂನಾತ್ಮಕವಾಗಿ ಅದು ಗಣನೆಗೆ ತೆಗೆದುಕೊಳ್ಳಲು ಅರ್ಹವಲ್ಲ ಅದು ಮತ್ತೆ ಅರಣ್ಯ ಇಲಾಖೆಗೆ ವಾಪಸ್ಸಾಗುವುದು ಎಂದು ತಿಳಿಸಿದರು.

೧೯೧೦ರಲ್ಲಿ ಆಗಿನ ಮೈಸೂರು ಸಂಸ್ಥಾನದ ನೋಟಿಫಿಕೇಷನ್ ಸಂಖ್ಯೆ ಖ-೪೮೭-ಜಿಣ-೭೯-೦೮-೮ ಜಣ.೨೬-೭-೧೯೧೦ ಪ್ರಕಾರ ಶ್ರೀನಿವಾಸಪುರ ಅರಣ್ಯ ವ್ಯಾಪ್ತಿಯಲ್ಲಿ ಗೆಜೇಟ್‌ನಲ್ಲಿ ಘೋಷಣೆಯಾಗಿರುವಂತೆ ೪೦೬೦ ಎಕರೆ ಜಾಗವನ್ನು ಸಂರಕ್ಷಿತ ಅರಣ್ಯವೆಂದು ಘೋಷಿಸಲಾಗಿದೆ. ಈ ಸಂರಕ್ಷಿತ ಅರಣ್ಯ ವಲಯದ ಮೇಲೆ ಕಂದಾಯ ಇಲಾಖೆಗೆ ಯಾವುದೇ ಅಧಿಕಾರ ಇರುವುದಿಲ್ಲ. ಅಂತೆಯೇ ಸಾಗುವಳಿ ಚೀಟಿ ಮ್ಯೂಟೇಷನ್ ಮುಖಾಂತರ ದಾಖಲೆಗಳನ್ನು ಸೃಷ್ಟಿಸಲು ಬರುವುದಿಲ್ಲ. ಆದರೆ ಪ್ರಸಕ್ತ ಒತ್ತುವರಿಯಾಗಿರುವ ಜಮೀನಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕಳೆದ ೩೦ ವರ್ಷಗಳಿಂದ ಅರಣ್ಯ ಜಮೀನನ್ನು ವಾಣಿಜ್ಯ ಮತ್ತು ವ್ಯವಸಾಯಗಳಿಗಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದರು.

ಸಂರಕ್ಷಿತ ಅರಣ್ಯ ವಲಯದ ಜಮೀನನ್ನು ಕೇವಲ ಅರಣ್ಯ ಇಲಾಖೆ ಮಾತ್ರವೇ ಪರಭಾರಿ ಮಾಡಲು ಸಾಧ್ಯವಿರುವುದರಿಂದ ಇದರ ಮೇಲೆ ಕಂದಾಯ ಇಲಾಖೆಗೆ ಯಾವುದೇ ಅಧಿಕಾರ ಇರುವುದಿಲ್ಲ. ಈ ಒತ್ತುವರಿ ವಿಚಾರದ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ಸಾಕಷ್ಟು ಬಾರಿ ತರಲಾಗಿದೆ ಹಾಗೂ ಉಚ್ಚ ನ್ಯಾಯಾಲಯವು ಅರಣ್ಯ ಒತ್ತುವರಿ ಅಗತ್ಯವಾಗಿ ತೆರವುಗೊಳಿಸಬೇಕೆಂದು ತೀರ್ಪನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ೨೩ ರಿಂದ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ ಎಂದರು.

ಒತ್ತುವರಿಯಾಗಿದ್ದ ಜಮೀನುಗಳಲ್ಲಿ ವಾಣಿಜ್ಯೋದ್ಯೇಶಗಳಿಗಾಗಿ ಮಾವು ತರಕಾರಿ ಹಾಗೂ ಟೊಮೊಟೊ ಮತ್ತು ಇನ್ನಿತರೆ ವಾಣಿಜ್ಯ ಬೆಳೆಗಳನ್ನು ಬೆಳೆದಿದ್ದು ಅವುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ತೆರವುಗೊಳಿಸಲಾದ ಪ್ರದೇಶದಲ್ಲಿ ಕಾಡು ಗಿಡ ನೆಡುವ ಕಾರ್ಯವು ಸಹ ಮುಂದುವರೆದಿದೆ ಎಂದು ತಿಳಿಸಿದರು.

ಒತ್ತುವರಿ ತೆರವು ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ನೋಟಿಸುಗಳನ್ನು ನೀಡಲಾಗಿದೆ, ಆದರೆ ಅದ್ಯಾವುದಕ್ಕೂ ಸೂಕ್ತ ಉತ್ತರಗಳು ಬಾರದ ಕಾರಣ ಹಾಗೂ ಈಗಾಗಲೇ ೨೦೨೦ರಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದು ರೈತರ ವಶದಲ್ಲಿದ್ದ ಜಮೀನನ್ನು ಅರಣ್ಯ ಇಲಾಖೆಗೆ ವಾಪಸ್ ಮಾಡಲು ಮನವಿ ಮಾಡಲಾಗಿದೆ. ಆದಾಗ್ಯೂ ಸಹ ಯಾವುದೇ ಉತ್ತರ ಭಾರದ ಕಾರಣ ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹಾಗೂ ವನ್ಯಜೀವಿಗಳ ರಕ್ಷಣೆ ಮತ್ತು ಅರಣ್ಯದ ಹಸಿರನ್ನು ಕಾಪಿಟ್ಟುಕೊಳ್ಳುವ ದೃಷ್ಟಿಯಿಂದ ಒತ್ತುವರಿ ಕಾರ್ಯಾಚರಣೆಯನ್ನು ಅನಿವಾರ್ಯವಾಗಿ ನಡೆಸಬೇಕಾಗಿದೆ ಇದು ನಿರಂತರ ಪ್ರಕ್ರಿಯೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಎ.ಸಿ.ಎಫ್. ಸುಮನ್ ಹಾಗೂ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!