PLACE YOUR AD HERE AT LOWEST PRICE
ತಿರುಪತಿಯಲ್ಲಿ ಇಂದಿನಿಂದ ಬ್ರಹ್ಮೋತ್ಸವ ಆರಂಭವಾಗಿದ್ದು, ಇಂದು ಸಿಎಂ ಜಗನ್ ರೆಡ್ಡಿ ಅವರು ವೆಂಕಟೇಶ್ವರನಿಗೆ ರೇಷ್ಮೆ ವಸ್ತ್ರವನ್ನು ಅರ್ಪಿಸಲಿದ್ದಾರೆ. ಹಾಗಾದರೆ ಈ ಬ್ರಹ್ಮೋತ್ಸವ ಎಲ್ಲಿಯವರೆಗೂ ಇರಲಿದೆ ಹಾಗೂ ಭಕ್ತರ ದರ್ಶನ ವ್ಯವಸ್ಥೆ ಹೇಗಿರಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ತಿರುಪತಿಯಲ್ಲಿ ಇಂದಿನಿಂದ ಸೆಪ್ಟೆಂಬರ್ 26 ರವರೆಗೆ ಬ್ರಹ್ಮೋತ್ಸವ ನಡೆಯಲಿದ್ದು, ಅಕ್ಟೋಬರ್ 15 ರಿಂದ 23 ರವರೆಗೆ ನವರಾತ್ರಿ ಬ್ರಹ್ಮೋತ್ಸವಗಳು ನಡೆಯುತ್ತವೆ. ಅಲ್ಲದೆ ಇಂದಿನಿಂದ ಸೆಪ್ಟೆಂಬರ್ 26 ರವರೆಗೆ ಅಷ್ಟದಳಪಾದಪದ್ಮಾರಾಧನೆ, ತಿರುಪ್ಪವಾಡ, ಕಲ್ಯಾಣೋತ್ಸವ, ಊಂಜಾಲಸೇವೆ, ಸಹಸ್ರದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ.
ಸೆಪ್ಟೆಂಬರ್ 21ರ ಗರುಡ ಸೇವೆಯ ದಿನದಂದು ಕನಿಷ್ಠ 3 ಲಕ್ಷ ಭಕ್ತರು ಬರುವ ನಿರೀಕ್ಷೆಯಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. 9 ದಿನಗಳ ವಾರ್ಷಿಕ ಬ್ರಹ್ಮೋತ್ಸವಗಳು ಸೋಮವಾರದಿಂದ ತಿರುಪತಿಯಲ್ಲಿ ಪ್ರಾರಂಭವಾಗಲಿದ್ದು, ದೇವಾಲಯದಲ್ಲಿ ಯಾತ್ರಾರ್ಥಿಗಳಿಗೆ ಸುಗಮ ದರ್ಶನ ಮತ್ತು ವಾಹನ ಸೇವೆಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧಿಕಾರಿಗಳು ಗರುಡ ಸೇವೆಯ ದಿನದಂದು ಕನಿಷ್ಠ 3 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಇದರಲ್ಲಿ ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ವಿಷ್ಣು ನಿವಾಸ ಕಾಂಪ್ಲೆಕ್ಸ್, ತಿರುಪತಿ ಶ್ರೀನಿವಾಸಂ ಕಾಂಪ್ಲೆಕ್ಸ್ನಲ್ಲಿ ಸುಮಾರು 25,000 ರಿಂದ 30,000 ಟೋಕನ್ಗಳನ್ನು ನೀಡಲಾಗುವುದು.
ಅಲಿಪಿರಿಯ ಭೂದೇವಿ ಸಂಕೀರ್ಣದಲ್ಲಿ ದಿವ್ಯ ದರ್ಶನ ಟೋಕನ್ ನೀಡಲಾಗುವುದು. ಇನ್ನೂ 45,000 ಯಾತ್ರಾರ್ಥಿಗಳು ಯಾವುದೇ ಟಿಕೆಟ್ ಅಥವಾ ಟೋಕನ್ಗಳಿಲ್ಲದೆ ಸರದಿ ಮೂಲಕ ಬಂದು ದರ್ಶನವನ್ನು ಪಡೆಯಲಿದ್ದಾರೆ ಎಂದು ತಿಳಿಸಿದೆ.
ದೇವಾಲಯದ ಸುತ್ತಮುತ್ತ ಭದ್ರತೆಗಾಗಿ 4,900 ಪೊಲೀಸ್ ಸಿಬ್ಬಂದಿ ಮತ್ತು 1,900 ಟಿಟಿಡಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅಲ್ಲದೆ ಟಿಟಿಡಿಯು ಕನಿಷ್ಠ 2 ಲಕ್ಷ ಭಕ್ತರಿಗೆ ಆಹಾರ ನೀಡಲು ಸಾಕಷ್ಟು ಅಡುಗೆಯವರು ಮತ್ತು ಇತರ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.
ದಿನಕ್ಕೆ 6 ಲಕ್ಷದಂತೆ ಲಡ್ಡುಗಳನ್ನು ಹೆಚ್ಚುವರಿಯಾಗಿ ಮಾಡಲು ದಾಸ್ತಾನು ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೂ ಆರೋಗ್ಯ ಇಲಾಖೆಯು ನೈರ್ಮಲ್ಯಕ್ಕಾಗಿ 9 ದಿನಗಳ ಕಾರ್ಯಕ್ರಮಕ್ಕೆ ಪ್ರತ್ಯೇಕವಾಗಿ ಸುಮಾರು 3,000 ಕಾರ್ಮಿಕರನ್ನು ನೇಮಿಸಿಕೊಂಡಿದೆ.