• Mon. Apr 29th, 2024

PLACE YOUR AD HERE AT LOWEST PRICE

ಉಚಿತವಾಗಿ ನಮ್ಮ ಮೆಟ್ರೋದಲ್ಲಿ ಹೇಗೆ ಪ್ರಯಾಣಿಸಬಹುದು ಎಂದು ತೋರಿಸಿಕೊಟ್ಟ ಖ್ಯಾತ ವಿದೇಶಿ ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದ ಕಾಮಿಡಿ ಸ್ಟಾರ್ ಫಿಡಿಯಾಸ್ ಪನಾಯೊಟೌ ಅವರ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಿದೆ.

ಬಿಲಿಯನೇರ್ ಎಲೋನ್ ಮಸ್ಕ್ ಅವರನ್ನು ಅಪ್ಪಿಕೊಂಡ ನಂತರ ಫೇಮಸ್​ ಆಗಿದ್ದ ಯೂಟ್ಯೂಬರ್ ಫಿಡಿಯಾಸ್ ಪನಾಯೊಟೌ ಇದೀಗ ಬೆಂಗಳೂರು ಮೆಟ್ರೋದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಬೆಂಗಳೂರು ಮೆಟ್ರೋದಲ್ಲಿನ ಟಿಕೆಟ್ ವ್ಯವಸ್ಥೆಯ ಯಂತ್ರವನ್ನು ಜಿಗಿದು ದಾಟಿದ್ದಾರೆ. ಅಲ್ಲದೇ ಈ ಬಗ್ಗೆ ವಿಡಿಯೋ ಮಾಡಿ ಟಿಕೆಟ್‌ ರಹಿತ ಹೇಗೆ ಪ್ರಯಾಣ ಮಾಡಬೇಕು ಎಂದು ತೋರಿಸಿ ಪ್ರಚೋದನೆ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

‘ಭಾರತೀಯ ಮೆಟ್ರೋದಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವುದು ಹೇಗೆ’ ಎಂಬ ಶೀರ್ಷಿಕೆ ಹಾಕಿ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್, ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಇನ್‌ಸ್ಟಾಗ್ರಾಮಂನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಅವರೇ ಹಾಕಿದ ಈ ವಿಡಿಯೋದಲ್ಲಿ ಫಿಡಿಯಾಸ್ ಪನಾಯೊಟೌ ಅವರು ನಮ್ಮ ಮೆಟ್ರೋ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಈ ಬಗ್ಗೆ ಮಾತನಾಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, “ಇಂತಹ ಘಟನೆಗಳು ನಡೆಯಬಾರದು. ಟಿಕೆಟ್ ಇಲ್ಲದೇ, ಸ್ಮಾರ್ಟ್‌ ಕಾರ್ಡ್‌ ಕೂಡ ಬಳಸದೇ ವ್ಯಕ್ತಿಯೊಬ್ಬ ಜಂಪ್ ಮಾಡಿರುವುದು ತಪ್ಪು. ಆ ವ್ಯಕ್ತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದ್ದೇನೆ” ಎಂದರು.

ಈ ಬಗ್ಗೆ  ದಿನ.ಕಾಮ್ ಜತೆಗೆ ಮಾತನಾಡಿ ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್, “ಯುಟ್ಯೂಬರ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಮೆಟ್ರೋ ಎಂಟ್ರಿ ಗೇಟ್​ ಓಪನ್ ಆಗಲು ಯಾವುದೇ ಕಾರ್ಡ್ ಬಳಸದೆ ಅಥವಾ ಕಾಯಿನ್ ಇಲ್ಲದೆ ಗೇಟ್ ಅನ್ನು ಜಿಗಿದು ಕೆ ಆರ್‌ ಮಾರುಕಟ್ಟೆಯಿಂದ ಬೈಯಪ್ಪನಹಳ್ಳಿವರೆಗೂ ಸಂಚರಿಸಿದ್ದಾರೆ. ಸದ್ಯ ಪ್ರಕರಣ ದಾಖಲು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದರು.

ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿರುವ ಹಲವರು, ಫಿಡಿಯಾಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ 2011ರಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಈವರೆಗೆ ಟಿಕೆಟ್ ಇಲ್ಲದೇ ಜಂಪ್ ಮಾಡಿ ಪ್ರಯಾಣಿಸಿದ ಮೊದಲ ಪ್ರಕರಣ ಇದಾಗಿದೆ ಎಂದು ತಿಳಿದು ಬಂದಿದೆ.

Fidias (@Fidias0) / X (twitter.com)

ಖ್ಯಾತ ಉದ್ಯಮಿ, ಬಿಲಿಯನೇರ್ ಎಲಾನ್ ಮಸ್ಕ್ ಅವರನ್ನು ಅಪ್ಪಿಕೊಳ್ಳುವ ಮೂಲಕ ಪ್ರಸಿದ್ಧಿಗೆ ಬಂದಿದ್ದ ಫಿಡಿಯಾಸ್, ತಮ್ಮನ್ನು ‘ವೃತ್ತಿಪರ ತಪ್ಪು ಎಸಗುವವ’ ಎಂದು ಕರೆದುಕೊಂಡಿದ್ದಾರೆ. ಅವರು ಯೂಟ್ಯೂಬ್ ಚಾನೆಲ್‌ಗೆ 2.26 ಮಿಲಿಯನ್ ಚಂದಾದಾರರು ಇದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!