PLACE YOUR AD HERE AT LOWEST PRICE
ಕೋಲಾರ, ನ.24: ಕನ್ನಡದ ಲಿಪಿ, ವ್ಯಾಕರಣ, ಬರವಣಿಗೆ ಕಣ್ಮರೆಯಾಗುತ್ತಿದ್ದು, ಕನ್ನಡಿಗರು ಆಂಗ್ಲ ಶಿಕ್ಷಣ ವ್ಯವಸ್ಥೆಗೆ ವರ್ಗವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕನ್ನಡ ಭಾಷೆ, ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದಾಗಬೇಕು ಎಂದು ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ಸಹಕಾರದಲ್ಲಿ ಆಯೋಜಿಸಿದ್ದ
ರಾಜ್ಯ ಮಟ್ಟದ 68ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ, ಕನ್ನಡದ ಹಬ್ಬ ನಾಡ ಹಬ್ಬ, ಕೋಲಾರ ಜಿಲ್ಲಾ ಗಡಿ ಉತ್ಸವ ಮತ್ತು ಕನ್ನಡಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಭಾಷೆ ಹಾಗೂ ನುಡಿ ಕಟ್ಟಿ ಬೆಳಸಲು ಯುವಜನತೆ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿದೆ. ನಾವೆಲ್ಲಾ ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ, ಬರೆಯುವ ಮೂಲಕ ಹೆಚ್ಚು ಬಳಸುವ ಮೂಲಕ ಕನ್ನಡ ಭಾಷೆ ಬೆಳೆಸಬೇಕಾಗಿದೆ ಎಂದು ಕರೆ ನೀಡಿದರು.
ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಗಡಿ ಭಾಗದಲ್ಲಿ ನೈತ್ಯ, ಸಂಗೀತ, ಕಲೆ ಸಾಹಿತ್ಯ ಎಲ್ಲವನ್ನೂ ಮೇಳೈಸಿದ ಅದ್ಬುತ ಕಾರ್ಯಕ್ರಮವನ್ನು ಕೋಲಾರದಲ್ಲಿ ಹಮ್ಮಿಕೊಂಡಿದೆ, ಈ ದಿಸೆಯಲ್ಲಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ನಾಗಾನಂದ ಕೆಂಪರಾಜು ಮಾತನಾಡಿ, ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ದೇಶದ ಸಾಹಿತ್ಯ ಇತಿಹಾಸದಲ್ಲಿ ಕನ್ನಡ ಭಾಷೆಗೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಕನ್ನಡದ ಗೌರವವನ್ನು ಹಿಮ್ಮಡಿಗೊಳಿಸಿದೆ ಎಂದರು.
ಗಡಿನಾಡಿನಲ್ಲಿ ಕನ್ನಡದ ಉತ್ಸವಗಳು ನಡೆಯುವುದು ಉತ್ತಮ ಬೆಳವಣಿಗೆ, ಭಾಷೆಯ ವಿಚಾರದಲ್ಲಿ ಕೋಲಾರ ಜಿಲ್ಲೆ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕೋಲಾರ ಜಿಲ್ಲೆಯಲ್ಲಿ ಕೋಲಾರ ತಾಲ್ಲೂಕು ಹೊರತುಪಡಿಸಿ ಉಳಿದೆಲ್ಲಾ ತಾಲ್ಲೂಕುಗಳು ಆಂದ್ರ ಮತ್ತು ತಮಿಳುನಾಡು ರಾಜ್ಯಗಳ ಗುಂಡಿಗಳಿಗೆ ಹೊಂದಿಕೊಂಡಿವೆ.
ಮನೆಗಳಲ್ಲಿ ಬಹುತೇಕರು ತೆಲುಗು ಮತ್ತು ತಮಿಳು ಭಾಷೆಗಳ ಮಾತೃ ಭಾಷೆಯವರಾಗಿದ್ದರೂ ಕನ್ನಡ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿಯನ್ನು ಕಟ್ಟುವುದರಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಮಾತೃ ಭಾಷೆ ತೆಲುಗು ಮತ್ತು ತಮಿಳು ಆಗಿದ್ದರೂ ಮನಸ್ಸಿನಲ್ಲಿ ಕನ್ನಡವನ್ನು ಆರಾಧಿಸುವ ಮನಸ್ಸುಳ್ಳವರಾಗಿದ್ದಾರೆ. ನಾಡು ನುಡಿ ಸಂಸ್ಕೃತಿ ಬೆಳೆಸುವ ಕೆಲಸವನ್ನು ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಮಾಡಲಿ ಎಂದು ಆಶಿಸಿದರು.
ಇದೇ ವೇಳೆ ಜಾನಪದ, ಭರತನಾಟ್ಯ, ಸಂಗೀತ, ಸಾಹಿತ್ಯ, ಭಾಷಾ ಹೋರಾಟ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಮುಖಂಡರಾದ ಡಾ.ಕೃಷ್ಣಪ್ಪ, ಡಾ.ರಾಜೇಗೌಡ ಮೊದಲಾದವರು ಉಪಸ್ಥಿತರಿದ್ದರು.