PLACE YOUR AD HERE AT LOWEST PRICE
ಕೋಲಾರ; ನ.24: ಎಪಿಎಂಸಿ ಮಾರುಕಟ್ಟೆ ಜಾಗದ ಸಮಸ್ಯೆಯನ್ನು ಕೈಗಾರಿಕೆ ಅಭಿವೃದ್ಧಿ ಎಂದು ಪರಿಗಣಿಸಿ 100 ಎಕರೆ ಭೂಸ್ವಾಧೀನ ಮಾಡಿಕೊಂಡು ಅಭಿವೃದ್ಧಿಪಡಿಸಬೇಕು ಎಂದು ರೈತ ಸಂಘದಿಂದ ಜಾನುವಾರುಗಳು, ತರಕಾರಿ ಹಾಗೂ ಎತ್ತಿನಬಂಡಿಗಳ ಸಮೇತ ಕೊಂಡರಾಜನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ರಸ್ತೆ ಬಂದ್ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ತಡೆ ಮಾಡದಂತೆ ಪೋಲಿಸರು ಹೋರಾಟಗಾರರಿಗೆ ಸರ್ಪಗಾವಲು ರಚಿಸಿಕೊಂಡು ಬ್ಯಾರಿಕೇಡ್ ಅಡ್ಡ ಹಾಕುವ ಮುಖಾಂತರ ತಡೆ ನೀಡಿದಾಗ ಹೋರಾಟಗಾರರು ಹಾಗೂ ಪೋಲಿಸರ ನಡುವೆ ವಾಗ್ವಾದ ಮಾತಿನ ಚಕಾಮುಕಿ ನಡೆದ ನಂತರ ಸರ್ವಿಸ್ ರಸ್ತೆಯಲ್ಲೇ ಕುಳಿತು ಜನಪ್ರತಿನಿದಿಗಳಿಗೆ ಸರ್ಕಾರಕ್ಕೆ ದಿಕ್ಕಾರ ಹಾಕಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಟೊಮೆಟೊ ಮಂಡಿ ಮಾಲೀಕರು ಹಾಗೂ ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, 15 ಜನ ಆಡುವ ಕ್ರಿಕೆಟ್ ಕ್ರೀಡೆಗೆ ದೇಶಾದ್ಯಂತ ಎಲ್ಲಾ ರಾಜ್ಯ, ಜಿಲ್ಲೆಗಳಲ್ಲೂ ಸಾವಿರಾರು ಕೋಟಿ ಖರ್ಚು ಮಾಡಿ ಸ್ಟೇಡಿಯಂ ನಿರ್ಮಿಸಿ, ಮಳೆ ಬಂದರೆ ಪಿಚ್ ಒದ್ದೆಯಾಗುತ್ತದೆ ಎಂದು ಆತಂಕ ಪಡುವ ಸರ್ಕಾರಗಳಿಗೆ 135 ಕೋಟಿ ಜನರಿಗೆ ಆಹಾರ ಬೆಳೆದುಕೊಡುವ ರೈತನ ಬೆಳೆ ರಕ್ಷಣೆಗೆ ಮಾರುಕಟ್ಟೆ ವ್ಯವಸ್ಥೆ, ಕೃಷಿ ಆಧಾರಿತ ಕೈಗಾರಿಕೆಗಳ ಅಭಿವೃದ್ಧಿಗೆ ಏಕೆ ಮನಸ್ಸು ಮಾಡುತ್ತಿಲ್ಲ. ಕ್ರಿಕೆಟ್ ಆಟದಿಂದ ಆಹಾರ ಉತ್ಪಾದನೆ ಆಗುವುದಿಲ್ಲ. ರೈತನ ಬೆವರು ಭೂಮಿಗೆ ಬಿದ್ದರೆ ಮಾತ್ರ 3 ಹೊತ್ತು ಹಸಿವು ತುಂಬಲು ಸಾಧ್ಯ ಎಂದು ಸರ್ಕಾರಗಳು ತಿಳಿಯಬೇಕೆಂದರು.
ರೈತರಿಗೆ ಬೆಳೆಗೆ ತಕ್ಕ ಬೆಲೆ ನೀಡಲು ಆಗುತ್ತಿಲ್ಲ. ಏಕೆಂದರೆ ಮಾರುಕಟ್ಟೆಯ ಅವ್ಯವಸ್ಥೆಯಿಂದ ವ್ಯಾಪಾರಸ್ಥರು ಖರೀದಿ ಮಾಡಲು ಭಯಪಡಬೇಕಾದ ಪರಿಸ್ಥಿತಿಯಿದೆ. ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
30 ದಿನದೊಳಗೆ ಮಾರುಕಟ್ಟೆ ಜಾಗದ ಸಮಸ್ಯೆಯನ್ನು ಬಗೆಹರಿಸದೇ ಇದ್ದರೆ ರೈತರು ಬೆಳೆಯುವ ತರಕಾರಿ ಹಾಲು, ಮಾವು ಬೆಳೆಗಳನ್ನು ಜನಪ್ರತಿನಿಧಿಗಳ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾರಾಟ ಮಾಡದಂತೆ ರೈತರು ಪ್ರತಿಜ್ಞೆ ಮಾಡಬೇಕಾಗುತ್ತೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಲಕ್ಷಾಂತರ ರೈತರು, 30 ಸಾವಿರ ಕೂಲಿಕೂರ್ಮಿಕರು, ಸಾವಿರಾರು ವ್ಯಾಪಾರಸ್ಥರು, ಪರವಾನಗಿದಾರರ ಜೀವಾಳವಾಗಿರುವ ಏಷ್ಯಾದಲ್ಲೇ 2ನೇ ಅತಿದೊಡ್ಡ ಮಾರುಕಟ್ಟೆ ಎಂದು ಪ್ರಸಿದ್ಧಿ ಪಡೆದಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಜಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಜನಪ್ರತಿನಿಧಿಗಳು, ಎಪಿಎಂಸಿ ಆಡಳಿತ ಮಂಡಳಿ, ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪ ಮಾಡಿದರು.
ಹತ್ತಾರು ವರ್ಷಗಳಿಂದ ಕನಿಷ್ಠ 50 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಗುರುತಿಸಿ ಮಾರುಕಟ್ಟೆ ಅಭಿವೃದ್ಧಿ ಮಾಡಲು ಕಂದಾಯ ಸರ್ವೇ ಅಧಿಕಾರಿಗಳ ಕಣ್ಣಿಗೆ ಭೂಮಿ ಕಾಣಿಸುತ್ತಿಲ್ಲ. ಆದರೆ, ಬಲಾಢ್ಯರು ರಾಜಕೀಯ ಬೆಂಬಲಿಗರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ರಾತ್ರೋರಾತ್ರಿ ಭೂಮಿ ಮಂಜೂರು ಮಾಡಲು ಸರ್ಕಾರಿ ಜಾಗ ಕಾಣಿಸುತ್ತಿದೆಯೇ. ಇದು ಮೂರು ತಿಂಗಳು ಬೆವರು ಸುರಿಸಿ ಲಕ್ಷಾಂತರ ಬಂಡವಾಳ ಹಾಕಿ ಬೆಳೆ ಬೆಳೆಯುವ ರೈತನ ಶ್ರಮಕ್ಕೆ ತಕ್ಕ ಮಾರುಕಟ್ಟೆ ವ್ಯವಸ್ಥೆ ನೀಡದ ಜನಪ್ರತಿನಿಧಿಗಳಿಗೆ ಪ್ರಶ್ನೆ ಮಾಡಿದರು.
ಮಡಿವಾಳ ಗ್ರಾಮದ ಸರ್ವೇ ನಂ. 41ರಲ್ಲಿ 84 ಎಕರೆ ಸರ್ಕಾರಿ ಗೋಮಾಳ ಜಮೀನಿದ್ದು, ಅದನ್ನು ಇಲ್ಲವೇ ಹೊಸಕೋಟೆ ಲ್ಯಾಂಕೋ ಬೆಳಗಾನಹಳ್ಳಿ ಗೇಟ್ ಪಕ್ಕದಲ್ಲಿರುವ ನೂರಾರು ಎಕರೆ ಗೋಮಾಳ ಜಮೀನನ್ನು ಪರಿಶೀಲನೆ ಮಾಡಿ ಮಾರುಕಟ್ಟೆಗೆ ಮಂಜೂರು ಮಾಡುವ ಪ್ರಯತ್ನ ನಡೆಯಬೇಕು. ಇಲ್ಲವೇ ಕೋಲಾರ ಜಿಲ್ಲೆಯ ರೈತರನ್ನು ಪಕ್ಕದ ಆಂಧ್ರ ರಾಜ್ಯಕ್ಕೆ ಸೇರಿಸಿ ಪುಣ್ಯವಾದರೂ ಕಟ್ಟಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಎಪಿಎಂಸಿ ಪುಟ್ಟರಾಜು ಮಾತನಾಡಿ, ಮಾರುಕಟ್ಟೆಗೆ ಬರುವ ತರಕಾರಿಗೆ ಜಾಗವಿಲ್ಲದೆ ಕ್ಯಾಪ್ಸಿಕಂ, ಮೂಲಂಗಿ, ಹೂಕೋಸು ಮತ್ತಿತರ ತರಕಾರಿಗಳನ್ನು ವ್ಯಾಪಾರಸ್ಥರು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮಳೆ ಬಂದರೆ ಕೆರೆ, ಕುಂಟೆಗಳಾಗಿ ಮಾರುಕಟ್ಟೆ ಮಾರ್ಪಾಡಾಗುತ್ತಿದೆ. ಇದರಿಂದ ರೈತರಿಗೆ ನಷ್ಟ ಹಾಗೂ ವ್ಯಾಪಾರಸ್ಥರಿಗೆ ಅನಾನುಕೂಲವಾಗುತ್ತಿದೆ ಎಂದು ಸಮಸ್ಯೆ ಬಗ್ಗೆ ವಿವರಿಸಿದರು.
ಕೈಗಾರಿಕೆ, ರಸ್ತೆ, ಲೇಔಟ್ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ಬಲವಂತವಾಗಿ ಸರ್ಕಾರ ಭೂಸ್ವಾಧೀನ ಮಾಡಿಕೊಂಡು ರೈತರ ಬದುಕನ್ನು ಕಸಿಯುತ್ತಿರುವ ಸರ್ಕಾರವೇ ಮಾರುಕಟ್ಟೆ ಸಮಸ್ಯೆಯನ್ನು ಕೈಗಾರಿಕೆ ಅಭಿವೃದ್ಧಿ ಎಂದು ಪರಿಗಣಿಸಿ 100 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು ಮಾರುಕಟ್ಟೆ ಅಭಿವೃದ್ಧಿ ಮಾಡಿ ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗುವ ಜೊತೆಗೆ ಕೂಲಿಕಾರ್ಮಿಕರ ವ್ಯಾಪಾರಸ್ಥರ ದಲ್ಲಾಳರ ಹಿತ ಕಾಯಬೇಕೆಂದು ಮಾನ್ಯರನ್ನು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಜಿಲ್ಲಾಧಿಕಾರಿಗಳು, ಮಾರುಕಟ್ಟೆ ಜಾಗಕ್ಕೆ ಗುರುತಿಸಿದ್ದ ಜಮೀನುಗಳಿಗೆ ಯಾವುದಾದರೂ ಒಂದು ಸಮಸ್ಯೆ ಎದುರಾಗುತ್ತಿದೆ. ಒಂದು ತಿಂಗಳಲ್ಲಿ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸುವ ಜೊತೆಗೆ ಸರ್ವೇ ನಂ.41ರ ಗೋಮಾಳ ಸರ್ವೇ ನಂಬರ್ ಪರಿಶೀಲನೆ ಮಾಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಮುಖಂಡರಾದ ಮರಗಲ್ ಶ್ರೀನಿವಾಸ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಫಾರೂಖ್ ಪಾಷ, ಬಂಗಾರಿ ಮಂಜು, ಮಂಗಸಂದ್ರ ತಿಮ್ಮಣ್ಣ, ತೆರ್ನಹಳ್ಳಿ ಆಂಜಿನಪ್ಪ, ಪ್ರಭಾಕರ್, ಆನಂದರೆಡ್ಡಿ, ರಾಮಕೃಷ್ಣಪ್ಪ, ಎಂ.ಆರ್. ಭಾಸ್ಕರ್, ರಾಜೇಶ್, ವಿಜಯ್ ಪಾಲ್, ಗಿರೀಶ್, ಕುವ್ವಣ್ಣ, ಯಲ್ಲಪ್ಪ, ಹರೀಶ್, ರಾಮಸಾಗರ ವೇಣು ಎ.ಪಿ.ಎಂ.ಸಿ ಪುಟ್ಟರಾಜು, ವಕ್ಕಲೇರಿ ಹನುಮಯ್ಯ, ವಿನಿತ್ಗೌಡ, ಮಂಗಸಂದ್ರ ನಾಗೇಶ್, ಮುನಿಕೃಷ್ಣ, ಸುಪ್ರೀಂ ಚಲ, ಶೈಲಜ, ಮಂಜುಳಾ, ರಾಧಮ್ಮ, ಶೋಭಮ್ಮ, ಮುಂತಾದವರಿದ್ದರು.