PLACE YOUR AD HERE AT LOWEST PRICE
ಯುವ ಮತದಾರರು ಸಂವಿಧಾನ ರಾಯಭಾರಿಗಳಾಗಿ : ಅಕ್ರಂಪಾಷ ಕರೆ
ಕೋಲಾರ, ಫೆಬ್ರವರಿ ೦೭ : ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಯುವ ಮತದಾರರು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ರಾಯಭಾರಿಗಳಾಗಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಕಾಲೇಜು ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಸಂವಿಧಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನವು ನಮಗೆ ಎಲ್ಲಾ ಹಕ್ಕುಗಳ ಮತ್ತು ಸವಲತ್ತುಗಳನ್ನು ನೀಡಿ ಪ್ರತಿಯೊಬ್ಬರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಹಾಗೂ ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದು ತಿಳಿಸಿದರು.
ಸಂವಿಧಾನ ಪ್ರಸ್ತಾವನೆಯಲ್ಲಿ ಸಂವಿಧಾನ ಧೈಯೋದ್ದೇಶಗಳನ್ನು ಅಳವಡಿಸಲಾಗಿದ್ದು, ಪೀಠಿಕೆಯು ಸಂವಿಧಾನ ಒಡವೆಯಾಗಿದೆ. ಸಂವಿಧಾನವೇ ನ್ಯಾಯವಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಇದನ್ನು ಪಾಲಿಸಬೇಕಾಗಿದೆ ಎಂದರು. ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗಳು ಸಹ ಸಂವಿಧಾನದ ಪ್ರಕಾರ ನಡೆಯುತ್ತವೆ ಇಡೀ ಸಂವಿಧಾನದ ಸಾರವು ಈ ಪೀಠಿಕೆಯಲ್ಲಿದೆಯೆಂದರು.
ಈ ಹಿನ್ನೆಲೆಯಲ್ಲಿ ಸರ್ಕಾರವು ಸಂವಿಧಾನ ಜಾಥಾ ಕಾರ್ಯಕ್ರಮವನ್ನು ರೂಪಿಸಿದ್ದು, ಜನವರಿ ೨೬ ರಿಂದ ಈ ಜಾಥಾ ಆರಂಭವಾಗಿ ಪ್ರತಿಯೊಂದು ಗ್ರಾಮಗಳಲ್ಲಿ ಸಂಚಾರಿಸಿ ಸಾರ್ವಜನಿಕರಿಗೆ ಸಂವಿಧಾನದ ಅರಿವನ್ನು ಮೂಡಿಸುವುದು ಜಾಥಾದ ಮುಖ್ಯ ಉದ್ದೇಶವಾಗಿದೆಯೆಂದರು. ನಾವುಗಳು ಯಾವ ದೇಶದ ಆಳ್ವಿಕೆಗೆ ಒಳಪಡದೆ ಸ್ವತಂತ್ರರಾಗಿದ್ದು, ಸಮಾಜವಾದ ತತ್ವ ಸಿದ್ಧಾಂತದ ತಳಹದಿಯಲ್ಲಿ ನಾವುಗಳು ಬದುಕುತ್ತಿದ್ದೆವೆಯೆಂದರು. ಸಂವಿಧಾನದ ರಚನೆ ಅದರ ಧೈಯೋದ್ದೇಶಗಳು ಮತ್ತು ಅದರ ಹಕ್ಕು ಬಾದ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ಸಂವಿಧಾನ ಜಾರಿಯಾದ ಮೇಲೆ ಸಾಮಾಜಿಕ ನ್ಯಾಯ, ಆರ್ಥಿಕ, ರಾಜಕೀಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಎಲ್ಲರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲಾಗಿದೆ. ಆದ್ದರಿಂದ ನಾವೆಲ್ಲರೂ ಒಂದೇ ಎಂಬ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಹಾಗೂ ಭವಿಷ್ಯದ ಪ್ರಜೆಗಳಾದ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆಯೆಂದರು. ಸಂವಿಧಾನದ ಬಗ್ಗೆ ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಅಳವಡಿಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಸಂವಿಧಾನದ ಅರಿವು ಹೊಂದಬೇಕೆನ್ನುವುದು. ಸರ್ಕಾರದ ಉದ್ದೇಶವಾಗಿದೆಯೆಂದರು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಪ್ರತಿಯೊಬ್ಬರೂ ಮುಖ್ಯವಾಗಿ ಯುವಕ-ಯುವತಿಯರು ಆಲೋಚಿಸಿ ಸೂಕ್ತ ವ್ಯಕ್ತಿಗೆ ತಮ್ಮ ಮತವನ್ನು ಚಲಾಯಿಸಿ ದೇಶದ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕೆAದರು. ಕೋಲಾರ ಜಿಲ್ಲೆಯಲ್ಲಿ ೧೮ ಸಾವಿರ ಯುವ ಮತದಾರರಿದ್ದು, ಜವಾಬ್ದಾರ ನಾಗರೀಕರಾಗಿ ಚುನಾವಣೆಯಲ್ಲಿ ತಪ್ಪದೇ ಮತ್ತು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ .ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕೆ.ಎನ್ ಶ್ರೀನಿವಾಸ ಸ್ವಾಗತಿಸಿದರು. ಜಿಲ್ಲಾ ಕೈಗಾರಿಕ ಕೇಂದ್ರದ ಉಪ ನಿರ್ದೇಶಕ ರವಿಚಂದ್ರನ್, ಪ್ರಾಂಶುಪಾಲರಾದ ಡಾ. ಗಂಗಾಧರ, ಮಹಿಳಾ ಸರ್ಕಾರಿ ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಂವಿಧಾನ ಪೀಠಿಕೆ ಹಾಗೂ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ವಿದ್ಯಾರ್ಥಿನಿಯರಿಗೆ ಬೋಧಿಸಿದರು.