PLACE YOUR AD HERE AT LOWEST PRICE
ಕೋಲಾರ, ಫೆ.೧೩ : ಫ್ಲೆಕ್ಸ್ ನಲ್ಲಿ ತಮ್ಮ ನಾಯಕರ ಭಾವಚಿತ್ರ ಹಾಕಿಲ್ಲ ಅನ್ನೋ ಕಾರಣಕ್ಕೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮೇಲೆ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಪರಿಣಾಮ ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಬೂತ್ ಲೆವೆಲ್ ಏಜೆಂಟ್ ಸಭೆ ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಿಂದ ಅಕ್ಷರಶಃ ಗೊಂದಲಕ್ಕೀಡಾಗಿಯಿತು.
ಮoಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಬೂತ್ ಲೆವೆಲ್ ಏಜೆಂಟ್ ಸಭೆಯಲ್ಲಿ ಹಾಕಲಾಗಿದ್ದ ಫ್ಲಕ್ಸ್ನಲ್ಲಿ ತಮ್ಮ ನಾಯಕರ ಭಾವಚಿತ್ರ ಇಲ್ಲ ಎನ್ನುವುದನ್ನೇ ಕಾರಣವಾಗಿಸಿಕೊಂಡು ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಬೆಂಬಲಿಗ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಲು ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಲಾಯಿತು. ವೇದಿಕೆಯಲ್ಲಿ ಕುಳಿತಿದ್ದ ಶ್ರೀನಿವಾಸ್ ಅವರ ಬಳಿಗೆ ದಾವಿಸಿದ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗ ಶಿವಕುಮಾರ್ ಏಕಾ ಏಕಿ ಶ್ರೀನಿವಾಸ್ ಅವರ ಅಂಗಿಯನ್ನು ಹಿಡಿದು ಎಳೆದಾಡಿದರಲ್ಲದೆ ಹಣೆಗೆ ಡಿಚ್ಚಿ ಹೊಡೆದ ಘಟನೆ ಸಭೆಯಲ್ಲಿ ಎರಡು ಗುಂಪುಗಳ ಮಧ್ಯೆ ತಳ್ಳಾಟ ನೂಕಾಟ ಜೊತೆಗೆ ಮಾರಾಮಾರಿಗೆ ಕಾರಣವಾಯಿತು.
ಕೋಲಾರ ಡಿಸಿಸಿ ಬ್ಯಾಂಕ್ ಬಳಿ ಇರುವ ಕೋಲಾರ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಉಸ್ತುವಾರಿಗಳಾದ ಪಿ.ಆರ್.ರಮೇಶ್ ಹಾಗೂ ರಾಜ್ಕುಮಾರ್ ನೇತೃತ್ವದಲ್ಲಿ ಬೂತ್ ಮಟ್ಟದ ಏಜೆಂಟರ ಸಭೆಯನ್ನ ಕರೆಯಲಾಗಿತ್ತು. ಸಭೆಯಲ್ಲಿ ಕಾಂಗ್ರೇಸ್ ಬಹುತೇಕ ಮುಖಂಡರು ಭಾಗವಹಿಸಿದ್ದರು. ಆದರೆ ಸಭೆ ಆರಂಭವಾಗುತ್ತಿದ್ದ0ತೆ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಮಾಜಿ ಶಾಸಕ ರಮೇಶ್ ಕುಮಾರ್, ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ನಮ್ಮ ನಾಯಕರ ಫೋಟೊವನ್ನ ಫ್ಲೆಕ್ಸ್ನಲ್ಲಿ ಹಾಕಿಲ್ಲ ಅನ್ನೋ ಕಾರಣಕ್ಕೆ, ಹಾಗೂ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಿದವರನ್ನ ವೇದಿಕೆಯಲ್ಲಿ ಕೂರಿಸಲಾಗಿದೆ ಎಂದು ನಗರಸಭೆ ಸದಸ್ಯ ಅಂಬರೀಶ್ ತಗಾದೆ ತೆಗೆದರು.
ಈ ವೇಳೆ ಮುನಿಯಪ್ಪ ಬೆಂಬಲಿಗ ಊರುಬಾಗಲು ಶ್ರೀನಿವಾಸ ಮೇಲೆ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರಾದ ವೈ.ಶಿವಕುಮಾರ್, ಅಪ್ಸರ್, ಮುರಳಿ, ಹಲ್ಲೆ ನಡೆಸಿದರು. ಗಲಾಟೆ ಜೋರಾಗಿ ಕೈ ಕೈ ಮಿಲಾಯಿಸಿದ ಎರಡು ಗುಂಪುಗಳ ನಾಯಕರು ಪರಸ್ಪರ ಬಡಿದಾಡಿಕೊಂಡು ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಸಭೆಯಲ್ಲಿದ್ದ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾದರು. ಆ ತಕ್ಷಣ ಕಚೇರಿಯ ಚೇರ್ಗಳು, ಫ್ಲೆಕ್ಸ್ನ್ ತೆರವುಗೊಳಿಸಲಾಯಿತು. ಇದೇ ವೇಳೆ ಸಭೆಯಿಂದ ಹೊರ ನಡೆದ ಹಲ್ಲೆಗೊಳಗಾದ ಊರುಬಾಗಲು ಶ್ರೀನಿವಾಸ್ ಖಾಸಗಿ ಆಸ್ಪತ್ರೆಗೆ ದಾಖಲಾದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಊರುಬಾಗಿಲು ಶ್ರೀನಿವಾಸ್, ಮಾದ್ಯಮದವರೊಂದಿಗೆ ಮಾತನಾಡಿ, ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ನನ್ನ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ್ದಾರೆ, ಇದು ಮೊದಲೇ ಪೂರ್ವ ನಿಯೋಜಿತವಾಗಿದ್ದು, ಬ್ಯಾನರ್ ನೆಪದಲ್ಲಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ವಿಷಯ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ಬಂದಿದೆ, ಈ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳದಿದ್ದರೆ ಪಕ್ಷಕ್ಕೆ ಹೊಸದಾಗಿ ಕಾರ್ಯಕರ್ತರು ಯಾವ ಭರವಸೆಯ ಆಧಾರದಲ್ಲಿ ಬರುತ್ತಾರೆ ಎಂದು ಪ್ರಶ್ನಿಸಿದ ಶ್ರೀನಿವಾಸ್ ಇದನ್ನು ಹೀಗೆ ಬೆಳೆಯಲು ಬಿಟ್ಟರೆ ಕೆಪಿಸಿಸಿ ಕಚೇರಿ ಮುಂದೆ ಧರಣಿ ಕೂರುತ್ತೇನೆ ಎಂದು ಎಚ್ಚರಿಸಿದರು.
ಇನ್ನೂ ಕೋಲಾರ ಜಿಲ್ಲಾ ಕಾಂಗ್ರೇಸ್ನಲ್ಲಿ ಗುಂಪುಗಾರಿಕೆ, ಭಿನ್ನಾಭಿಪ್ರಾಯ, ಗಲಾಟೆ ಇದೆ ಮೊದಲೇನಲ್ಲ, ಪ್ರತಿ ಚುನಾವಣೆಯಲ್ಲೂ ಕಾಂಗ್ರೇಸ್ ನಲ್ಲಿರುವ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗುವುದು ಸಂಪ್ರದಾಯ. ಅದರಲ್ಲೂ ಕಳೆದ ಹಲವು ವರ್ಷಗಳಿಂದ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣದ ಮಧ್ಯೆ ಗುಂಪುಗಾರಿಕೆ, ಗಲಾಟೆ, ಮುಸುಕಿನ ಗುದ್ದಾಟ ನಡೆಯುತ್ತಲೆ ಇದೆ. ಈ ಬೆನ್ನಲ್ಲೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಮತ್ತೆ ಸಚಿವ ಮುನಿಯಪ್ಪ ಲೋಕಸಭೆ ಕಾಂಗ್ರೇಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಹಾಗಾಗಿ ಮತ್ತೆ ಆಕ್ಟೀವ್ ಆಗಿರುವ ಕೋಲಾರ ಕಾಂಗ್ರೇಸ್ನ ಬಣ ರಾಜಕೀಯ ಹಾಗು ಗುಂಪುಗಾರಿಕೆ ಇಂದಿನ ಮಾರಾಮಾರಿಗೆ ಸಾಕ್ಷಿಯಾಗಿದೆ.
ಇನ್ನೂ ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯುದ್ದಕ್ಕೂ ಗೊಂದಲ, ಗಲಾಟೆ, ಮಾರಾಮಾರಿಯಲ್ಲೆ ಸಭೆ ಅಂತ್ಯವಾಯಿತು. ಸಭೆಗೆ ಆಗಮಿಸಿದ್ದ ಚುನಾವಣಾ ಉಸ್ತುವಾರಿಗಳಾದ ಪಿ.ಆರ್.ರಮೇಶ್ ಹಾಗೂ ರಾಜ್ ಕುಮಾರ್ ಈ ಬಗ್ಗೆ ವರಿಷ್ಠರಿಗೆ ವರದಿ ನೀಡಲಾಗುವುದು, ನಮ್ಮದು ಕುಟುಂಬ, ಕುಟುಂಬದಲ್ಲಿ ಅಣ್ಣ ತಮ್ಮಂದಿರ ಗಲಾಟೆಯಂತೆ ಎಲ್ಲಾ ಮನೆಯಲ್ಲೂ ಗಲಾಟೆ ಇದ್ದೇ ಇರುತ್ತೆ ಚುನಾವಣೆ ಬಂದಾಗ ಎಲ್ಲರೂ ಒಂದಾಗುತ್ತೇವೆ ಎಂದು ತೇಪೆ ಹಾಕಿದ ಅವರು, ಆಸ್ಪತ್ರೆಗೆ ದಾಖಲಾಗಿದ್ದ ಊರುಬಾಗಿಲು ಶ್ರೀನಿವಾಸ್ ಅವರನ್ನು ಭೇಟಿ ಮಾಡಿ, ಆವರಿಗೆ ಧೈರ್ಯ ಹೇಳಿ ಬೆಂಗಳೂರಿನ ಕಡೆ ಪ್ರಯಾಣ ಬೆಳಸಿದರು.
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಕೋಲಾರ ಜಿಲ್ಲಾ ಕಾಂಗ್ರೇಸ್ನಲ್ಲಿ ಬಣ ಹಾಗೂ ಗುಂಪುಗಾರಿಕೆ ಸ್ಪೋಟಗೊಂಡಿದೆ. ಜಿಲ್ಲಾ ಕಾಂಗ್ರೇಸ್ಗೆ ಇದು ಹೊಸದಲ್ಲವಾದ್ರೂ ಇದೆ ಗುಂಪುಗಾರಿಕೆ ಬಣ ರಾಜಕೀಯಕ್ಕೆ ಹಲವು ನಾಯಕರು ಮೂಲೆ ಗುಂಪಾಗಿರೋದು, ತಂತ್ರ, ಕುತಂತ್ರಗಳಿ0ದ ಕಾಂಗ್ರೇಸ್ ನೆಲ ಕಚ್ಚಿದ್ದು ಸ್ಮರಿಸಲೇಬೇಕು.
ಜಿಲ್ಲೆಯಲ್ಲಿರುವ ಕಾಂಗ್ರೆಸ್ ಪಕ್ಷದ ಎಲ್ಲಾ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಜಿಲ್ಲಾ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭಗಳು, ಜಿಲ್ಲಾ ಕಾಂಗ್ರೆಸ್ ನಿಂದ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲೂ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲಾ. ಜಿಲ್ಲಾ ಮಟ್ಟದಲ್ಲಿ ನಡೆಯುವ ಪಕ್ಷದ ಸಭೆಗಳು ಸುಗಮವಾಗಿ ನಡೆಯಲು ಪಕ್ಷದ ಎಲ್ಲರೂ ಸಹಕಾರ ನೀಡಿದರೆ ಮಾತ್ರ ಪಕ್ಷ ಸಂಘಟನೆ ಸಾಧ್ಯ. ಇಂದು ಶ್ರೀನಿವಾಸ್ ಅವರ ಮೇಲೆ ನಡೆದ ಹಲ್ಲೆ ತಲೆತಗ್ಗಿಸುವಂತದ್ದು, ಮುಂದೆ ಈ ರೀತಿಯ ಘಟನೆಗಳು ಮರುಕಳಿಸಬಾರದು.
– ಲಕ್ಷಿö್ಮನಾರಾಯಣ್. ಜಿಲ್ಲಾಧ್ಯಕ್ಷರು, ಪ್ರದೇಶ ಜಿಲ್ಲಾ ಕಾಂಗ್ರೆಸ್ ಪಕ್ಷ.
ಜಿಲ್ಲಾ ಮಟ್ಟದ ಸಭೆಯಲ್ಲಿ ಹಾಕಲಾಗಿದ್ದ ಬ್ಯಾನರ್ನಲ್ಲಿ ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೊತ್ತೂರು ಮಂಜುನಾಥ್, ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಶಶಿಧರ್ ಅವರ ಭಾವಚಿತ್ರ ಹಾಕಿರಲಿಲ್ಲ, ಜಿಲ್ಲಾಧ್ಯಕ್ಷರಿಗೆ ಈ ಬಗ್ಗೆ ತಿಳಿದೂ ಏಕೆ ಹೀಗಾಯಿತು ಎಂದು ಸಭೆಯಲ್ಲಿ ಕೇಳಿದೆವು, ಅದಕ್ಕೆ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಶಿವಕುಮಾರ್ ಅವರ ಮೇಲೆ ಹಲ್ಲೆ ನಡೆಸಿದರು. ಆದಾಗ್ಯೂ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಕೆಲಸ ಮಾಡಿ ಪಕ್ಷ ದ್ರೋಹ ಮಾಡಿದ ಊರುಬಾಗಿಲು ಶ್ರೀನಿವಾಸ್ ಅವರನ್ನು ವೇದಿಕೆಯಿಂದ ಕೆಳಗಿಳಿಸಲು ಒತ್ತಾಯಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆದು ನೂಕಾಟ ತಳ್ಳಾಟ ಆಗಿದೆ ಅಷ್ಟೇ, ಈ ಘಟನೆಯಿಂದ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರದು, ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ.
ಅಂಬರೀಶ್, ನಗರಸಭೆ ಸದಸ್ಯ. ಕೋಲಾರ.