PLACE YOUR AD HERE AT LOWEST PRICE
ಬಂಗಾರಪೇಟೆ:ಸಂವಿಧಾನ ಎಂಬುವುದು ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತವಲ್ಲ, ಇಡೀ ಭಾರತದ ಜನತೆಯ ಭವಿಷ್ಯವನ್ನು ನಿರ್ಧರಿಸುವ ಪವಿತ್ರಗ್ರಂಥ ಎಂದು ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ ಅಭಿಪ್ರಾಯಪಟ್ಟರು.
೨ನೇ ಹಂತದ ಪಟ್ಟಣ ಪಂಚಾಯಿತಿ, ಪುರಸಭೆ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಸಂವಿಧಾ ಒಂದು ಗ್ರಂಥವಲ್ಲ, ಅದು ಪ್ರಜಾಪ್ರಭುತ್ವದ ವ್ಯವಸ್ಥೆಯ ಆಧಾರಸ್ತಂಭವಾಗಿದೆ. ಒಂದು ದೇಶದ ಭವಿಷ್ಯ ಸಂವಿಧಾನದಿಂದ ನಿರ್ಧರಿಸಲ್ಪಡುತ್ತದೆ. ನಮ್ಮ ಸಂವಿಧಾನವು ವಿಶ್ವದ ಇತರ ರಾಷ್ಟ್ರಗಳ ಸಂವಿಧಾನಗಳಿಗಿಂತ ಬಲವಾಗಿದೆ.
ಲಿಖಿತ ಸಂವಿಧಾನವಾಗಿದ್ದು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ರಾಜ್ಯ ನಿರ್ದೇಶಕ ತತ್ವಗಳನ್ನು ಒಳಗೊಂಡಂತೆ ಪ್ರತಿಯೊಬ್ಬ ಪ್ರಜೆಯ ಹಕ್ಕು ಕರ್ತವ್ಯಗಳ ಬಗ್ಗೆ ಮಾಹಿತಿಯನ್ನೊಳಗೊಂಡ ಅತ್ಯಂತ ಶ್ರೇಷ್ಠಗ್ರಂಥವಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೂರ ದೃಷ್ಠಿಯ ಚಿಂತನೆ ಸಮಾನತೆ ಭ್ರಾತೃತ್ವ, ಪ್ರಜಾಸತಾತ್ಮಕತೆಯ ಮೌಲ್ಯಗಳನ್ನು ಒಳಗೊಂಡಿದೆ ಎಂದರು.
ಕರ್ನಾಟಕ ದಲಿತ ರೈತಸೇನೆ ಸಂಸ್ಥಾಪಕ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಮಾತನಾಡಿ, ರಾಜ್ಯ ಸರ್ಕಾರ ಸಂವಿಧಾನ ಜಾರಿಯಾಗಿ ೭೫ವರ್ಷಗಳ ಸಂಭ್ರಮಾಚರಣೆಯಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿದೆ.
ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಜನವರಿ ೨೬ರಿಂದ ಫೆ.೨೩ರವರೆಗೆ ತಾಲ್ಲೂಕು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕವಾಗಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಮೊದಲ ಹಂತ ಮುಕ್ತಾಯವಾಗಿದೆ.
೨ನೇ ಹಂತದಲ್ಲಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಕೈಗೆತ್ತಿಕೊಂಡಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಬಿಇಓ ಸುಕನ್ಯಾ, ಸಮಾಜ ಕಲ್ಯಾಣ ಅಧಿಕಾರಿ ಶಿವಾರೆಡ್ಡಿ, ಮುಖಂಡರಾದ ಸೂಲಿಕುಂಟೆ ರಮೇಶ್, ಅ.ನಾ.ಹರೀಶ್, ಮಾರುತಿ ಪ್ರಸಾದ್, ಕಲಾವಿದ ಯಲ್ಲಪ್ಪ, ದೊಡ್ಡಮಲೆ ರವಿ, ಹುಣಸನಹಳ್ಳಿ ಸತೀಶ್, ಹುಳದೇನಹಳ್ಳಿ ವೆಂಕಟೇಶ್, ಹಿರೇಕರಪನಹಳ್ಳಿ ಮುನಿರಾಜು, ಜೀವಿಕ ರಾಮಚಂದ್ರಪ್ಪ ಮುಖ್ಯ ಶಿಕ್ಷಕ ಕೃಷ್ಣಪ್ಪ, ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.