PLACE YOUR AD HERE AT LOWEST PRICE
ಬಲಗೈ ಜನಾಂಗಕ್ಕೆ ಅವಮಾನ: ಕರ್ನಾಟಕ ದಲಿತ ಸಿಂಹ ಸೇನೆ ಖಂಡನೆ, ಬಲಗೈ ಜನಾಂಗದ ಅಭ್ಯರ್ಥಿ ಪಕ್ಷೇತರವಾಗಿ ಕಣಕ್ಕೆ: ಹೂಹಳ್ಳಿ ಪ್ರಕಾಶ್
ಕೋಲಾರ: ವೈಯಕ್ತಿಕ ರಾಜಕೀಯ ದ್ವೇಷಗಳಿಗಾಗಿ ಬಲಗೈ ಜನಾಂಗಕ್ಕೆ ಅವಮಾನ ಮಾಡಿರುವುದನ್ನು ಕರ್ನಾಟಕ ದಲಿತ ಸಿಂಹ ಸೇನೆಯು ಖಂಡಿಸುತ್ತದೆ ಎಂದು ಸೇನೆಯ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕೆ.ಎಚ್.ಮುನಿಯಪ್ಪ ಅವರ ಕುಟುಂಬ ತುಳಿಯುವ ಜೊತೆಗೆ ಬಲಗೈ ಜನಾಂಗವನ್ನು ತುಳಿದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, 2024 ರ ಲೋಕಸಭಾ ಚುನಾವಣೆಯಲ್ಲಿ ಬಲಗೈ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಿಸುತ್ತೇನೆಂದು ಮಾತು ನೀಡಿದವರೆಲ್ಲರೂ ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸುಧಾಕರ್, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮದ್, ಅನಿಲ್ ಕುಮಾರ್ ಎಂಪಿ ಟಿಕೆಟ್ ವಿಚಾರವಾಗಿ ರಾಜೀನಾಮೆ ನೀಡುವ ನಾಟಕವನ್ನು ಮಾಡಿದರು. ಆದರೆ, ಬಲಗೈ ಜನಾಂಗದ ಮುಖಂಡ ಸಿಎಂ ಮುನಿಯಪ್ಪಾಗೆ ಟಿಕೆಟ್ ಕೊಡಿಸಲು ಸಾಧ್ಯವಾಗಿಲ್ಲ. ಜಿಲ್ಲೆಯ ಅಭಿವೃದ್ಧಿಗೆ, ನೀರಿನ ವಿಚಾರಕ್ಕೆ ರಾಜೀನಾಮೆ ನೀಡಲು ಆಗದ ನಾಟಕೀಯ ರಾಜಕಾರಣಿಗಳಿವರು. ಒಂದಾಗಿ-ಒಗ್ಗಟ್ಟಾಗಿ ಬಾಳುತ್ತಿದ್ದ ಎಡಗೈ-ಬಲಗೈ ಜನಾಂಗದ ನಡುವೆ ಹುಳಿ ಹಿಂಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಲೋಕಸಭಾ ಕ್ಷೇತ್ರದಲ್ಲಿ 3.80 ಲಕ್ಷ ಬಲಗೈ ಸಮುದಾಯದವರು ಇದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ನಮಗೆ ಕಾಂಗ್ರೆಸ್ ಟಿಕೆಟ್ ಸಿಗದೆ ಅನ್ಯಾಯವಾಗುತ್ತಿದೆ. ಹಾಲಿ ಸಂಸದ ಬಿಜೆಪಿ ಎಸ್.ಮುನಿಸ್ವಾಮಿಗೆ ನೀಡಿದ್ದರೂ ಸಹ ನಾವು ಗೆಲ್ಲಿಸಿಕೊಳ್ಳುತ್ತಿದ್ದವು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಲಗೈ ಜನಾಂಗಕ್ಕೆ ತೀರಾ ಮೋಸ, ಅವಮಾನವಾಗಿರುವುದು ಸತ್ಯ. ಜನರು ನಮ್ಮನ್ನು ಎಲ್ಲಂದರಲ್ಲಿ ಪ್ರಶ್ನಿಸುತ್ತಿದ್ದಾರೆ ಎಂದು ತಿಳಿಸಿದರು.
ಏ.4 ನಾಮಪತ್ರ ಸಲ್ಲಿಸುವ ಕೊನೆ ದಿನವಾಗಿದ್ದು, ಅಷ್ಟರೊಳಗಾಗಿ ಕಾಂಗ್ರೆಸ್ ಪಕ್ಷ ಬಲಗೈ ಜನಾಂಗದವರಿಗೆ ಟಿಕೆಟ್ ನೀಡಬೇಕು. ಇಲ್ಲವಾದಲ್ಲಿ ಎಂಟು ಕ್ಷೇತ್ರದಲ್ಲಿ ಬಲಗೈ ಜನಾಂಗದವರು ಸಭೆ ನಡೆಸಿ, ಹೆಚ್ಚಿನ ಸಂಖ್ಯೆಯುಳ್ಳ ನಮ್ಮ ಜೊತೆಗೆ ಅಲ್ಪಸಂಖ್ಯಾತರ ಮತಗಳನ್ನು ಸೇರಿಸಿ ಪಕ್ಷೇತರ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಿಂಹ ಸೇನೆಯ ಪದಾಧಿಕಾರಿಗಳಾದ ಹನುಮಾನ್, ಮುನಿಯಪ್ಪ, ನಾಗರಾಜ್, ರವಿ, ಶ್ರೀನಾಥ್, ಯಳಪ್ಪ, ಮುನಿಸ್ವಾಮಿ, ಅರುಣಾಂಜಿ ಇದ್ದರು.