PLACE YOUR AD HERE AT LOWEST PRICE
ಕೋಲಾರ,ಜೂನ್ ೫ : ಹಸಿರೇ ಮುಂದಿನ ಪೀಳಿಗೆಗೆ ಉಸಿರು ಎಂಬುದನ್ನು ಅರಿತು, ಪ್ರತಿಯೊಬ್ಬರೂ ತಮ್ಮ ಜನ್ಮದಿನಕ್ಕೊಂದು ಸಸಿನೆಟ್ಟು ಹಸಿರನ್ನು ಉಸಿರಾಗಿಸಿ ಎಂದು ಕರ್ನಾಟಕ ಪರಿಸರ ಸಂರಕ್ಷಣಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಹೆಚ್.ಎನ್.ಮೂರ್ತಿ ಕರೆ ನೀಡಿದ್ದಾರೆ.
ನಗರದ ನಚಿಕೇತ ನಿಲಯದ ಆವರಣದಲ್ಲಿ ಮಂಗಳವಾರ ಸಂಜೆ ಪರಿಸರ ಪ್ರೇಮಿ ಹೆಚ್.ಎನ್.ಮೂರ್ತಿರವರ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಬೆಳೆಯುತ್ತಿರುವ ನಗರೀಕರಣ ಹಾಗೂ ಕೈಗಾರಿಕರಣದಿಂದಾಗಿ ಜಾಗತಿಕವಾಗಿ ತಾಪಮಾನ ಏರಿಕೆಯಾಗುತ್ತಿರುವ ಕಾರಣ, ಪರಿಸರ ಸಂರಕ್ಷಣೆ ಬಹಳ ಅತ್ಯಗತ್ಯವಾಗಿದೆ. ಇದೇ ಸಂದರ್ಭದಲ್ಲಿ ಜನಸಂಖ್ಯೆಯೂ ಸಹ ಬೆಳೆಯುತ್ತಿದ್ದು ದಿನೇ ದಿನೇ ಅರಣ್ಯಗಳ ನಾಶವೂ ಅಷ್ಟೇ ಪ್ರಮಾಣದಲ್ಲಿ ಇದ್ದು ಇದು ಪ್ರಕೃತಿಯ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು.
ಪರಸರದಲ್ಲಿ ಸಮತೋಲನ ಇಲ್ಲದೆ ಹೋದರೆ, ಪ್ರಕೃತಿ ವಿಕೋಪಗಳು ಸಂಭವಿಸುತ್ತದೆ. ಈಗಾಗಲೇ ಪರಿಸರದಲ್ಲಿ ಅಸಮತೋಲನ ಉಂಟಾಗಿದ್ದು, ಓಝೋನ್ ಪದರ ದಿನೇ ದಿನೇ ತೆಳುವಾಗುತ್ತಲಿದೆ. ಇದರಿಂದ ಸೂರ್ಯನ ಪ್ರಭಾವಿ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತಿದ್ದು ವಾತಾವರಣದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಇದನ್ನು ಹತೋಟಿಗೆ ತರಲು ಇರುವ ಏಕೈಕ ಮಾರ್ಗವೆಂದರೆ ಅರಣ್ಯವನ್ನು ಹೆಚ್ಚಿಸುವುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ದಲಿತ ಸೇನೆ ಅಧ್ಯಕ್ಷ ದಲಿತ್ ನಾರಾಯಣಸ್ವಾಮಿ, ದಲಿತ ಮುಖಂಡ ದಿಂಬಚಾಮನಹಳ್ಳಿ ಅಂಬರೀಶ್, ಜಾನಪದ ಗಾಯಕ ಮತ್ತಿಕುಂಟೆ ಕೃಷ್ಣಪ್ಪ, ಚಿನ್ನಾಪುರ ಅಶ್ವಿನ್, ವಾರ್ಡನ್ ರವಿಕುಮಾರ್, ಮಂಜುನಾಥ್, ಆನಂದ್, ವಿಜಿ, ಪ್ರಕಾಶ್, ಸಂಜೀವನ್, ದಿಂಬ ಪ್ರಕಾಶ್, ಶ್ರೀಕಾಂತ್, ರಾಜು, ರಘು, ಮುಂತಾದವರಿದ್ದರು.