PLACE YOUR AD HERE AT LOWEST PRICE
ಬಂಗಾರಪೇಟೆ:ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಯೋಜನೆ ಗ್ರಾಮೀಣರಿಗೆ ವರವಾಗಿದ್ದರೆ ಮತ್ತೊಂದು ಕಡೆ ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿರುವುದು ರಸ್ತೆಗಳಿಗೆ ಕಂಟಕವಾಗಿ ಪೆರಿಣಮಿಸಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮನೆ ಮನೆಗೂ ನಲ್ಲಿ ನೀರು ಕಲ್ಪಿಸುವ ಜಲ ಜೀವನ್ ಮಿಷನ್ ಯೋಜನೆ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ.ಈ ಹಿಂದೆ ಮಹಿಳೆಯರು ಬಿಂದಿಗೆಗಳನ್ನು ಹಿಡಿದು ಅಲೆಯುವಂತಾಗಿತ್ತು.
ಈಗ ಈ ಜಲ ಜೀವನ್ ಯೊಜನೆಯಿಂದ ಮನೆ ಮನೆಗೆ ನಲ್ಲಿ ನೀರು ಪೂರೈಸಲಾಗುತ್ತಿದೆ.ಆದರೆ ಯೋಜನೆಯಡಿಯಲ್ಲಿ ಪೈಪ್ ಲೈನ್ ಅಳವಡಿಕೆಗೆ ಗುತ್ತಿಗೆದಾರ ರಸ್ತೆಯನ್ನು ಅಗೆದು ಪೂಪ್ ಲೈನ್ ಜೋಡಿಸಿದ ಬಳಿಕ ಸರಿಯಾಗಿ ಮುಚ್ಚದಿರುವ ಕಾರಣ ರಸ್ತೆಗಳು ದುಸ್ಥಿತಿಯಲ್ಲಿದೆ.ಗುತ್ತಿಗೆದಾರರ ಅಸಡ್ಡೆಯಿಂದ ರಸ್ತೆಗಳು ಹಾಳಾಗಿದ್ದರೂ ದುರಸ್ತಿಗೆ ಮುಂದಾಗಿಲ್ಲ.
ತಾಲೂಕಿನ ಚಿನ್ನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಗಾನಹಳ್ಳಿ ಗ್ರಾಮದಲ್ಲಿ ಕಳೆದ ಹಲವು ತಿಂಗಳ ಹಿಂದೆ ಈ ಯೋಜನೆಯನ್ನು ಜಾರಿಗೊಳಿಸಲು ಗ್ರಾಮದ ಮುಖ್ಯರಸ್ತೆಗಳನ್ನು ಅಗೆದು ತಿಂಗಳಾನುಗಟ್ಟಲೆ ಹಾಗೆ ಬಿಟ್ಟಿದ್ದಾರೆ. ಇದರಿಂದಾಗಿ ವೃದ್ಧರು, ಕುರಿ ಮೇಕೆ, ದನಕರಗಳನ್ನು, ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಅನಾನುಕೂಲವಾಗಿದ್ದು, ಅಧಿಕಾರಿಗಳು ಕೂಡಲೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಸೂಚನೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರೆ.
ಬಾಯ್ತೆರೆದ ಗುಂಡಿಗಳು.
ಕಾಮಗಾರಿಯನ್ನು ಪೂರ್ಣಗೊಳಿಸದ ಕಾರಣ ಅರೆಬರೆ ಕಾಮಗಾರಿ ಮುಗಿಸಿ ನಳ ನೀರು ಸಂಪರ್ಕ ನೀಡಲು ಕೆಲವು ಕಡೆ ಆರು ತಿಂಗಳಾದರೂ ಸಹ ಇಂದಿಗೂ ಗುಂಡಿಗಳನ್ನು ಮುಚ್ಚಿಲ್ಲ ಹಾಗೂ ಐದಾರು ಅಡಿ ಪೈಪ್ಗಳನ್ನು ಭೂಮಿಯಿಂದ ಹೊರಗೆ ಬಿಡಲಾಗಿದೆ. ಕೆಲವೆಡೆ ಗ್ರಾಮದ ಉದ್ದಗಲಕ್ಕೂ ಇರುವ ರಸ್ತೆಗಳ ಮದ್ಯ ಭಾಗಕ್ಕೆ ಅಗೆದು ಎರಡು ಭಾಗಗಳನ್ನಾಗಿ ಮಾಡಿ ರಸ್ತೆ ಮಧ್ಯ ಭಾಗದಲ್ಲಿ ಒಂದೆರಡು ಅಡಿ ಗುಂಡಿ ಅಗೆದು ಹಾಗೆ ಬಿಟ್ಟ ಪರಿಣಾಮ ಕಾಂಕ್ರಿಟ್ ರಸ್ತೆಗಳ ತ್ಯಾಜ್ಯ ಎಲ್ಲೆಂದರಲ್ಲಿ ಹಾಗೆ ಬಿಟ್ಟ ಪರಿಣಾಮ ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ, ಮಕ್ಕಳು ಹಾಗೂ ಬೈಕ್ ಸವಾರರು ಬಿದ್ದು ಕೈಕಾಲುಗಳಿಗೆ ತೀವ್ರತರ ಗಾಯಗಳಾದ ಘಟನೆಗಳು ನಡೆದಿವೆ.
ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ರಸ್ತೆಗಳಿಗೆ ಹಾನಿಯಾಗುತ್ತಿದ್ದರು, ಕಾಮಗಾರಿಗಳನ್ನು ವಿಳಂಬ ಮಾಡುವ ಜತೆಗೆ ಕಾಮಗಾರಿಗಳಿಗೆ ಬಳಸುತ್ತಿರುವ ಸಾಮಗ್ರಿಗಳು ಸಹ ಕಳಪೆಯಿಂದ ಕೂಡಿವೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು,ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.ಅಧಿಕಾರಿಗಳು ಕಾಮಗಾರಿ ಪರಿಶೀಲಿಸಿ ಕ್ರಮ ಕೈಗೊಂಡು ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
-ಕೆ.ರಮೇಶ್.