PLACE YOUR AD HERE AT LOWEST PRICE
ಸರಕಾರಿ ಶಾಲೆಯ ಕಟ್ಟಡ ಹಾಗೂ ಮೇಲ್ಛಾವಣಿ ಶಿಥಿಲಗೊಂಡು ಕುಸಿಯುತ್ತಿದ್ದರೂ ಸೂಕ್ತ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಕೋಲಾರ ನಗರದ ಸುಲ್ತಾನ್ ತಿಪ್ಪಸಂದ್ರದ ಸರಕಾರಿ ಉರ್ದು ಕಿರಿಯ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ನಗರಸಭೆಯ ವಾರ್ಡ್ ನಂ 16ರ ಸುಲ್ತಾನ್ ತಿಪ್ಪಸಂದ್ರದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳು ಎಂದಿನಂತೆ ಬೆಳಗ್ಗೆ ಆಗಮಿಸಿದಾಗ ಕಟ್ಟಡ ಮೇಲ್ಚಾವಣಿಯ ಸೀಲಿಂಗ್ ಬಿದ್ದಿರುವುದು ಕಂಡುಬಂದಿದೆ.
ಕೂಡಲೇ ಶಿಕ್ಷಕರು ಮಕ್ಕಳನ್ನು ಪಕ್ಕದ ಕೊಠಡಿಗೆ ಕಳುಹಿಸಿದ್ದಾರೆ. ಮೇಲ್ಛಾವಣಿ ಶಿಥಿಲಗೊಂಡಿರುವ ಪರಿಣಾಮ ಕಳೆದ ಗುರುವಾರ ರಾತ್ರಿ ಘಟನೆ ಜರುಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ರಾತ್ರಿ ಘಟನೆ ನಡೆದಿದ್ದರೂ ಬೆಳಗ್ಗೆ ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸ್ಥಳೀಯ ಮುಖಂಡ ಮೊಯಿದ್ದೀನ್ ಖಾನ್, ಈ ಹಿಂದೆಯೂ ಇದೇ ರೀತಿ ಘಟನೆ ನಡೆದಿದ್ದ ವೇಳೆ ಕಾಟಾಚಾರಕ್ಕೆ ಎಂಬಂತೆ ತೇಪೆ ಹಾಕುವ ಕೆಲಸ ಮಾಡಿದ್ದರು. ಅದೇ ರೀತಿ ಇಂದು ಮರುಕಳಿಸಿದ್ದು, ರಾತ್ರಿ ವೇಳೆ ಘಟನೆ ನಡೆದಿರುವುದರಿಂದಾಗಿ ಅದೃಷ್ಟವಶಾತ್ ಮಕ್ಕಳು, ಶಿಕ್ಷಕರು ಅನಾಹುತದಿಂದ ಪಾರಾಗಿದ್ದಾರೆ.
ಈ ಶಾಲೆಯಲ್ಲಿ 60 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಿಕ್ಷಣ ಇಲಾಖೆಯು ಕೂಡಲೇ ಎಚ್ಚೆತ್ತು ಪರ್ಯಾಯ ವ್ಯವಸ್ಥೆ ಮಾಡದೇ ಇದ್ದಲ್ಲಿ, ಮಕ್ಕಳ ವರ್ಗಾವಣೆ ಪತ್ರಗಳನ್ನು ಪಡೆದು ಬೇರೆ ಶಾಲೆಗಳಲ್ಲಿ ದಾಖಲಾತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಸ್ಥಳಕ್ಕಾಗಮಿಸಿದ ಬಿಇಒ ಕನ್ನಯ್ಯ, ಸಂಬಂಧಪಟ್ಟ ಎಂಜಿನಿಯರ್ ಅವರಿಗೆ ಸೂಚಿಸಿ,
ತಕ್ಷಣಕ್ಕೆ ಪರ್ಯಾಯ ಬಾಡಿಗೆ ಕೊಠಡಿ ವ್ಯವಸ್ಥೆ ಮಾಡಿ ಶೀಘ್ರ ಶಿಥಿಲ ಕಟ್ಟಡ ದುರಸ್ಥಿಪಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೋಷಕರಾದ ಆರೀಫ್, ಅಯೂಬ್, ಶಂಷುದ್ಧೀನ್, ಆಜಂಖಾನ್ ಮುಂತಾದವರಿದ್ದರು.