• Sat. Jul 27th, 2024

ಸಂವಿಧಾನ ತೆಗೆದು ಮನುವಾದ ಜಾರಿ ಮಾಡುವುದು ಆಳುವ ಸರಕಾರದ ಉದ್ದೇಶವಾಗಿದೆ.ನಾವು ನಮ್ಮ ಬೆರಳಿನ ಮೂಲಕ ಸರಕಾರಗಳಿಗೆ ಉತ್ತರ ಕೊಡಬೇಕಾಗಿದೆ – ಜ್ಞಾನಪ್ರಕಾಶ್ ಸ್ವಾಮೀಜಿ

PLACE YOUR AD HERE AT LOWEST PRICE

ದೇಶದಲ್ಲಿ ಸಂವಿಧಾನವನ್ನು ತೆಗೆದು ಮನುವಾದವನ್ನು ಜಾರಿ ಮಾಡಲು ನಮ್ಮನ್ನು ಆಳುವ ಸರಕಾರದ ಉದ್ದೇಶವಾಗಿದ್ದು, ಧರ್ಮದ ಆಧಾರದಲ್ಲಿ ಜಾತಿಗಳನ್ನು ಎತ್ತಿಕಟ್ಟಿ ರಾಜಕಾರಣ ಮಾಡಲು ಇಂದಿನ ಆಳುವ ಪಕ್ಷಗಳು ಹೊರಟಿವೆ, ದಲಿತರು ಜೈಭೀಮ್ ಎನ್ನುವ ಬಾಯಿಯಲ್ಲಿ ಜೈಶ್ರೀರಾಮ್ ಅನ್ನುವ ಹಂತಕ್ಕೆ ಜನರನ್ನು ಮರುಳು ಮಾಡಿದ್ದಾರೆ, ನಾವು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಎಚ್ಚೆತ್ತ ಭಾರತವನ್ನು ಕಟ್ಟಿ ನಮ್ಮ ಬೆರಳಿನ ಮೂಲಕ ಈ ಸರಕಾರಗಳಿಗೆ ಉತ್ತರ ಕೊಡಬೇಕಾಗಿದೆ ಎಂದು ಮೈಸೂರು ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಕರೆ ನೀಡಿದ್ದಾರೆ.
ನಗರದ ಹಳೆ ಬಸ್ ನಿಲ್ದಾಣದಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಬೆಂಗಳೂರು ವಿಭಾಗ ಮಟ್ಟದ ಪ್ರಬುದ್ಧ ಭಾರತಕ್ಕಾಗಿ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರಿಗೆ ಮತದಾನದ ಮಹತ್ವ ಗೊತ್ತಿಲ್ಲದ ಪರಿಣಾಮ ದೇಶದಲ್ಲಿ ಪ್ರಜಾಪ್ರಭುತ್ವ ಯಾರ ಕೈಹಿಡಿಯಬೇಕಾಗಿತ್ತು ಅವರಿಂದ ಸಾಧ್ಯವಾಗಲಿಲ್ಲ ದೇಶವನ್ನು ಧರ್ಮದ ಆಧಾರದಲ್ಲಿ ಜಾತಿಗಳನ್ನು ಎತ್ತಿಕಟ್ಟಿ ರಾಜಕಾರಣ ಮಾಡಲು ಹೊರಟಿದ್ದಾರೆ.  ದಲಿತರು ಜೈ ಭೀಮ್ ಎನ್ನುವ ಬಾಯಿಯಲ್ಲಿ ಜೈ ಶ್ರೀರಾಮ್ ಅನ್ನುವ ಹಂತಕ್ಕೆ ಜನರನ್ನು ಮರಳು ಮಾಡಿದ್ದಾರೆ. ಸಂವಿಧಾನವನ್ನು ತೆಗೆದು ಮನುವಾದ ಜಾರಿ ಮಾಡುವುದು ನಮ್ಮನ್ನು ಆಳುವ ಸರಕಾರದ ಉದ್ದೇಶವಾಗಿದೆ.
ದೇಶದ ಭವಿಷ್ಯ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದ ಹಕ್ಕುಗಳಲ್ಲಿ ಒಂದಾದ ಚುನಾವಣೆಯಿಂದ ಸಾಧ್ಯವಾಗುತ್ತದೆ. ದಲಿತರು, ಶೋಷಿತರು, ಧಮನಿತರು ಒಗ್ಗಟ್ಟಿನಿಂದ ಮತದಾನದ ಜಾಗೃತಿಯಿಂದ ಪ್ರಜಾಪ್ರಭುತ್ವ ಭಾರತದಲ್ಲಿ ಉಳಿಯಲು ಸಾಧ್ಯ,  ಮುಂದೆ ಚುನಾವಣೆಯಲ್ಲಿ ಎಚ್ಚರಿಕೆಯಿಂದ ನಮ್ಮ ಬೆರಳಿನ ಮೂಲಕ  ಸರಕಾರಗಳಿಗೆ ಉತ್ತರ ಕೊಡಬೇಕಾಗಿದೆ  ದಲಿತರು ಬೇಡುವ ಸಮಾಜವಾಗದೇ ಆಳುವ ಸಮಾಜವಾಗಬೇಕು ಅ ದೃಷ್ಟಿಯಿಂದ ಯೋಚನೆ ಮಾಡಬೇಕು ಎಂದರು.
ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿ ಸಮಾಜದಲ್ಲಿ ಬಹುತೇಕ ದಲಿತರು ಅಂಬೇಡ್ಕರ್ ಅಭಿಮಾನಿಗಳಾಗಿದ್ದು ಜೈಕಾರ, ಕುಣಿಯೋದಕ್ಕೆ ಮಾತ್ರವೇ ಸೀಮಿತ ಆಗಿದ್ದಾರೆ ಆದರೆ ಅನುಯಾಯಿಗಳು ಅಂಬೇಡ್ಕರ್ ದಾರಿಯಲ್ಲಿ ನಡೆಯೋದು, ಅವರ ವಿಚಾರಗಳನ್ನು ತಿಳಿದುಕೊಳ್ಳುವುದಾಗಿದೆ ಭಾರತದಲ್ಲಿ ಸುಮಾರು 9325 ಜಾತಿಗಳು ಇದ್ದು ಅದರಲ್ಲಿ ದಲಿತರು  ಯಾವ ಸ್ಥಾನವಿದೆ ಎಂಬುದು ಗೊತ್ತಿಲ್ಲವಾಗಿದೆ  ನಮ್ಮಲ್ಲಿ ಸಹೋದರತ್ವ, ಸಮನ್ವಯತೆ ಇಲ್ಲವಾಗಿದೆ ಜಾತಿ ಜಾತಿಗಳಲ್ಲಿ ದ್ವೇಷ ಬಿಡದೇ ಹೋದರೆ ಪ್ರಬುದ್ದ ಭಾರತ ನಿರ್ಮಾಣ ಅಸಾಧ್ಯ ಎಂದರು.
ಚಿಂತಕ ದಿನೇಶ್ ಅಮೀನ್ ಮಟ್ಟು ಮಾತನಾಡಿ ದಲಿತರು ಅಭದ್ರತೆಯಿಂದ ಬದುಕುವಂತಾಗಿದ್ದು ಪ್ರತಿಯೊಂದು ಹಂತದಲ್ಲೂ ಶೋಷಣೆ, ದಬ್ಬಾಳಿಕೆಗಳು ನಡೆಯುತ್ತಾ ಇದ್ದು ದಲಿತರ ಅಭಿವೃದ್ಧಿಗಾಗಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಾತಿನಿಧ್ಯ ಸಿಗಬೇಕು ಜೊತೆಗೆ ಖಾಸಗಿ ರಂಗದಲ್ಲಿ ಮೀಸಲಾತಿಗೆ ಒತ್ತಾಯಿಸಬೇಕು ಪ್ರಬುದ್ಧ ಭಾರತ ನಿರ್ಮಾಣಕ್ಕೆ ನಮ್ಮ ಗುರಿ ಮತ್ತು ಹೋಗುವ ದಾರಿ ಒಂದೇ ಆಗಿರಬೇಕು ಅನಿಟ್ಟಿನಲ್ಲಿ ಸಂಘಟನೆ ಯೋಚನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿ‌ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಂದು ಕ್ಷೇತ್ರದಲ್ಲಿ ಸಂಘಪರಿವಾರದ ಅಜೆಂಡಾಗಳನ್ನು ಜಾರಿ ಮಾಡಲು ಹೊರಟಿದ್ದಾರೆ ಸಂವಿಧಾನ ವಿರೋಧಿ ಹೇಳಿಕೆಗಳು ಅವಮಾನಗಳು ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಾ ಇದ್ದು ಕದಸಂಸ ನೇತೃತ್ವದಲ್ಲಿ ಪ್ರತಿರೋಧ ಒಡ್ಡುವ ಮೂಲಕ ಎಚ್ಚರಿಕೆ ನೀಡುವುದೇ ಈ ಸಮಾವೇಶದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ವಹಿಸಿದ್ದರು.  ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ರಾಜ್ಯ ಮುಖಂಡರಾದ ಮರೀಶ್ ನಾಗಣ್ಣವರ್, ವಿಜಯನರಸಿಂಹ, ಭೀಮಜ್ಯೋತಿ ಸೀನು, ಚನ್ನಯ್ಯ, ಗುಡಿಬಂಡೆ ಈಶ್ವರಪ್ಪ, ನಿಟ್ಟೂರು ರಂಗಸ್ವಾಮಿ, ಹೆಗ್ಗನಹಳ್ಳಿ ಮೂರ್ತಿ, ದೇವರಾಜ್, ಕಡಿಲ್ ವೆಂಕಟರಮಣ ಜಿಲ್ಲಾ ಮುಖಂಡರಾದ ಮುನಿಚೌಡಪ್ಪ, ಚವ್ವೇನಹಳ್ಳಿ ವಿಜಿ, ವೆಂಕಟರಮಣಪ್ಪ, ಸಂಪತ್, ಕೇಶವ, ಎಸ್.ಎಂ ವೆಂಕಟೇಶ್ ಮುಂತಾದವರು ಇದ್ದರು

Leave a Reply

Your email address will not be published. Required fields are marked *

You missed

error: Content is protected !!