ದಲಿತರಲ್ಲಿ ಇಂದು ಕೆಲವರು ಜೈಶ್ರೀರಾಮ್ ಎಂದರೆ ಕೆಲವರು ಜೈಭೀಮ್ ಎನ್ನುತ್ತಿದ್ದಾರೆ. ಆದರೆ, ಜೈ ಶ್ರೀರಾಮ್ ಎನ್ನುವವರ ಕೈಯಲ್ಲಿ ಬಾಣವಿದೆ, ಜೈಭೀಮ್ ಎನ್ನುವವರ ಕೈಯಲ್ಲಿ ಮತ ಮತ್ತು ಲೇಖನಿ ಇದೆ, ಬಾಣ ಯಾರನ್ನಾದರೂ ಒಬ್ಬರನ್ನು ಮಾತ್ರ ಹೊಡೆಯುತ್ತೆ ಆದರೆ ಮತ ಮತ್ತು ಲೇಖನಿ ಎಲ್ಲರ ಹಣೆ ಬರಹವನ್ನು ಬದಲಾಯಿಸುತ್ತೆ, ನಾವು ಮತದಾನದ ಮಹತ್ವ ಅರಿತು ನಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಪ್ರಭುದ್ಧಭಾರತವನ್ನು ಕಟ್ಟಬೇಕು ಎಂದು ಪ್ರೊ. ಬಿ.ಕೃಷ್ನಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಕರೆ ನೀಡಿದರು.
ನಗರದ ಹಳೆ ಬಸ್ ನಿಲ್ದಾಣದಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಬೆಂಗಳೂರು ವಿಭಾಗ ಮಟ್ಟದ ಪ್ರಬುದ್ಧ ಭಾರತಕ್ಕಾಗಿ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತದಾನ ರಾಜ್ಯಾಧಿಕಾರದ ಕೀಲಿ ಕೈ ಎಂಬುದನ್ನು ಅಂಬೇಡ್ಕರ್ ಸಂವಿಧಾನದ ಮೂಲಕ ನಮಗೆ ತಿಳಿಸಿದ್ದಾರೆ. ಅದರ ಮಹತ್ವನ್ನು ಅರಿತು, ಜಾರಿಗೆ ತಂದ ಏಕೈಕ ದಲಿತ ರಾಜಕೀಯ ಚಿಂತಕ ದಾದಾ ಸಾಹೇಬ್ ಕಾನ್ಸೀರಾಮ್, ಅದಕ್ಕೇ ಅವರ ಜನ್ನ ದಿನಾಚರಣೆಯಂದೇ ಪ್ರಭುದ್ಧ ಭಾರತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ತಿಳಿಸಿದರು.
ಮೀಸಲಾತಿಯಿಂದ ಗೆದ್ದವರು ವಿವಿಧ ರಾಜಕೀಯ ಪಕ್ಷಗಳ ಗುಲಾಮರಾಗಿದ್ದಾರೆ. ಅವರಿಂದ ದೇಶದ ಸಂವಿಧಾನ ರಕ್ಷಣೆಯೂ ಸಾಧ್ಯವಿಲ್ಲ, ಸಮಾಜದ ರಕ್ಷಣೆಯೂ ಸಾಧ್ಯವಿಲ್ಲ, ಅವರವರ ಹಿತಾಸಕ್ತಿಗಾಗಿ ನೂರೊಂದು ಜಾತಿಗಳನ್ನು ಹೊಡೆದು ಅವರವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ಅಖಂಡ ಭಾರತದ ಕಲ್ಪನೆಯಲ್ಲಿ ಜಾತ್ಯಾತೀತವಾದದ ಮೂಲಕ ಸಾಮಾಜಿಕ ನ್ಯಾಯದ ಕಡೆ ನಮ್ಮ ಪಯಣ ಸಾಗಬೇಕಿದೆ ಎಂದರು.
. ನಮಗೆ ಹಳೇ ಭಾರತ-ನವ ಭಾರತ ಬೇಕಿಲ್ಲ, ನಮಗೆ ಬೇಕಿರುವುದು ‘ಪ್ರಭುದ್ಧಭಾರತ’ ಮತ್ತು ‘ಬುದ್ಧಭಾರತ’ಪ್ರಭುದ್ಧಭಾರತ ನಿರ್ಮಾಣವಾಗಬೇಕಾದರೆ, ಪೆರಿಯಾರ್, ಕಾನ್ಸಿರಾಮ್, ನಾರಾಯಣ್ಗುರು, ಜ್ಯೊತಿ ಬಾ ಪುಲೆ ರವರಂತಹ ಮಹಾನ್ನಾಯಕರ ವಿಚಾರಗಳನ್ನು ಅಳವಡಿಸಿಕೊಂಡು ಅಂಬೇಡ್ಕರ್ ಹಾದಿಯಲ್ಲಿ ಸ್ವತಂತ್ರ ರಾಜಕಾರಣದತ್ತ ಸಾಗಿದರೆ ಮಾತ್ರ ಪ್ರಭುದ್ಧ ಭಾರತ ನಿರ್ಮಾಣ ಸಾಧ್ಯ, ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಹಿರಿಯ ಚಿಂತಕ ದಿನೇಶ್ ಅಮೀನ್ ಮಟ್ಟು, ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಗೋಪಾಲ್, ದಸಂಸ ರಾಜ್ಯಾಧ್ಯಕ್ಷ ಹೆಣ್ಣೂರು ಶ್ರೀನಿವಾಸ್, ರಾಜ್ಯ ಮುಖಂಡರಾದ ಮರೀಶ್ ನಾಗಣ್ಣವರ್, ವಿಜಯನರಸಿಂಹ,ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಭೀಮಜ್ಯೋತಿ ಸೀನು, ಚನ್ನಯ್ಯ, ಗುಡಿಬಂಡೆ ಈಶ್ವರಪ್ಪ, ನಿಟ್ಟೂರು ರಂಗಸ್ವಾಮಿ, ಹೆಗ್ಗನಹಳ್ಳಿ ಮೂರ್ತಿ, ದೇವರಾಜ್, ಕಡಿಲ್ ವೆಂಕಟರಮಣ ಜಿಲ್ಲಾ ಮುಖಂಡರಾದ ಮುನಿಚೌಡಪ್ಪ, ಚವ್ವೇನಹಳ್ಳಿ ವಿಜಿ, ವೆಂಕಟರಮಣಪ್ಪ, ಸಂಪತ್, ಕೇಶವ, ಎಸ್.ಎಂ ವೆಂಕಟೇಶ್ ಮುಂತಾದವರು ಇದ್ದರು.