ಬಂಗಾರಪೇಟೆ:ಕೇವಲ ಮಾತುಗಳಿಂದ ಅಭಿವೃದ್ಧಿ ಸಾದ್ಯವಿಲ್ಲ. ನಾಯಕನ ಬದ್ಧತೆ ಇಚ್ಛಾಶಕ್ತಿಯಿಂದ ಅಭಿವೃದ್ಧಿ ಕಾರ್ಯಗಳು ಸಾದ್ಯವಾಗುತ್ತದೆ ಎಂದು ಶಾಸಕ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಕುಳ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ನವೀಕರಣ ಕಾಮಗಾರಿಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರದಿಂದ ಹೆಚ್ಚುವರಿ ಅನುದಾನವಿಲ್ಲದಿದ್ದರೂ ಸಹ ಅನೇಕ ದಾನಿಗಳಿಂದ ಹಣವನ್ನು ಕ್ರೂಡೀಕರಿಸಿ ಸರ್ಕಾರಿ ಶಾಲೆಯನ್ನು ಖಾಸಗಿಶಾಲೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ನವೀಕರಣಗೊಳಿಸಿರುವುದು ಗ್ರಾಪಂ ಅಧ್ಯಕ್ಷ ಎಚ್ಎಂ ರವಿರ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಇತ್ತೀಚಿಗೆ ಸರ್ಕಾರಿ ಶಾಲೆಗಳನ್ನು ಕಂಡರೆ ಮೂಗು ಮುರಿಯುವ ಜನರ ಮಧ್ಯೆ, ಪೋಷಕರು ಮತ್ತು ವಿದ್ಯಾರ್ಥಿಗಳ ಗಮನವನ್ನು ಸರ್ಕಾರಿ ಶಾಲೆಗಳ ಕಡೆ ಕೇಂದ್ರೀಕರಿಸುವ ನಿಟ್ಟಿನಲ್ಲಿ ಶಾಲೆಗೆ ನೂತನ ರೂಪವನ್ನು ಕಲ್ಪಿಸಲಾಗಿದೆ.
ಶಾಲೆಯ ಆವರಣದ ಗೋಡೆಯ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳು ಹೋರಾಟಗಾರರ ಚಿತ್ರಗಳನ್ನು ಬಿಡಿಸಲಾಗಿದೆ. ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯ ಅನಾವರಣಕ್ಕೆ ಪೂರಕ ಎಂಬಂತೆ ಬ್ಯಾಸ್ಕೆಟ್ ಬಾಲ್, ವಾಲಿಬಾಲ್, ಕೊಕ್ಕೋ ಮೈದಾನಗಳನ್ನು ನಿರ್ಮಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.
ನಂತರ ಮಾತನಾಡಿದ ಗ್ರಾಪಂ ಅಧ್ಯಕ್ಷ ಎಚ್ಎಂ ರವಿ ರಾಜಕಾರಣ ಹಾಗೂ ಅಧಿಕಾರ ನಿಂತ ನೀರಲ್ಲ ಮತ್ತು ಶಾಶ್ವತವಲ್ಲ. ಆದರೆ ಸಿಕ್ಕ ಅಧಿಕಾರದ ಅವಧಿಯಲ್ಲಿ ರಾಜಕಾರಣಿಗಳು ಸೇವಾ ಮನೋಭಾವ ಇಚ್ಛಾಶಕ್ತಿ ಇದ್ದರೆ ಕ್ಷೇತ್ರದ ಅಭಿವೃದ್ಧಿ ಉತ್ತುಂಗ ಶಿಖರವನ್ನೇರುತ್ತದೆ ಎಂದರು.
ನನಗೆ ಶಾಸಕರು ಸದಾ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಆಶಯದಂತೆ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳು ಅಗತ್ಯ ಸೌಲಭ್ಯಗಳ ಕೊರತೆಯಿಂದ ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯ ಅನಾವರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸದಸ್ಯರ ಬೆಂಬಲ ಪಿಡಿಓ ಚಿತ್ರಾರ ಸಹಕಾರದಿಂದ ಹುದುಕುಳ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಬ್ಯಾಸ್ಕೆಟ್ಬಾಲ್, ವಾಲಿಬಾಲ್, ಹಾಗೂ ಕೊಕ್ಕೋ ಕ್ರೀಡಾಂಗಣ, ಮತ್ತು ದ್ದಾರಬಾಗಿಳು ನಿರ್ಮಿಸಲಾಗಿದೆ.
ಇದು ಗ್ರಾಮೀಣ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ. ಇದರೊಂದಿಗೆ ನಮ್ಮ ಪಂಚಾಯಿತಿ ವ್ಯಾಪ್ತಿಯ ಬೀರಂಡಹಳ್ಳಿ, ನಾರಾಯಣಪುರ, ಹುದುಕುಳ, ಅಕ್ಕಮ್ಮನದಿನ್ನೇ, ಬೈರನಾಯಕನಹಳ್ಳಿ, ಸರ್ಕಾರಿ ಶಾಲೆಗಳನ್ನು ದುರಸ್ತಿಗೊಳಿಸಿ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಂಗಳಾಕ್ಷಿ ಶ್ರೀನಿವಾಸಗೌಡ, ಮಾಜಿ ಅಧ್ಯಕ್ಷ ಸಿ.ಎಂ.ಹರೀಶ್, ಸದಸ್ಯರಾದ ಸುರೇಶ್, ಮೂರ್ತಿ, ಹನುಮಪ್ಪ, ಚಂದ್ರಪ್ಪ, ಪಿಡಿಓ ಚಿತ್ರಾ, ಇತರರು ಉಪಸ್ಥಿತರಿದ್ದರು.