PLACE YOUR AD HERE AT LOWEST PRICE
ನಿನ್ನೆ ನಡೆದ ರಾಜ್ಯ ಸಚಿವ ಸಂಪುಟದ ಮೀಸಲಾತಿ ಪ್ರಮಾಣ ಹೆಚ್ಚಳ ತೀರ್ಮಾನ ಅವೈಜ್ಞಾನಿಕ ಹಾಗೂ ಸ್ವಾಗತಕ್ಕೆ ಅರ್ಹವಲ್ಲದ ತಿರ್ಮಾನವೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ಸಂಘಟನಾ ಸಂಚಾಲಕರಾದ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕರಾದ ನಾಗನಾಳ ಮುನಿಯಪ್ಪ, ಮುದುವತ್ತಿ ಕೇಶವ, ಟೀಕಿಸಿದ್ದಾರೆ.
ಸದಾಶಿವ ಆಯೋಗದ ವರದಿಯು ೧೫% ಮೀಸಲಾತಿಯಲ್ಲಿ ೬% ಎಡಗೈ ಸಮುದಾಯಕ್ಕೆ, ೫% ಬಲಗೈ ಸಮುದಾಯಕ್ಕೆ ಕೊರಮ, ಕೊರಚ, ಲಂಬಾಣಿ, ಬೋವಿ ೩% ಮತ್ತು ಇತರೇ ಜಾತಿಗಳಿಗೆ ೧%. ಎಂದು ಹೇಳಿತ್ತು. ಅದಕ್ಕೆ ಪೂರಕವಾಗಿ ಅಗತ್ಯ ದಾಖಲೆಗಳನ್ನು ಮುಂದಿಟ್ಟಿತ್ತು. ಬೊಮ್ಮಾಯಿ ಸರ್ಕಾರ ಶಿಫಾರಸ್ಸು ಮಾಡಿರುವುದು ೧೭% ಮೀಸಲಾತಿಯನ್ನು ಆದರಿಸಿ. ಇದರಲ್ಲಿ ೬% ಎಡಗೈ ಸಮುದಾಯಕ್ಕೆ, ೫.೫% ಬಲಗೈ ಸಮುದಾಯಕ್ಕೆ. ಕೊರಮ ಕೊರಚ ಲಂಬಾಣಿ ಬೋವಿ ಜಾತಿಗೆ ೪.೫% ಎಂದು ನಿಜ ಹೇಳಿ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮೀಸಲಾತಿ ಹಂಚಿಕೆ ಆಗಿದೆಯಾ? ಹೆಚ್ಚಿಸಲಾಗಿದೆ ಎಂದು ಹೇಳುತ್ತಿರುವ ೨% ಮೀಸಲಾತಿಯಲ್ಲಿ ೧.೫% ಮೀಸಲಾತಿಯನ್ನು ಕೊರಮ ಕೊರಚ ಲಂಬಾಣಿ ಬೋವಿ ಗಳಿಗೆ ಮಾತ್ರ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.
ಕೇವಲ ೦.೫% ಮೀಸಲಾತಿ ಹೆಚ್ಚಳವನ್ನು ಬಲಗೈ ಸಮುದಾಯಕ್ಕೆ ನೀಡಲು ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಲಾಗಿದೆ. ಮತ್ತು ಅತಿ ಮುಖ್ಯವಾಗಿ ಈಗ ಅತಿ ಹೆಚ್ಚಿನ ಸಂಭ್ರಮಾಚಾರಣೆಯಲ್ಲಿ ತೊಡಗಿರುವ ಮಾದಿಗ ಸಮುದಾಯಕ್ಕೂ ೨% ಪ್ರಮಾಣದ ಮೀಸಲಾತಿ ಹೆಚ್ಚಳಕ್ಕೂ ಯಾವ ಸಂಬoಧವು ಇಲ್ಲವೇ ಇಲ್ಲ ಎಂದು ನೇರವಾಗಿ ಹೇಳಲಾಗಿದೆ.
ಈ ಶಿಫಾರಸ್ಸಿನ ಪ್ರಕಾರವಾಗಿ ನೋಡಿದರೇ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಹೊಲೆಯರ ಜನಸಂಖ್ಯೆ ಹೆಚ್ಚಳ ಕೇವಲ ೦.೫% ಆಗಿದೆಯೆಂದೂ, ಮಾದಿಗರ ಜನಸಂಖ್ಯೆ ಹೆಚ್ಚಳ ಪ್ರಮಾಣ ಸೊನ್ನೆ, ಸೊನ್ನೆ, ಸೊನ್ನೆ ಎಂದೂ, ಆದರೇ, ಕೊರಮ ಕೊರಚ ಲಂಬಾಣಿ ಬೋವಿ ಜನಸಂಖ್ಯೆ ಮಾತ್ರ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಹಾಗಾಗಿ ಅವರಿಗೆ ೧.೫% ಮೀಸಲಾತಿಯನ್ನು ಹೆಚ್ಚಾಗಿ ನೀಡಲಾಗಿದೆ ಎಂದೂ ಒಪ್ಪಿಕೊಳ್ಳಬೇಕಾಗುತ್ತದೆ. ಈಗ ಸಂಭ್ರಮದಿoದ ಮೈ ಮರೆತಿರುವವರು ಈ ಅನ್ಯಾಯವನ್ನು ಒಪ್ಪಿಕೊಳ್ತೀರಾ? ಹೌದೋ ಅಲ್ಲವೋ ನಿಮ್ಮ ಎದೆ ಮೇಲೆ ಕೈ ಇಟ್ಟುಕೊಂಡು ಹೇಳಿ ಎಂದು ಸೂಲಿಕುಂಟೆ ರಮೇಶ್ ಆರೋಪಿಸಿದ್ದಾರೆ.
ಈಗ ಮತ್ತೊಂದು ಅತೀ ಮುಖ್ಯ ಪ್ರಶ್ನೆ ಏನೆಂದರೇ, ಈ ೧೭% ಮೀಸಲಾತಿ ಜಾರಿ ಆಗಿದ್ದು ಯಾವಾಗ? ಜಾರಿಯೇ ಆಗದ ಮೀಸಲಾತಿ ಪ್ರಮಾಣವನ್ನು ೧೫% ಮೀಸಲಾತಿ ಪ್ರಮಾಣದ ಬದಲಾಗಿ ಹೀಗೆ ತನಗಿಷ್ಟ ಬಂದತೆ ಮಾದಿಗ ಮತ್ತು ಸಂಬoಧಿತ ಜಾತಿಗೆ ೬%, ಹೊಲೆಯ ಮತ್ತು ಸಂಬoಧಿತ ಜಾತಿಗೆ ೫.೫%, ಕೊರಮ ಕೊರಚ ಲಂಬಾಣಿ ಬೋವಿ ೪.೫%, ಮತ್ತು ಇತರರಿಗೆ ೧% ಎಂದು ೧೫ ಅನ್ನು ೧೭ಕ್ಕೆ ಹೆಚ್ಚಿಸಿ ವಿಂಗಡಿಸುವುದಾದರು ಎಲ್ಲಿ ಮತ್ತು ಹೇಗೆ. ಈಗಾಗಲೇ ಎಸ್.ಟಿ ಮೀಸಲಾತಿಯನ್ನು ೩% ನಿಂದ ೭% ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದೇ ಇನ್ನು ಜಾರಿಗೆ ಆಗಿಲ್ಲ.
ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ಅಂತಹ ಯಾವ ಪ್ರಸ್ತಾಪವೂ ನಮ್ಮ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿಬಿಟ್ಟಿದೆ. ಹಾಗೂ ಒಂದು ವೇಳೆ ಇನ್ಯಾವತ್ತಾದರೂ ಮೀಸಲಾತಿ ಪ್ರಮಾಣ ೧೫% ನಿಂದ ೧೭% ಆಗಿಯೇ ಹೋಯಿತು ಎಂದುಕೊಳ್ಳೋಣ. ಅದ್ಯಾವಾಗ ಆಗುತ್ತದೆ ಎಂದು ಮಾತ್ರ ಕೇಳಬೇಡಿ. ಮೀಸಲಾತಿಯನ್ನೇ ನಾಶ ಮಾಡಲೊರಟಿರುವ ದುಷ್ಟ ವ್ಯವಸ್ಥೆ ಇಂದು ನಮ್ಮ ನಡುವೆ ಮರೆದಾಡುತ್ತಿದೆ.
ಆದರೂ ಹೆಚ್ಚುವರಿ ೨%ಮೀಸಲಾತಿಗೂ ಮಾದಿಗರಿಗೂ ಸಂಬoಧವೇ ಇಲ್ಲ ಎಂದು ಒಪ್ಪಿಕೊಳ್ಳಬೇಕಾ? ಹೊಲೆಯರಿಗೆ ಕೇವಲ ೦.೫%ನಷ್ಟು ಹೆಚ್ಚಳ ಮಾತ್ರ ಸಾಕು ಎಂದು ಆಕಾಶ ನೋಡಬೇಕಾ? ಕೊರಮ ಕೊರಚ ಲಂಬಾಣಿ,ಭೋವಿಗಳಿಗೆ ಮಾತ್ರ ನೀಡಿರುವ, ಈಗ ಹೆಚ್ಚಿಸಲಾದ ೧.೫% ಮೀಸಲಾತಿ ಪ್ರಮಾಣವು ಅನ್ಯಾಯವೆಂದು ಹೇಳಲೇಬಾರದಾ? ಇಷ್ಟಕ್ಕೂ ಅದ್ಯಾವ ಮಾನದಂಡದ ಮೇಲೆ, ಯಾವ ವರದಿ ಅಥವಾ ವೈಜ್ಞಾನಿಕ ದೃಷ್ಟಿಕೋನದಲ್ಲಿ ಸರ್ಕಾರ ಈ ಘೋಷಣೆ ಮಾಡಿ ಶಿಫಾರಸು ಮಾಡಿದ್ದೇನೆಂದು ಸುಳ್ಳು ಹೇಳುತ್ತಿದೆ.
ಈ ಶಿಫಾರಸು ಕೇಂದ್ರದಲ್ಲಿ ಉಳಿಯುತ್ತದೆಯೇ? ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಮುಚ್ಚಿಟ್ಟುಕೊಂಡು, ವರದಿಯ ಬಗ್ಗೆ ಇಲ್ಲ ಸಲ್ಲದ ಸುಳ್ಳುಗಳನ್ನು ಹರಿಯ ಬಿಟ್ಟು, ಮೋಸ ಮಾಡುತ್ತಲೇ ಬಂದಿದ್ದ ಈ ಸರ್ಕಾರಗಳ ಪೈಕಿ ಈಗ ಚುನಾವಣೆ ಸಂದರ್ಭದಲ್ಲಿ ಶೋಷಿತರನ್ನು ಮತ್ತಷ್ಟು ಶೋಷಣೆಗೆ ಒಳಪಡಿಸಿ, ವರದಿಯನ್ನು ಮುಗಿಸುವ ಹುನ್ನಾರ ಮಾಡಿದೆ.
ಸಮುದಾಯದ ದೊಡ್ಡ ದೊಡ್ಡವರೇ ಈ ಮೋಸದ ಶಿಫಾರಸ್ಸನ್ನು ಅಪ್ಪಿಕೊಂಡು ತಮಟೆ ಬಾರಿಸುತ್ತಿದ್ದಾರೆ. ಛೇ, ಸ್ವಲ್ಪವೂ ವಿವೇಚಿಸದೆ, ತನ್ನನ್ನೇ ಹಣಿಯುತ್ತಿರುವ ಸುಳ್ಳು ಮತ್ತು ಮೋಸವನ್ನೇ ಸಂಭ್ರಮಿಸುವುದು ದುರಂತವೇ ಸರಿಯೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ಸಂಘಟನಾ ಸಂಚಾಲಕರಾದ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕರಾದ ನಾಗನಾಳ ಮುನಿಯಪ್ಪ, ಮುದುವತ್ತಿ ಕೇಶವ, ನಿನ್ನೆ ನಡೆದ ರಾಜ್ಯ ಸಚಿವ ಸಂಪುಟದ ತೀರ್ಮಾನ ಅವೈಜ್ಞಾನಿಕ ಹಾಗೂ ಸ್ವಾಗತಕ್ಕೆ ಅರ್ಹವಲ್ಲದ ತಿರ್ಮಾನವೆಂದು ಟೀಕಿಸಿದ್ದಾರೆ.