PLACE YOUR AD HERE AT LOWEST PRICE
ಬಂಗಾರಪೇಟೆ: ಪಟ್ಟಣದಲ್ಲಿ ಜೆಡಿಎಸ್ ಪಕ್ಷದವತಿಯಿಂದ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡಿದ್ದರು.
ಈ ವೇಳೆ ಅವರು ಮಾತನಾಡಿದ ನಾನು 12 ತಿಂಗಳು ಅಧಿಕಾರ ನಡೆಸಿದರೂ ಸಹ ರಾಜ್ಯದಲ್ಲಿ ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ.
ಫಸಲ್ ಭೀಮಾ ಯೋಜನೆಯಲ್ಲಿ ರೈತರನ್ನು ವಂಚಿಸಿರುವುದು ಇಡೀ ರಾಜ್ಯಕ್ಕೆ ತಿಳಿದಿದೆ. ಅಧಿಕಾರದಲ್ಲಿ ಇದ್ದಷ್ಟು ದಿನ ಬಿಜೆಪಿಯವರು ರಾಜ್ಯವನ್ನು ಲೂಟಿ ಹೊಡೆದಿದ್ದೇ ಅವರ ಸಾಧನೆಯಾಗಿದೆ ಎಂದರು.
ಬಿಜೆಪಿಯವರು ಯಾವ ಸಾಧನೆಗಳನ್ನು ಮುಂದಿಟ್ಟು ಜನರ ಮುಂದೆ ಹೋಗಿ ಮತ ಕೇಳುತ್ತಾರೆ? ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದು ಟಾಟಾ ಮಾಡಿ ಹೋಗುತ್ತಾರೆ ಎಂದರು.
ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯಕ್ಕೆ ಯಾರೂ ಬೆದರುವುದಿಲ್ಲ, ನಮ್ಮ ಕಾರ್ಯಕರ್ತರು ಸದೃಢವಾಗಿದ್ದಾರೆ. ಯಾರು ದಾಳಿ ಮಾಡಿದರೂ ಏನೂ ಮಾಡಲು ಆಗುವುದಿಲ್ಲ. ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ.
ಜನರು 123 ಕ್ಷೇತ್ರಗಳಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ಮಲ್ಲೇಶ್ಬಾಬು ಮಾತನಾಡಿ, ಈ ಬಾರಿ ಆಡಳಿತ ಪಕ್ಷದ ಶಾಸಕರ ವಿರೋಧಿ ಅಲೆ ಹೆಚ್ಚಾಗಿದ್ದು ಕ್ಷೇತ್ರದ ಜನ ಪರಿವರ್ತನೆಯನ್ನು ಬಯಸುತ್ತಿದ್ದಾರೆ. ನಾನು 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ಸಹ ಹತಾಶನಾಗದೆ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡಿದ್ದೇನೆ.
ಕರೋನ ಸಂಕಷ್ಟದ ಸಮಯದಲ್ಲಿ ಔಷಧಿ, ಆಂಬುಲೆನ್ಸ್, ಆಹಾರದ ಕಿಟ್ಟುಗಳನ್ನು ಒದಗಿಸಿದ್ದೇನೆ, ಪ್ರಸಕ್ತ ಚುನಾವಣೆಯ ಪ್ರಣಾಳಿಕೆಯಲ್ಲಿನ ಪಂಚರತ್ನ ಯೋಜನೆಗಳು ಜನಮನಗಳಿಗೆ ಸ್ಪಂದಿಸುವುದರೊಂದಿಗೆ ಸಾರ್ವಜನಿಕರು ಸಕಾರಾತ್ಮಕ ಬೆಂಬಲವನ್ನು ಸೂಚಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಮಾಜಿ ಶಾಸಕ ಸಿ.ವೆಂಕಟೇಶಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ರಾಮಚಂದ್ರಪ್ಪ. ಕೆಎಂಎಫ್ ನಿರ್ದೇಶಕರಾದ ವಡಗೂರು ಹರೀಶ್, ರಾಮು, ತಾಲ್ಲೂಕು ಅಧ್ಯಕ್ಷ ಮುನಿರಾಜು, ಸಿರಾಜ್, ಶ್ರೀರಾಮ್, ಗುಟ್ಟಹಳ್ಳಿ ಮಂಜುನಾಥ್, ಹನುಮಂತು, ಚಂದ್ರು, ಬೆಟ್ಟೇಗೌಡ, ವಿಶ್ವನಾಥ್, ಗೋವಿಂದ, ಮೊದಲಾದವರಿದ್ದರು.