PLACE YOUR AD HERE AT LOWEST PRICE
ಶ್ರೀನಿವಾಸಪುರ:ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪುನರಾರಂಭವಾಗಿದೆ. ಆದರೆ ಇಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ಅಧಿಕಾರಿಗಳು ಬೀದಿ ಪಾಲಾಗಿ, ತಾಲೂಕಿನ ಮೊಗಲಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಶಾಲಾ ಕೊಠಡಿಗಳಿಲ್ಲದೆ ಒಂದು ವರ್ಷದಿಂದ ದೇವಾಲಯ ಮತ್ತು ಅಂಬೇಡ್ಕರ್ ಭವನದಲ್ಲಿ ಪಾಠ ಕೇಳುವಂತಾಗಿದೆ.
ಮೊಗಲಹಳ್ಳಿ ಸರ್ಕಾರಿ ಶಾಲೆಯ ಅವ್ಯವಸ್ಥೆ ಇದಾಗಿದ್ದು, ಶಾಲಾ ಕೊಠಡಿ ಬಿದ್ದು ಒಂದು ವರ್ಷ ಕಳೆದರೂ ಸಹ ಕಟ್ಟಡ ನಿರ್ಮಾಣ ಮಾಡುವುದರಲ್ಲಿ ಅಧಿಕಾರಗಳು ವಿಫಲವಾಗಿದ್ದು, ಮಕ್ಕಳ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು, ಪೋಷಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಮಕ್ಕಳೆಂದರೆ ಅಧಿಕಾರಿಗಳಿಗೆ ನಿರ್ಲಕ್ಷವೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಸರ್ಕಾರಿ ಮಕ್ಕಳ ಪರಿಸ್ಥಿತಿ ಕೇಳುವವರೇ ಇಲ್ಲವೇ….? ಎಂಬಂತೆ ಆಗಿದೆ. ಸರ್ಕಾರದಿಂದ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ.
ಈ ಹಿಂದೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 30ಲಕ್ಷ ಅನುದಾನ ಬಿಡುಗಡೆ ಆಗಿದೆ. ಅನುದಾನ ಬಿಡುಗಡೆಯಾದರೂ ಕಟ್ಟಡ ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಯಾಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಶಾಸಕರೇ ಒಮ್ಮೆ ಈ ಕಡೆ ಗಮನಹರಿಸಿ ಶೀಘ್ರವೇ ಶಾಲಾ ಕಟ್ಟಡ ನಿರ್ಮಿಸಲು ಸಹಕರಿಸಿ ಎಂದು ಮನವಿ ಮಾಡಿರುವ ಗ್ರಾಮಸ್ಥರು ಈ ಕೂಡಲೇ ಶಾಲೆಯ ಕಟ್ಟಡವನ್ನು ನಿರ್ಮಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಮಾಡಿದ್ದಾರೆ.