• Sat. Apr 27th, 2024

PLACE YOUR AD HERE AT LOWEST PRICE

ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ

ಕೋಲಾರ,ಜ.೨೫: ಪರಿಶಿಷ್ಟ ಜಾತಿಗೆ ಸೇರಿದವನೆಂದು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಮೀಸಲು ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕ ಕೊತ್ತೂರು ಮಂಜುನಾಥ್ ಅವರ ಶಾಸಕ ಸ್ಥಾನ ರದ್ದುಪಡಿಸುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಮುಖಂಡ ಭಾರತೀಯ ದಲಿತ ಸೇನೆ ರಾಜ್ಯಾಧ್ಯಕ್ಷ ದಲಿತ್ ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಕೊತ್ತೂರು ಮಂಜುನಾಥ್ ರವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಶಾಸಕರಾಗಿರುವುದು ಹೈಕೋರ್ಟ್ ರುಜುವಾತು ಪಡಿಸಿದ್ದು, ಇವರ ಮೇಲೆ ಸರ್ಕಾರ ಕ್ರಮ ಜರುಗಿಸಲು ಸಹ ಆದೇಶ ನೀಡಿರುತ್ತದೆ. ಆದರೆ, ರಾಜ್ಯ ಸರ್ಕಾರ ಕೊತ್ತೂರು ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಹೈಕೋರ್ಟ್ ಆದೇಶದಂತೆ ಕೊತ್ತೂರು ಮಂಜುನಾಥ್ ಅವರ ಮೇಲೆ ಕ್ರಮ ಜರುಗಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಾರಂಭವಾದ ಈ ಹೋರಾಟವನ್ನು ರಾಜ್ಯ ವ್ಯಾಪ್ತಿಯಲ್ಲಿ ವಿಸ್ತರಿಸಲಾಗುವುದು ಹಾಗೂ ಕೋಲಾರದಿಂದ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾಲ್ನಡಿಗೆ ಜಾಥಾ ನಡೆಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ದಲಿತ ಸಿಂಹ ಸೇನೆ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್ ಮಾತನಾಡಿ, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹಾಲಿ ಶಾಸಕ ಕೊತ್ತೂರು ಮಂಜುನಾಥ್ ರವರು ಪರಿಶಿಷ್ಟ ಜಾತಿಯ ಬುಡಗ ಜಂಗಮ ಜಾತಿಗೆ ಸೇರಿದವರೆಲ್ಲವೆಂದು ಮತ್ತು ಇವರು ಹಿಂದುಳಿದ ವರ್ಗದ ಬೈರಾಗಿ ಜಾತಿಗೆ ಸೇರಿದವರೆಂದು ಸಾಕ್ಷಾಧಾರಗಳಿಂದ ದೃಢಪಟ್ಟಿದ್ದು, ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದ ಜಾತಿ ಪ್ರಮಾಣ ಪತ್ರವೂ ನಕಲಿ ಜಾತಿ ಪ್ರಮಾಣ ಪತ್ರವಾಗಿರುತ್ತದೆ ಎಂದು ಸದರಿ ಪ್ರಕರಣವನ್ನು ಇತ್ಯರ್ಥಗೊಳಿಸಿ, ಸೂಕ್ತ ಕಾನೂನು ಕ್ರಮಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುತ್ತಾರೆ. ನ್ಯಾಯಾಲಯದ ಆದೇಶದಂತೆ ಕೊತ್ತೂರು ಮಂಜುನಾಥ್ ರವರ ಮೇಲೆ ಸರ್ಕಾರ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.

ದಲಿತ ಹೋರಾಟಗಾರರನ್ನು ತಾನು ತೊಡುವ ೫೦ ಸಾವಿರ ಬೆಲೆಯ ಲೇಲೇಕರ್ ಶೂ ಗೆ ಹೋಲಿಸಿ ಯೋಗ್ಯತೆ ಇಲ್ಲದ ಜುಟ್ಟುಗಳ ಬಗ್ಗೆ ಮಾತಾಡುವುದಿಲ್ಲವೆಂದಿದ್ದ ಕೊತ್ತೂರು ಮಂಜುನಾಥ್ ರವರಿಗೆ ಸೋಲಾಗಿದ್ದು, ನ್ಯಾಯಾಲಯದ ಆದೇಶದಿಂದ ಕರ್ನಾಟಕ ದಲಿತ ಸಂಘಟನೆಗಳ ಮತ್ತು ದಲಿತ ಸಮುದಾಯಕ್ಕೆ ಸಿಕ್ಕ ಜಯವೆಂದು ನಾವು ಹರ್ಷಿಸುತ್ತೇವೆಂದ ಅವರು, ಕೊತ್ತೂರು ಮಂಜುನಾಥ್ ಅವರಿಗೆ ಘನತೆ, ಗೌರವ, ನೈತಿಕತೆ ಇದ್ದರೆ ದಲಿತರಿಗೆ ಮೋಸ ಮಾಡಿದ್ದೇನೆಂಬ ಪಾಪ ಪ್ರಜ್ಞೆ ಕಾಡುತ್ತಿದ್ದರೆ ಹಾಗೂ ಸಂವಿಧಾನ ಮತ್ತು ಡಾಕ್ಟರ್ ಬಿ.ಆರ್ .ಅಂಬೇಡ್ಕರ್ ಅವರ ಮೇಲೆ ಗೌರವವಿದ್ದರೆ ತಕ್ಷಣ ರಾಜೀನಾಮೆ ನೀಡಿಬೇಕೆಂದು ಅವರು ಆಗ್ರಹಿಸಿದರು.

ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಮತ್ತು ದಲಿತ ನಾಯಕರಾದ ಗೃಹ ಮಂತ್ರಿಗಳಿಗೆ ಸಂವಿಧಾನ ಮತ್ತು ಡಾಕ್ಟರ್ ಬಿ.ಆರ್ .ಅಂಬೇಡ್ಕರ್ ಅವರ ಮೇಲೆ ಗೌರವವಿದ್ದರೆ ದಲಿತರ ಜಾತಿಯ ಹಕ್ಕನ್ನು ದುರುಪಯೋಗ ಪಡೆದು ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ೨೦೧೩ ರಲ್ಲಿ ಶಾಸಕರಾಗಿದ್ದ ಕೊತ್ತೂರು ಮಂಜುನಾಥ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಶಾಸಕ ಸ್ಥಾನವನ್ನು ರದ್ದುಪಡಿಸಿ, ಇವರ ಮೇಲೆ ಅಟ್ರಾಸಿಟಿ ಅಡಿಯಲ್ಲಿ ದಲಿತರಿಗೆ ಮೋಸ ಮಾಡಿದ್ದಾರೆಂದು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾದಿಗ ದಂಡೋರ ಮುಖಂಡ ಸಾಹುಕಾರ್ ಶಂಕರಪ್ಪ, ಶ್ರೀನಿವಾಸಪುರ ಸದಾಶಿವ, ಹನುಮಾನ್, ಅರುಣಾಂಜಯ್ಯ ಉಪಸ್ಥಿತರದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!