PLACE YOUR AD HERE AT LOWEST PRICE
ರೈತರು, ಕಾರ್ಮಿಕರು ಸೇರಿದಂತೆ ದೇಶದ ಬಹುತೇಕ ಜನರನ್ನು ಬಾದಿಸುತ್ತಿದ್ದ ಬೆಲೆ ಏರಿಕೆ, ನಿರುದ್ಯೋಗ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಕನಿಷ್ಠ ವೇತನ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ನೀಡಲು ಯಾವುದೇ ಪ್ರಯತ್ನ ನಡೆಸಿಲ್ಲ. ಮಾದ್ಯಮ ಮತ್ತು ಬಡ ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ, ಕಾರ್ಪೋರೇಟ್ ಕಂಪನಿಗಳ ತಿಜೋರಿಯನ್ನು ತುಂಬಿಸುವ ಬಜೆಟ್ ಆಗಿದೆ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ವಿಶ್ಲೇಷಿಸಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಸರ್ಕಾರದ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೆರಿದ್ದು, ಇವುಗಳ ನಿಯಂತ್ರಣ ಮಾಡಲು ಯಾವುದೇ ಪ್ರಯತ್ನ ನಡೆಸಿಲ್ಲ. ಇದರಿಂದ ಜನಸಾಮಾನ್ಯರ ಬದುಕು ಇನ್ನಷ್ಟು ದುರ್ಬಲವಾಗಲಿದೆ. ಜೊತೆಗೆ ಗ್ರಾಮೀಣ ಪ್ರದೇಶದ ರೈತರಿಗೆ ಮತ್ತು ಕೂಲಿಕಾರರಿಗೆ ವರದಾನವಾಗಿದ್ದ ಉದ್ಯೋಗ ಖಾತ್ರಿ ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ಶೇ.೩೩ ರಷ್ಟು ಕಡಿಮೆ ಮಾಡಿದೆ. ಈ ಯೋಜನೆಯನ್ನು ನಗರ ಪ್ರದೇಶಕ್ಕೆ ವಿಸ್ತರಣೆ ಮಾಡುವುದು, ಕೂಲಿಯನ್ನು ಹೆಚ್ಚಳ ಮಾಡುವುದು, ಕೆಲಸವನ್ನು ೨೦೦ ದಿನಗಳಿಗೆ ಏರಿಕೆ ಮಾಡಬೇಕೆಂಬ ಬಹುದಿನದ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.
ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯಾವುದೇ ಯೋಜನೆಯನ್ನು ಪ್ರಕಟಿಸಿಲ್ಲ. ರೈಲ್ವೆ ಕೋಚ್ ಪ್ಯಾಕ್ಟರಿ, ರೈಲ್ವೆ ವರ್ಕ್ಶಾಪ್, ರೈಲ್ವೆ ಮಾರ್ಗಗಳು, ಹೆದ್ದಾರಿಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವುದೇ ಘೋಷಣೆಗಳು ಆಗಿಲ್ಲ. ಕೋಲಾರ ಜಿಲ್ಲೆ ಸೇರಿದಂದೆ ಇಡೀ ಕರ್ನಾಟಕ ರಾಜ್ಯವನ್ನು ಬಿಜೆಪಿ ಸರ್ಕಾರ ಕಡೆಗಣಿಸಿದೆ ಎಂದು ದೂರಿದ್ದಾರೆ.
ಇನ್ನೂ ರೈತರು ಬೆಳೆದ ಬೆಳೆಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಬೆಂಬಲ ಬೆಲೆ ನೀಡುವ ಬಗ್ಗೆ ಚಕಾರವಿಲ್ಲ. ಈಗಿನ ಬೆಲೆ ಏರಿಕೆಗೆ ತಕ್ಕಂತೆ ಕನಿಷ್ಠ ವೇತನ ಹೆಚ್ಚಳ ಬಗ್ಗೆ ಪ್ರಸ್ತಾಪ ಇಲ್ಲ. ಶಿಕ್ಷಣ, ಆರೋಗ್ಯ, ಸೂರು ಇಲ್ಲದವರಿಗೆ ಮನೆ ನಿವೇಶನ ನೀಡಲು, ನಗರಾಭಿವೃದ್ಧಿಗೆ ಕಡಿಮೆ ಅನುದಾನವನ್ನು ನೀಡಲಾಗಿದೆ. ಇದರಿಂದ ಬಡವ ಇನ್ನಷ್ಟು ಹೆಚ್ಚಿನ ಹಣ ಖರ್ಚು ಮಾಡಿ ಜೀವನ ನಡೆಸುವಂತ ಪರಿಸ್ಥಿತಿಯನ್ನು ನಿರ್ಮಾಣ ಮಾಡುವಂತ ಬಜೆಟ್ ಮಂಡಿಸಿದ್ದಾರೆ. ಆದ್ದರಿಂದ ರೈತರು ಮತ್ತು ಕಾರ್ಮಿಕರ ಅಭಿವೃದ್ಧಿಗೆ ಪೂರಕ ಬಜೆಟ್ಅನ್ನು ಮಂಡಿಸಬೇಕೆಂದು ಒತ್ತಾಯಿಸಿದ್ದಾರೆ.